ಶೋಭಾ ಕರಂದ್ಲಾಜೆ -ಯಡಿಯೂರಪ್ಪ ಮಧ್ಯೆ ಬಿರುಕು?
ಮೈಸೂರು, ಆಗಸ್ಟ್ 10: ವಾಡಿಕೆಯಂತೆ ಮೊನ್ನೆ ಆಷಾಢದ ಕೊನೆಯ ಶುಕ್ರವಾರವೂ ಚಾಮುಂಡಿ ಬೆಟ್ಟ ಹತ್ತಿಳಿದ ಶೋಭಾ ಕರಂದ್ಲಾಜೆ ಅವರು ತಮ್ಮ ನಾಯಕ ಬಿಎಸ್ ಯಡಿಯೂರಪ್ಪ ಪರವಾಗಿ ಮಾತನಾಡುತ್ತಾ ಅವರು ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಸಾರಾಸಗಟಾಗಿ ಘೋಷಿಸಿದ್ದರು. ಆದರೆ ಬದಲಾದ ಕಾಲಮಾನದಲ್ಲಿ ನಿನ್ನೆ ಶುಕ್ರವಾರ ಶ್ರಾವಣ ಸಂಜೆ ಕೇಳಿಬಂದ ಸುದ್ದಿಯ ಪ್ರಕಾರ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರ ಸಂಬಂಧದ ಮಧ್ಯೆ ಬಿರುಕುಬಿಟ್ಟಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಗುರು-ಶಿಷ್ಯೆಯಾಗಿ ಕಣ್ಣಿಗೆ ಕುಕ್ಕುವಂತೆ ರಾರಾಜಿಸುತ್ತಿರುವ ಯಡಿಯೂರಪ್ಪ- ಶೋಭಾ ಜೋಡಿ ಮಧ್ಯೆ ಈಗ ಸಂಬಂಧ ಹಳಸಿದೆ? ಶೋಭಾ-ಯಡಿಯೂರಪ್ಪ ಜುಗಲ್ ಬಂಧಿ ಇತ್ತೀಚೆಗೆ ತಾಳ ತಪ್ಪಿದೆ ಎಂಬ ಮಾತುಗಳು ಕೇಳಿಬಂದಿವೆ.

ಕಾರಣವಾದರೂ ಏನು?
ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿರುವ ಗುಸುಗುಸು ಪ್ರಕಾರ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಹತ್ತಿರವಾಗುತ್ತಿರುವುದರಿಂದ ಮುನಿಸುಕೊಂಡು ಶೋಭಾ ಕರಂದ್ಲಾಜೆ ಯಡಿಯೂರಪ್ಪ ಅವರಿಂದ ದೂರವಾಗಿದ್ದಾರೆ ಎನ್ನಲಾಗಿದೆ.
ಇದೇ ಕಾರಣವನ್ನು ಹಿಡಿದು, ಈಗಾಗಲೇ ಬಣಕಾರ್ ಅವರೊಬ್ಬರನ್ನು ಬಿಟ್ಟು ಇತರೆ ನಾಲ್ವರು ಕೆಜೆಪಿ ಶಾಸಕರು ಈಗಾಗಲೇ ಯಡಿಯೂರಪ್ಪರಿಂದ ವಿಮುಖಗೊಂಡಿರುವುದು ದೃಗ್ಗೋಚರವಾಗಿದೆ. ಇದೇ ಪ್ರಯತ್ನದಲ್ಲಿ ಕೆಜೆಪಿಯ ತೆಂಗಿನಕಾಯಿ ನಾಲ್ಕಾರು ಹೋಳಾಗುವುದು ನಿಶ್ಚಿತವಾಗಿದೆ ಎನ್ನಲಾಗಿದೆ.
ಯಡಿಯೂರಪ್ಪ ಬಿಜೆಪಿಗೆ ಮರಳಿದರೆ ತನಗೆ ಉಳಿಗಾಲವಿಲ್ಲ ಎಂಬುದು ಶೋಭಾ ಕರಂದ್ಲಾಜೆ ಅನಿಸಿಕೆ/ಲೆಕ್ಕಾಚಾರವಾಗಿದೆ. ಮುಖ್ಯವಾಗಿ ಯಡಿಯೂರಪ್ಪ ಅವರು ಬಿಜೆಪಿಗೆ ಮಾರಕವಾಗಲು ಮತ್ತು ಬಿಜೆಪಿ ತೊರೆಯಲು ಶೋಭಾನೇ ಕಾರಣ ಎಂಬುದು ಬಿಜೆಪಿ ನಾಯಕರ ತಿಳಿವಳಿಕೆಯಾಗಿದೆ. ಇಂತಿಪ್ಪ ಬಿಜೆಪಿ ನಾಯಕರು ತಾವು ಮರಳಿ ಬಿಜೆಪಿ ಸೇರುವುದನ್ನು ಸಹಿಸುವುದಿಲ್ಲ. ಹಾಗಾಗಿ ಯಡಿಯೂರಪ್ಪ ಹಿಂದೆ ತಾನು ಹೋಗುವುದು ಸಾಧ್ಯವಾಗದು ಎಂದು ಶೋಭಾ ಲೆಕ್ಕ ಹಾಕಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಕರ್ನಾಟಕದ ರಾಜಕೀಯದಲ್ಲಿ ತಮ್ಮ ಶಕ್ತಿ, ಸ್ಥಾನಮಾನ ವಾಪಸ್ ಗಳಿಸುವ ಪ್ರಯತ್ನವನ್ನು ಯಡಿಯೂರಪ್ಪ ಜಾರಿಯಲ್ಲಿಟ್ಟಿದ್ದಾರೆ. ಆ ಪ್ರಯತ್ನದಲ್ಲಿ ಬಿಜೆಪಿಗೆ ಮರಳುವುದು ಸೂಕ್ತವೆಂದು ಯಡಿಯೂರಪ್ಪ ಬಲವಾಗಿ ನಂಬಿದ್ದಾರೆ ಎಂಬುದೂ ಶೋಭಾಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.












Click it and Unblock the Notifications