ವೀಕೆಂಡ್ ಮೋಜು: ವೃಷಭಾವತಿ ನಾಲೆಗೆ ಇಬ್ಬರು ಆಹುತಿ

ನಾಲೆಗೆ ಅಡ್ಡಲಾಗಿರುವ ರಾಜಕಾಲುವೆಗೆ ಸದರಿ ಕಾರು ಮಗುಚಿಬಿದ್ದ ಪರಿಣಾಮ ವಿಜಯನಗರದ ಸುಬ್ಬಣ್ಣ ಗಾರ್ಡನ್ ನಿವಾಸಿ ಚೇತನ್ ಚವ್ಹಾಣ್ ಅಲಿಯಾಸ್ ಮನು( 28) ಮತ್ತು ಜೀವನ್ (28) ಮೃತಪಟ್ಟಿದ್ದಾರೆ. ಶರತ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಾರೂಕ್ ಎಂಬಾತ ಅಪಾಯದಿಂದ ಪಾರಾಗಿದ್ದಾನೆ.
ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಜೀವನ್ ಗೆ 2 ವರ್ಷದ ಮಗಳು ಇದ್ದಾಳೆ. ಜೀವನ್ ಆರ್ಕೆಸ್ಟ್ರಾ ಸಿಂಗರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ವಲಯದ ಸಂಚಾರ ಡಿಸಿಪಿ ಎಸ್ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
'ಜೀವನ್ ಅಣ್ಣ ಗೋವರ್ಧನ್ 1 ವರ್ಷದ ಹಿಂದೆ ಹೃದಯಾಘಾತದಿಂದ ತೀರಿಕೊಂಡಿದ್ದರು. ಘಟನೆ ನಡೆದಾಗ ಜೀವನ್ ಕುಡಿದಿರಲಿಲ್ಲ. ಅವನು ಆರ್ಕೆಸ್ಟ್ರಾ ಪ್ರೋಗ್ರಾಂಗೆ ಹೋಗುತ್ತಿದ್ದ. ಆರ್ಕೆಸ್ಟ್ರಾ ಇದ್ದಾಗ ಜೀವನ್ ಕುಡಿಯುವುದಿಲ್ಲ. ಅವನ ಮಗಳ ಹುಟ್ಟುಹಬ್ಬ ಆಗಸ್ಟ್ 22ರಂದು ಇದೆ. ಅದನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಿದ್ದ. ಆದರೆ ವಿಧಿ ಅವನ್ನು ಕರೆದೊಯ್ದಿದೆ' ಎಂದು ಜೀವನ್ ಅವರ ಅಪ್ಪ, ಸಂಗೀತ ನಿರ್ದೇಶಕ ಕೃಷ್ಣಸ್ವಾಮಿ ತಿಳಿಸಿದ್ದಾರೆ.
ಏನಾಯ್ತು, ಹೇಗಾಯ್ತು?
ವಾರದ ರಜೆ ಹಿನ್ನೆಲೆಯಲ್ಲಿ ಚೇತನ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಬೆಂಗಳೂರು ಸುತ್ತಲು ಟಾಟಾ ಇಂಡಿಕಾ ಕಾರಿನಲ್ಲಿ ತೆರಳಿದ್ದರು. ನಾಲ್ವರೂ ಕುಡಿತದ ಅಮಲು ಏರಿಸಿಕೊಂಡಿದ್ದರು. ರಾತ್ರಿ 7 ಗಂಟೆಯಲ್ಲಿ ಸುಮನಹಳ್ಳಿ ಜಂಕ್ಷನ್ ನಿಂದ ಮಾಳಗಾಳ ಮಾರ್ಗವಾಗಿ ತೆರಳುತ್ತಿದ್ದರು.
ಚೇತನ್ ಕಾರು ಚಾಲನೆ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿ ಸರ್ವೀಸ್ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸುತ್ತಿದ್ದಾಗ, ಮಾಳಗಾಳ ಸಮೀಪ ಕಾರಿಗೆ ರಸ್ತೆ ತಡೆಗಳು ಎದುರಾಗಿವೆ. ಎಡಕ್ಕೆ ತಿರುವು ಪಡೆಯುವ ಕ್ಷಣದಲ್ಲಿ ನಿಯಂತ್ರಣ ಕಳೆದುಕೊಂಡ ಟಾಟಾ ಇಂಡಿಕಾ ಕಾರು ವೃಷಭಾವತಿ ನಾಲೆಗೆ ಮಗುಚಿ ಬಿದ್ದಿದೆ. ಚೇತನ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಜೀವನ್ ಸ್ಥಳೀಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.












Click it and Unblock the Notifications