ಕೆಜೆಪಿ ಶಾಸಕರು ಪಕ್ಷ ಬಿಟ್ಟಿಲ್ಲ: ಯಡಿಯೂರಪ್ಪ ಸ್ಪಷ್ಟನೆ
ಮೈಸೂರು, ಆಗಸ್ಟ್ 13: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳುವ ವಿಚಾರದಲ್ಲಿ ಅದೇನೇನು ನಡೆಯುತ್ತಿದೆಯೋ ಆ ಚಾಮುಂಡಿ ತಾಯಿಗೂ ಗೊತ್ತಾಗುತ್ತಿಲ್ಲ. ಇನ್ನು ಕರ್ನಾಟಕದ ಮಹಾಜನತೆಗೆ ಏನು ಗೊತ್ತಾಗಬೇಕು?
ಆದರೂ ಒಂದಷ್ಟು ತಾಜಾ ಬೆಳವಣಿಗೆಗಳನ್ನು ಯಥಾವತ್ತಾಗಿ ದಾಖಲಿಸುವುದಾದರೆ ಅತಿ ಶೀಘ್ರವೇ ಯಡಿಯೂರಪ್ಪನೋರು ಬಿಜೆಪಿಗೆ ಮರಳುವುದು ಖಚಿತ ಅಂತ ಇಬ್ಬರು ಮಾಜಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಈ ಮಧ್ಯೆ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜತೆ ಯಡಿಯೂರಪ್ನೋರು ನಿನ್ನೆ 'ಕುಚಿಕ್ಕು ಕುಚಿಕ್ಕು ಕುಚಿಕ್ಕು... ನಮ್ದು ಕುರ್ಚಿ ದೋಸ್ತಿ ಕಣೋ ಕುಚಿಕ್ಕು' ಎಂದು ಮಂಡ್ಯದಲ್ಲಿದ್ದ ಅಂಬಿಗೆ ಕೇಳಿಸುವಂತೆ ಮೈಸೂರಿನಲ್ಲಿ ಹಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲ. ಯುವ್ವಳ ಗೀತೆ ಹಾಡಿಮುಗಿಸುತ್ತಿದ್ದಂತೆ 'ಏನು ಸ್ವಾಮಿ ಇದೆಲ್ಲಾ ಹೀಗೆ ಇಷ್ಟೊಂದು ಬಹಿರಂಗವಾಗಿ ಹಾರ ಹಾಕಿಸಿಕೊಂಡಿದ್ದೀರಿ?' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೇಳಲಾಗಿ ಮುಗುಳ್ನಕ್ಕ ಜೆಡಿಎಸ್ ಅಧಿನಾಯಕ 'ನೋಡ್ತಾಯಿರಿ. ಮುಂದೆ ನಿಮಗೆ ಇನ್ನೂ ಸರ್ಪ್ರೈಸ್ ಇದಾವೆ' ಅಂದಿದ್ದಾರೆ.
ಇದೇ ವೇಳೆ, ಯಡಿಯೂರಪ್ನೋರೇ ನೀವು ಬಿಜೆಪಿಗೆ ವಾಪಸಾಗೋದು ಎಲ್ಲಿಗಂಟ ಬಂತು ಅಂದಿದ್ದಕ್ಕೆ 'ನಾನು ಯಾರ ಮುಂದೆಯೂ ಪಕ್ಷ ಸೇರ್ಪಡೆಗೆ ಅರ್ಜಿ ಸಲ್ಲಿಸಿಲ್ಲ. ನನ್ನ ಮುಂದಿನ ರಾಜಕೀಯ ಹಾದಿ ಬಗ್ಗೆ ಸೆಪ್ಟೆಂಬರ್ನಲ್ಲಿ ತೀರ್ಮಾನ ತೆಗೆದುಕೊಳ್ಳುವೆ ಎಂದು ಸ್ಪಷ್ಟೀಕರಣ ರೂಪದಲ್ಲಿ ಹೇಳಿದ್ದಾರೆ. ಜತೆಗೆ ಮುಖ್ಯವಾಗಿ, ಕೆಜೆಪಿ ಪಕ್ಷದ ಎಲ್ಲಾ ಶಾಸಕರು ನಮ್ಮೊಂದಿಗೇ ಇದ್ದಾರೆ. ಯಾರೂ ಪಕ್ಷ ಬಿಟ್ಟು ಹೋಗಿಲ್ಲ ಎಂದೂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬನ್ನಿ ಹಾಗಾದರೆ ಯಡಿಯೂರಪ್ಪ ಭವಿಷ್ಯದ ಬಗ್ಗೆ ಯಾರು ಯಾರು ಏನು ಹೇಳಿದರು ಎಂಬುದನ್ನು ಒಮ್ಮೆ ನೋಡಿಕೊಂಡು ಬರೋಣ. ಸ್ಲೈಡ್ ಪ್ಲೀಸ್...

ಮೋದಿ ಬೆಂಗಳೂರಿಗೆ ಬಂದಾಗ ಬಿಎಸ್ವೈ ಪಕ್ಷ ಸೇರ್ತಾರೆ
ಮುಂಬರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯದ ಭಾಗವಾಗಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಹಿಂಪಡೆಯಲಾಗಿದೆ. ಹೀಗಾಗಿ ಕೆಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ಮುಂದಾಗಿರುವ ಬಿಜೆಪಿ ಸ್ಥಳೀಯ ಬಿಜೆಪಿ ಮುಖಂಡರು ಸೋಮವಾರ ಮಾಜಿ ಸಿಎಂ ಡಿವಿ ಸದಾನಂದಗೌಡ ನೇತೃತ್ವದಲ್ಲಿ ಸಭೆ ನಡೆಸಿ ಕೆಜೆಪಿ ಅಭ್ಯರ್ಥಿ ಯುಎಸ್ ಶೇಖರ್ ಅವರನ್ನು ಗೆಲ್ಲಿಸುವ ಕುರಿತಂತೆ ಭಾರಿ ಚರ್ಚೆ ನಡೆಸಿದ್ದಾರೆ.
ಆ ಸಂದರ್ಭದಲ್ಲಿ ಮುಖಂಡರನ್ನುದ್ದೇಶಿಸಿ ಮಾತನಾಡಿದ ಸದಾನಂದ ಗೌಡರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸದ್ಯದಲ್ಲೇ ಬಿಜೆಪಿಗೆ ಮರಳಲಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ (ಸೆಪ್ಟೆಂಬರಿನಲ್ಲಿ) ಬಿಎಸ್ವೈ ಪಕ್ಷ ಸೇರುವುದು ಖಚಿತ' ಎಂದು ಹೇಳಿದ್ದಾರೆ ಎನ್ನಲಾಗಿದೆ.

ಕೇವಲ ಮಾಧ್ಯಮದಲ್ಲಿನ ಊಹಾಪೋಹವಷ್ಟೆ
ಇದಕ್ಕೆ ಪುಷ್ಟಿ ನೀಡುವಂತೆ ಇನ್ನೂ ಬಿಜೆಪಿ ಮೇಲೆಯೇ ಒಲವು ಹೊಂದಿರುವ ಯಡಿಯೂರಪ್ಪ ಅವರು 'ಹಾಲಿ ವಿಧಾನ ಪರಿಷತ್ ಉಪ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಚಿಂತನೆ ಆರಂಭಗೊಳ್ಳಲಿದೆ. ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ, ಮುಂದಿನ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಹೊಂದಾಣಿಕೆ ಕುರಿತು ಚಿಂತಿಸಬೇಕಾದ ಅಗತ್ಯವಿದೆ. ಲೋಕಸಭೆಯಲ್ಲಿ ಕೆಜೆಪಿಯ ಪಾತ್ರವೂ ಇರಬೇಕು ಎಂಬುದು ನಮ್ಮ ಗುರಿ' ಎಂದಿದ್ದಾರೆ.
'ನಾನು ಬಿಜೆಪಿ ಸೇರುತ್ತೇನೆ ಎಂಬುದಾಗಲಿ, ಬಿಜೆಪಿ ವರಿಷ್ಠರು ನನ್ನನ್ನು ಭೇಟಿಯಾಗಿ ಮಾತನಾಡಿದ್ದಾರೆ ಎಂಬುದು ಕೇವಲ ಮಾಧ್ಯಮದಲ್ಲಿನ ಊಹಾಪೋಹವಷ್ಟೆ. ಇದರಲ್ಲಿ ಸತ್ಯಾಂಶ ಇಲ್ಲ. ನನ್ನ ನಿಲುವಿನಲ್ಲಿ ಗೊಂದಲ ಇಲ್ಲ. ನಮ್ಮದೊಂದು ವಿಶಿಷ್ಟ ಪ್ರಾದೇಶಿಕ ಪಕ್ಷ. ಈ ಹಿನ್ನೆಲೆಯಲ್ಲಿ ನಾವು ಆಯಾ ಪಕ್ಷದ ಮುಖಂಡರೊಡನೆ ಚರ್ಚಿಸಿಯೇ ತೀರ್ಮಾನ ಕೈಗೊಳ್ಳುತ್ತೇವೆ' ಎಂದಿದ್ದಾರೆ.

ಯಡಿಯೂರಪ್ಪ ಒಪ್ಪಿದರೆ ಲೋಕಸಭೆಗೆ ಬಿಜೆಪಿ ಟಿಕೆಟ್
ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಳ್ಳಲು ನರೇಂದ್ರ ಮೋದಿ ಮಾತ್ರವಲ್ಲ, ಬಿಜೆಪಿ ಸಂಸದೀಯ ಮಂಡಳಿಯೂ ಒಪ್ಪಿಗೆ ನೀಡಿದೆ. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳುವ ಬಗ್ಗೆ ಸಂಸದೀಯ ಮಂಡಳಿ ಸಭೆಯಲ್ಲಿ ತೀರ್ಮಾನವಾಗಿ ತಿಂಗಳೇ ಕಳೆದಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಬಯಸಿದರೆ ಶಿವಮೊಗ್ಗ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಲು ಕೂಡ ಸಂಸದೀಯ ಮಂಡಳಿ ಸಮಾಲೋಚನೆ ನಡೆಸಿದೆ ಎಂದು ತಿಳಿದುಬಂದಿದೆ.

ಎರಡು ತೊಡಕು
ಯಡಿಯೂರಪ್ಪ ಸೇರ್ಪಡೆಗೆ ಸಂಸದೀಯ ಮಂಡಳಿ ಅಸ್ತು ಅಂದಿರುವುದು ಕಾರ್ಯಗತವಾಗಲು 2 ತೊಡಕುಗಳಿವೆ. ಒಂದು, ಯಡಿಯೂರಪ್ಪ ಅವರು ತಮ್ಮ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಈ ವಿಷಯವನ್ನು ಗೌಪ್ಯವಾಗಿ ಇಡಲಾಗಿದೆ.
ಅನಂತ ಕುಮಾರ್ ಫ್ಯಾಕ್ಟರ್:
ಇದರ ಜತೆಗೆ ರಾಜ್ಯದವರೇ ಆದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರು ಇನ್ನೂ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿಲ್ಲ. ಹೀಗಾಗಿ ಅವರು ಸಮ್ಮತಿಸಿದ ಬಳಿಕ ಯಡಿಯೂರಪ್ಪ ಅವರ ಪಕ್ಷ ಸೇರ್ಪಡೆಯನ್ನು ಅಧಿಕೃತವಾಗಿ ಪ್ರಕಟಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಗಮನಾರ್ಹವೆಂದರೆ, ಬಿಜೆಪಿ ಶಾಸಕರು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಬೇಕು ಎಂದು ಅನಂತಕುಮಾರ್ ಅವರಿಗೆ ದುಂಬಾಲು ಬಿದ್ದಿದ್ದಾರೆ.

ಬಿಎಸ್ವೈ ಬಿಜೆಪಿ ಸೇರ್ಪಡೆ ಖಚಿತ ಎಂದ ಶೆಟ್ಟರ್
ಕೆಜೆಪಿ ಮುಖಂಡ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿಗೆ ಮರು ಸೇರ್ಪಡೆ ಆಗುವುದು ಖಚಿತವಾಗಿದೆ. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವ ಮಾತುಕತೆ ಹೈಕಮಾಂಡ್ ಮಟ್ಟದಲ್ಲಿ ಮುಗಿದಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರೂ ಸಹ ತಿಳಿಸಿದ್ದಾರೆ. ಬಿಎಸ್ವೈ ಸೇರ್ಪಡೆ ಬಗ್ಗೆ ರಾಜ್ಯದ ಮುಖಂಡರು ಏನು ಹೇಳಿದ್ದಾರೋ ಅದನ್ನು ಹೈಕಮಾಂಡ್ಗೆ ತಿಳಿಸಿದ್ದೇವೆ. ಆದರೆ ಯಡಿಯೂರಪ್ಪ ಪಕ್ಷಕ್ಕೆ ಬರುವ ಬಗ್ಗೆ ಹೈಕಮಾಂಡ್ ಸದ್ಯದಲ್ಲೇ ನಿರ್ಧರಿಸುತ್ತದೆ. ಕಾದು ನೋಡಿ' ಎಂದಿದ್ದಾರೆ.












Click it and Unblock the Notifications