ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನ ಹೆಗಲಿಗೆ

ಅರಣ್ಯ ಇಲಾಖೆ ದಸರಾದಲ್ಲಿ ಪಾಲ್ಗೊಳ್ಳುವ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಒಟ್ಟು 14 ಆನೆಗಳು ಈ ಬಾರಿ ದಸರಾದಲ್ಲಿ ಭಾಗವಹಿಸಲಿವೆ. ಅ.14ರ ವಿಜಯದಶಮಿಯಂದು 750 ಕೆ.ಜಿ ತೂಕದ ಅಂಬಾರಿಯನ್ನು ಅರ್ಜುನ ಹೊರಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ದಶಕಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದ ಕಾಂತಿ (76) ಆನೆಗೆ ಈ ಬಾರಿ ಸ್ವಯಂ ನಿವೃತ್ತಿ ಘೋಷಿಸಲಾಗಿದೆ. ಕಾಂತಿ ಸ್ಥಾನಕ್ಕೆ ಗೋಪಿ (26) ಎಂಬ ಆನೆ ಆಗಮಿಸಲಿದೆ. ಗೋಪಿ ಮೊದಲಬಾರಿಗೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದೆ.
ಈ ಬಾರಿಯ ದಸರಾ ಮಹೋತ್ಸವಕ್ಕೆ ಮಂಗಳೂರಿನ ಪಿಲಿಕೊಳ ಆನೆ ಶಿಬಿರದಿಂದ ದುರ್ಗಾ ಪರಮೇಶ್ವರಿ ಎಂಬ ಆನೆ ಆಗಮಿಸುತ್ತಿದೆ. ಬಂಡೀಪುರ ಆನೆ ಶಿಬಿರದ ಯಾವ ಆನೆಗಳೂ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದು ವಿಶೇಷ.
ಆ.28ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಮೊದಲ ಬ್ಯಾಚ್ನ 6 ಆನೆಗಳು ಮೈಸೂರಿಗೆ ಆಗಮಿಸಲಿವೆ. ಅರಮನೆಯಲ್ಲಿ ಅಧಿಕೃತವಾಗಿ ಆ.30ರಂದು ಗಜಪೂಜೆ ನೆರವೇರಿಸಿ, ನಂತರ ಆನೆಗಳಿಗೆ ತಾಲೀಮು ನೀಡುವ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಚಂದ್ರಶೇಖರ ಕಂಬಾರರಿಂದ ದಸರಾ ಉದ್ಘಾಟನೆ)
ಒಟ್ಟು 15 ಆನೆ : ಜಂಬೂ ಸವಾರಿಯಲ್ಲಿ 14 ಆನೆಗಳು ಹೆಜ್ಜೆ ಹಾಕಲಿವೆ ಆದರೆ, ಒಟ್ಟು 15 ಆನೆಗಳನ್ನು ಕರೆಸಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಯಾವುದೇ ಆನೆ ಸವಾರಿಯಲ್ಲಿ ಪಾಲ್ಗೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾದರೆ, ಬದಲಿ ಆನೆಯನ್ನು ಬಳಸಿಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ.
ಅಂಬಾರಿ ಹೊರುವ ಆನೆ ಅರ್ಜುನನ ಆರೋಗ್ಯದಲ್ಲಿ ಏರುಪೇರು ಉಂಟಾದರೆ, ಬದಲಿ ವ್ಯವಸ್ಥೆಯಾಗಿ ಗಜೇಂದ್ರ, ಬಲರಾಮ ಮತ್ತು ಅಭಿಮನ್ಯು ಆನೆಗಳಿಗೂ ಅಂಬಾರಿ ಹೊರುವ ತಾಲೀಮು ನೀಡಲು ತೀರ್ಮಾನಿಸಲಾಗಿದೆ.
ಕಳೆದ ವರ್ಷದ ಜಂಬೂ ಸವಾರಿಯಲ್ಲಿ ಹೆರಿಗೆ ರಜೆ ಮೇಲೆ ತೆರಳಿದ್ದ ಸರಳ ಮತ್ತು ವರಲಕ್ಷ್ಮಿ ಆನೆಗಳು ಈ ಬಾರಿಯ ಜಂಬೂ ಸವಾರಿಯ ತಂಡವನ್ನು ಸೇರಿಕೊಳ್ಳಲಿವೆ. ಒಟ್ಟು ಒಂಬತ್ತು ಗಂಡು ಮತ್ತು ಆರು ಹೆಣ್ಣಾನೆಗಳು ಮೈಸೂರಿಗೆ ಆಗಮಿಸಲಿವೆ.












Click it and Unblock the Notifications