ಬೆಂಗಳೂರಿಗೆ ಬರಲಿವೆ 2000 ಹೊಸ ಬಸ್
ನವದೆಹಲಿ, ಆ.16 : ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ನರ್ಮ್ ಯೋಜನೆಯಡಿ ಹತ್ತು ಸಾವಿರ ಬಸ್ ಗಳನ್ನು ಖರೀದಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರ ಅನ್ವಯ ಕರ್ನಾಟಕಕ್ಕೆ 2000 ಬಸ್ ಗಳು ದೊರೆಯಲಿವೆ.
ಗುರುವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ ಅಡಿ (ನರ್ಮ್) 10,000 ಬಸ್ ಖರೀದಿಗೆ ಅನುಮೋದನೆ ದೊರೆತಿದೆ. ಇದರ ಅನ್ವಯ ಬೆಂಗಳೂರಿಗೆ ಹೆಚ್ಚಿನ ಬಸ್ ಗಳು ದೊರೆಯಲಿದೆ.

ದೇಶದ 22 ನಗರಗಳ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಸರ್ಕಾರ 6,300 ಕೋಟಿ ರೂ. ನಿಗದಿ ಪಡಿಸಿತ್ತು. ಇದರಲ್ಲಿ 4,400 ಕೋಟಿ ರೂ.ಗಳನ್ನು ಬಳಸಿಕೊಂಡು 10,000 ಬಸ್ ಖರೀದಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ನರ್ಮ್ ಯೋಜನೆಯಡಿ ಬಸ್ ಖರೀದಿಗಾಗಿ ಪ್ರಾಥಮಿಕವಾಗಿ ಬೇಡಿಕೆ ಸಲ್ಲಿಸಿದ್ದರಿಂದ ಈ ಮೂರು ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅದರಲ್ಲೂ ಕರ್ನಾಟಕಕ್ಕೆ ಹೆಚ್ಚಿನ ಲಾಭವಾಗಿದ್ದು ಎರಡು ಸಾವಿರ ಬಸ್ ಗಳು ದೊರೆಯುತ್ತಿವೆ.
ಕರ್ನಾಟಕ ಬೆಂಗಳೂರಿನ ಸಾರಿಗೆ ಸಂಚಾರ ಅಭಿವೃದ್ದಿಪಡಿಸಲು 2000 ಬಸ್ ಗಳಿಗೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಬಸ್ ಖರೀದಿಗೆ ಅನುದಾನ ನೀಡುವುದಾಗಿ ಘೋಷಿಸಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೂ ಯೋಜನೆ ಅನ್ವಯ ಬಸ್ ಗಳು ದೊರೆಯಲಿವೆ.
ಆಂಧ್ರಪ್ರದೇಶ ಹೈದರಾಬಾದ್ ನಗರಕ್ಕೆ 918, ವಿಶಾಖಪಟ್ಟಣಂ ಗೆ 202 ಮತ್ತು ವಿಜಯವಾಡಕ್ಕೆ 151 ಬಸ್ ಗಳನ್ನು ಪಡೆಯಲಿದೆ. ತಮಿಳುನಾಡು ರಾಜ್ಯವೂ 1,064 ಬಸ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.












Click it and Unblock the Notifications