ತಿರುಪತಿ ತಿಮ್ಮಪ್ಪ ದರ್ಶನ ಸದ್ಯಕ್ಕೆ ಕಷ್ಟಕರ
ಹೈದರಾಬಾದ್, ಆ.13: ಆಂಧ್ರ ವಿಭಜನೆಯಾಗಿ ತೆಲಂಗಾಣ ರಾಜ್ಯ ರಚನೆಯಾಗಿರುವುದನ್ನು ಖಂಡಿಸಿ ಸುಮಾರು 4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕಕರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್ಆರ್ಟಿಸಿ) 72 ಗಂಟೆಗಳ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಿರುಪತಿಯೂ ಸೇರಿದಂತೆ ಸೀಮಾಂಧ್ರದ ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
13 ಜಿಲ್ಲೆಗಳ 123 ಡಿಪೋಗಳಲ್ಲಿ 12,000 ಬಸ್ ಗಳು ಸ್ಥಗಿತಗೊಂಡಿದ್ದು, ಆಂಧ್ರವಿಭಜನೆ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿ ಎಪಿಎಸ್ ಆರ್ ಟಿಸಿಯ 66 ಸಾವಿರ ಮಂದಿ ಉದ್ಯೋಗಿಗಳು ಬಂದ್ ನಲ್ಲಿ ಪಾಲ್ಗೊಂಡಿದ್ದಾರೆ.
ವೆಂಕಟೇಶನ ಸನ್ನಿಧಿಯಲ್ಲಿ: ಬಸ್ ಬಂದ್ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಪ್ರಸ್ತುತ 60 ಸಾವಿರ ಭಕ್ತರು ಸಿಲುಕಿಕೊಂಡಿದ್ದು ಈಗ ಬೆಟ್ಟ ಇಳಿದು ತಮ್ಮ ಊರಿಗೆ ಪ್ರಯಾಣ ಬೆಳೆಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಹಾಲಿ ಬೆಟ್ಟದ ಮೇಲಿರುವ ಭಕ್ತರನ್ನು ಕೆಳಗಿಳಿಸಿ ಅವರನ್ನು ರೈಲ್ವೆ ನಿಲ್ದಾಣಕ್ಕೆ ಸಾಗಿಸುವ ಕೆಲಸ ಟಿಟಿಡಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ.
ಪರ್ಯಾಯ ವ್ಯವಸ್ಥೆಗೆ ಚಿಂತನೆ: ಹಾಲಿ ಟಿಟಿಡಿ ಸಂಸ್ಥೆಯ ಬಳಿ 10 ಬಸ್ ಗಳು ಹಾಗೂ ನೂರಾರು ಕಾರು, ಜೀಪುಗಳಿದ್ದು, ಅವುಗಳ ಮೂಲಕ ಭಕ್ತರನ್ನು ರೈಲ್ವೆ ನಿಲ್ದಾಣಕ್ಕೆ ಸಾಗಿಸಲು ಸಂಸ್ಥೆಯ ಆಡಳಿತ ಮಂಡಳಿ ಚಿಂತಿಸಿದೆ. ಬಸ್ ಸ್ಥಗಿತ, ಮುಷ್ಕರ ಹಿನ್ನೆಲೆಯಲ್ಲಿ ಸಾವಿರ, ಸಾವಿರ ಭಕ್ತರನ್ನು ಕಡಿಮೆ ಸಂಖ್ಯೆಯಲ್ಲಿರುವ ಸ್ವಂತ ವಾಹನಗಳಲ್ಲಿ ಸಾಗಿಸುವುದು ಸುಲಭದ ಕೆಲಸವೇನಲ್ಲ. ಟಿಟಿಡಿ ಎದುರಿಸುತ್ತಿರುವ ಸಮಸ್ಯೆ ಏನು? ಸೀಮಾಂಧ್ರ ಬಂದ್ ನಿಂದ ಜನತೆ ಆಗುತ್ತಿರುವ ಕಷ್ಟ ಏನು? ಎಲ್ಲದರ ಚಿತ್ರಣ ಮುಂದೆ ಸಿಗಲಿದೆ ನೋಡಿ...

ಬೆಟ್ಟದ ದಾರಿ
ಬೆಟ್ಟ ಏರುವ ದಾರಿ ಬೇರೆ, ಇಳಿಯುವ ದಾರಿ ಬೇರೆ. ಹಾಗಾಗಿ ಒಂದು ಟ್ರಿಪ್ ಹೋಗಿ ಬರಲು ಕನಿಷ್ಠ 2 ಗಂಟೆ ಸಮಯ ಅಗತ್ಯ. ಒಂದು ಬಸ್ ಗೆ 60 ಜನ, ಒಂದು ಕಾರ್ ನಲ್ಲಿ 10 ಜನ ತುಂಬಿದ್ದರೂ ಈ ವಾಹನಗಳು ಸಾಲುತ್ತಿಲ್ಲ ಎಂಬುದು ಆಡಳಿತ ಮಂಡಳಿ ತಲೆನೋವು. ರಾಯಲಸೀಮಾ ಹಾಗೂ ಕೋಸ್ತಾ ಆಂಧ್ರ ಸೇರಿದ ಸೀಮಾಂಧ್ರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ತುಂಬಿ ತುಳುಕಿವೆ ರೈಲುಗಳು
ಈಗಾಗಲೇ ರೈಲು ನಿಲ್ದಾಣ ತಲುಪಿರುವ ಸಾವಿರಾರು ಭಕ್ತರಿಂದ ರೈಲು ನಿಲ್ದಾಣಗಳು, ರೈಲುಗಳು ತುಂಬಿ ತುಳುಕುತ್ತಿವೆ. ಎಲ್ಲೆಲ್ಲೂ ಜನ, ಜನ. ಹಾಗಾಗಿ ಜನರನ್ನು ನಿಯಂತ್ರಿಸುವುದೇ ರಕ್ಷಣಾ ಸಿಬ್ಬಂದಿಗೆ ದುಸ್ತರವಾಗಿದೆ. ಈ ಮಧ್ಯೆ ತಮ್ಮ ಊರುಗಳನ್ನು ಸೇರಲು ಕಾತುರದಿಂದಿರುವ ಭಕ್ತರು ಪರಸ್ಥಿತಿಯನ್ನು ನೋಡಿ ಆತಂಕಗೊಂಡಿದ್ದಾರೆ.

ಟಿಟಿಡಿ ಭರವಸೆ
ಹೊರ ರಾಜ್ಯ ಅಥವಾ ಹೊರ ದೇಶಗಳಿಂದ ಬಂದಿರುವ ಭಕ್ತರು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪ್ರಯಾಣ ವ್ಯವಸ್ಥೆ ಸರಿ ಹೋಗುವವರೆಗೂ ಟಿಟಿಡಿ ಸಂಸ್ಥೆ ಎಲ್ಲಾ ಭಕ್ತರಿಗೂ ಊಟ, ವಸತಿ ವ್ಯವಸ್ಥೆ ಕಲ್ಪಿಸಲಿದೆ.
ಬೆಟ್ಟದ ಕೆಳಗಡೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಿದೆ. ಯಾವುದೇ ವ್ಯವಸ್ಥೆ ಕಲ್ಪಿಸುವಲ್ಲಿ ಸ್ವಲ್ಪ ತಡವಾಗಬಹುದು ಅಷ್ಟೆ. ಭಕ್ತಾದಿಗಳು ಸಹಕರಿಸಬೇಕು ಎಂದು ಆಡಳಿತ ಮಂಡಳಿ ಜನರಿಗೆ ಭರವಸೆ ನೀಡಿದೆ.

ಕೆಳಗಿಳಿದರೂ ಬಸ್ ಇಲ್ಲ
ಸೀಮಾಂಧ್ರದಲ್ಲಿ ಆಂಧ್ರ ವಿಭಜನೆ ವಿರುದ್ಧದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಎಪಿಎಸ್ ಆರ್ ಟಿಸಿ ಸಿಬ್ಬಂದಿ ಸಂಪೂರ್ಣವಾಗಿ ಬಸ್ ಗಳನ್ನು ಸ್ಥಗಿತಗೊಳಿಸಿರುವುದರಿಂದ ಸದ್ಯ ಹೊರ ರಾಜ್ಯಗಳಿಂದ ಬಂದಿರುವ ಭಕ್ತಾದಿಗಳು ಬೆಟ್ಟದಿಂದ ಇಳಿದರೂ ಊರು ತಲುಪಲು ಸದ್ಯಕ್ಕೆ ಸಾಧ್ಯವಿಲ್ಲ.
ಜತೆಗೆ ತಿರುಪತಿ ವೆಂಕಟೇಶನ ದರ್ಶನಕ್ಕೆ ಬರುವ ಭಕ್ತಾದಿಗಳು ಒಂದೆರಡು ದಿನ ನಿಧಾನಿಸಿದರೆ ಒಳ್ಳೆಯದು.ಸೀಮಾಂಧ್ರದಲ್ಲಿ ಪ್ರತಿಭಟನೆ ಈಗಾಗಲೇ 14ನೇ ದಿನಕ್ಕೆ ಕಾಲಿಟ್ಟಿದ್ದು, ಭಕ್ತರು ದರ್ಶನಕ್ಕೆ ಬರುವಾಗ ಪರಿಸ್ಥಿತಿ ಅವಲೋಕಿಸಿ ಬರಬೇಕು ಎಂದು ಮಂಡಳಿ ಸಾರ್ವಜನಿಕರಲ್ಲಿ ಮತ್ತೆ ಮನವಿ ಮಾಡಿದೆ.

ಕರ್ನಾಟಕ ಗಡಿಯಲ್ಲಿ
ಗಡಿ ಜಿಲ್ಲೆಗಳಾದ ಬಳ್ಳಾರಿ, ರಾಯಚೂರುಗಳಿಂದ ಆಂಧ್ರಪ್ರದೇಶಕ್ಕೆ ತೆರಳುವ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆಂಧ್ರಕ್ಕೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ದಿನ ನಿತ್ಯ ವ್ಯಾಪಾರಕ್ಕಾಗಿ ಗಡಿ ನಗರಗಳಿಗೆ ತೆರಳುತ್ತಿದ್ದ ಕರ್ನಾಟಕದ ಸಣ್ಣ ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಮುಂದುವರೆದ ರಾಜೀನಾಮೆ ಪರ್ವ
ಆಂಧ್ರ ವಿಭಜನೆಗೆ ವಿರೋಧವಿದ್ದರೂ ತಮ್ಮ ಅಹವಾಲು ಕೇಳದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಆಂಧ್ರದ ಮತ್ತಿಬ್ಬರು ಸಚಿವರು ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಸಂಯುಕ್ತ ಆಂಧ್ರಕ್ಕಾಗಿ ಮಂತ್ರಿ ಸ್ಥಾನ ತ್ಯಾಗ ಮಾಡಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಬಂದ್ ಬಿಸಿ
ಕೃಷ್ಣಾ ಹಾಗೂ ಗುಂಟೂರು ಜಿಲ್ಲೆಗಳಲ್ಲಿ ಕೇಬಲ್ ಆಪರೇಟರ್ ಗಳು ಮನರಂಜನಾ ಚಾನೆಲ್ಗಳ ಪ್ರಸಾರ ಸ್ಥಗಿತಗೊಳಿಸಿದ್ದಾರೆ. ನಿತ್ಯ 50 ಸಾವಿರ ಮಂದಿ ಭೇಟಿ ಕೊಡುವ ತಿರುಮಲ-ತಿರುಪತಿ ದೇಗುಲಕ್ಕೆ ನಿತ್ಯ 2 ಕೋಟಿ ರೂ. ಆದಾಯ ಬರುವುದು ನಿಂತಿದೆ.

ಬೆಟ್ಟದ ಹಾದಿ
ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಹೊರಟಿರುವ ಭಕ್ತರು. ಚಿತ್ರ: ಮಾಲತಿ.ಎ,

ಭಕ್ತರ ಪರದಾಟ
ಟಿಟಿಡಿ ಭರವಸೆ ಇದ್ದರೂ ನಿಗದಿತ ಕಾರ್ಯಕ್ರಮ ವ್ಯತ್ಯಾಸವಾಗಿದ್ದರಿಂದ ತಿರುಮಲ, ತಿರುಪತಿ ಪ್ರದೇಶದಲ್ಲಿರುವ ಭಕ್ತರು ಸಹಜವಾಗಿ ಚಿಂತೆಗೀಡಾಗಿದ್ದಾರೆ. ಚಿತ್ರ: ಮಾಲತಿ.ಎ












Click it and Unblock the Notifications