ಐಟಿ ಕಂಪನಿ, ಮೂರು ಮನೆಗಳಲ್ಲಿ ಕಳ್ಳರ ಕೈಚಳಕ

ಬನಶಂಕರಿ ಎರಡನೇ ಹಂತದ ಸಾಫ್ಟ್ವೇರ್ ಕಂಪನಿಯೊಂದರಿಂದ 7 ಲ್ಯಾಪ್ ಟಾಪ್ ಗಳನ್ನು ಕಳ್ಳರು ದೋಚಿರುವ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆಫೀಸಿನ ಒಂದು ಕೋಣೆಗೆ ಮಾತ್ರ ನುಗ್ಗಲು ಕಳ್ಳರು ಸಫಲರಾಗಿದ್ದು, ಅಲ್ಲಿದ್ದ ಲ್ಯಾಪ್ ಟಾಪ್ ಅವರ ಪಾಲಾಗಿದೆ.
ಭಾನುವಾರ ಬೆಳಗ್ಗೆ ಕಚೇರಿಯ ಭದ್ರತಾ ಸಿಬ್ಬಂದಿ ಬನಶಂಕರಿ ಪೊಲೀಸರಿಗೆ ಕಳ್ಳತನದ ಕುರಿತು ಮಾಹಿತಿ ನೀಡಿದ್ದಾರೆ. ಕಚೇರಿಯ ಕಿಟಕಿ ಸರಳುಗಳನ್ನು ಕತ್ತರಿಸಿ, ಒಳನುಗ್ಗಿರುವ ಕಳ್ಳರು ಒಂದು ಕೋಣೆಯಲ್ಲಿದ್ದ 7 ಲ್ಯಾಪ್ ಟಾಪ್ ಕದ್ದಿದ್ದಾರೆ.
ಒಂದು ಲಕ್ಷ ದರೋಡೆ : ರಾಜೇಶ್ವರಿ ನಗರ ಬಡಾವಣೆಯ ನಾಗರಾಜ್ ಎಂಬುವವರು ಪ್ರವಾಸ ಹೋಗಿದ್ದಾಗ, ಅವರ ಮನೆಗೆ ನುಗ್ಗಿದ ಕಳ್ಳರು ಒಂದು ಲಕ್ಷ ಬೆಲೆ ಬಾಳುವ ಒಡವೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದಾರೆ. ಭಾನುವಾರ ಪ್ರಕರಣ ಬೆಳಕಿಗೆ ಬಂದಿದ್ದು, ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದು ಲಕ್ಷದ ಆಭರಣ ಕಳ್ಳರ ಪಾಲು : ಭವಾನಿ ನಗರದ ಮೂರ್ತಿ ಎಂಬುವವರ ಮನೆಯಲ್ಲಿ ಒಂದು ಲಕ್ಷ ರೂ.ಗಳ ಒಡವೆಗಳನ್ನು ಕದ್ದಿರುವುದು ಭಾನುವಾರ ಸಂಜೆ ಬೆಳಕಿಗೆ ಬಂದಿದೆ. ಒಬ್ಬಂಟಿಯಾಗಿ ವಾಸಿಸುತ್ತಿದ್ದ ಅವರು ರಜೆ ದೊರಕಿದ್ದರಿಂದ ಪ್ರವಾಸ ಹೋಗಿದ್ದರು. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾದೇವಪುರ : ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರಂಜನ್ ಎಂಬುವವರ ಮನೆಗೆ ಶನಿವಾರ ನುಗ್ಗಿರುವ ಕಳ್ಳರು 75 ಸಾವಿರ ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಭಾನುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಾಗಿದೆ.
ಕಳೆದವಾರದ ರಜೆಯಲ್ಲಿ ನಗರದ 7 ಕಡೆ ಕಳ್ಳತನ ಪ್ರಕರಣಗಳು ನಡೆದಿದ್ದವು. ಈ ವಾರದ ರಜೆಯಲ್ಲಿ ನಾಲ್ಕು ಕಡೆ ಕಳ್ಳರು ಕೈ ಚಳಕ ತೋರಿದ್ದಾರೆ. ಕಳ್ಳರನ್ನು ಹಿಡಿಯುವ ಕಾರ್ಯಾಚರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ. (ಸಾಲು-ಸಾಲು ರಜೆ ಜನರಿಗೆ, ಚಿನ್ನಾಭರಣ ಕಳ್ಳರಿಗೆ!)












Click it and Unblock the Notifications