ಕರ್ನಾಟಕದ ಶನಿವಾರದ ಸುದ್ದಿಗಳ ರೌಂಡಪ್
ಬೆಂಗಳೂರು, ಆ.10 : ಲೋಕಸಭೆ ಉಪ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದೆ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಶನಿವಾರ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಸಹೋದರನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ ಶನಿವಾರ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಉಪ ಚುನಾವಣೆಯ ಕುರಿತು ಮಾತುಕತೆ ನಡೆಸಿದರು. ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ.
ಹಾಸನ : ಬೇಲೂರಿನ ಅರೆಹಳ್ಳಿಯ ದೊಡ್ಡ ನಿಂಗಾಪುರ ಕೆರೆ ಬಳಿ ಸರ್ಕಾರಿ ಬಸ್ ಸ್ಟೆರಿಂಗ್ ಕಟ್ಟಾಗಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ವಿದ್ಯಾರ್ಥಿಯೊಬ್ಬನ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ 40 ಮಂದಿನ ಪ್ರಾಣ ಉಳಿದಿದೆ.
ತುಮಕೂರು : ನಗರದಲ್ಲಿ ಬೀದಿನಾಯಿಯೊಂದು ಜನರ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಘಟನೆಯಿಂದಾಗಿ ಮೂವರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರದ ಪ್ರಮುಖ ಸುದ್ದಿಗಳ ನೋಟ ಇಲ್ಲಿದೆ.

ಕಾಂಗ್ರೆಸ್ ವಿರುದ್ಧ ದೇವೇಗೌಡ ಗುಡುಗು
ಕಾಂಗ್ರೆಸ್ ಲೂಟಿಕೋರರ ಪಕ್ಷವಾಗಿದ್ದು, ರೈತನೋರ್ವನ ಮಗ ಸಂಸತ್ತಿನಲ್ಲಿ ಮಾತನಾಡುವುದನ್ನು ಪಕ್ಷ ಸಹಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾವೇರಿ ವಿವಾದದ ಕುರಿತು ಸಂಸತ್ ನಲ್ಲಿ ಮೂರು ನಿಮಿಷ ಮಾತನಾಡಲು ನನಗೆ ಅವಕಾಶ ನೀಡಿಲಿಲ್ಲ. ಜನರ ಬೆಂಬಲವಿರುವ ತನಕ ಪಕ್ಷಕ್ಕೆ ಯಾರೂ ಧಕ್ಕೆ ಉಂಟುಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್, ಯಡಿಯೂರಪ್ಪ ಭೇಟಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಜೆಪಿ ಪಕ್ಷದವರು ತಮ್ಮ ಸಹೋದರನನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಶನಿವಾರ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಶಿವಕುಮಾರ 1 ಗಂಟೆಗೂ ಹೆಚ್ಚುಕಾಲ ಅವರೊಂದಿಗೆ ಮಾತುಕತೆ ನಡೆಸಿದರು.

ಸೋನಿಯಾ, ರಾಹುಲ್ ವಿರುದ್ಧ ಸ್ಪರ್ಧೆಗೆ ಸಿದ್ದ
ಉಡುಪಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸುವುದಾದದರೆ ನಾನು ಅವರ ವಿರುದ್ಧ ಸ್ಪರ್ಧಿಸಲು ಸಿದ್ದ ಎಂದು ಮಾಜಿ ಸಿಎಂ ಡಿ.ವಿ.ಸದಾನಂಗೌಡ ಹೇಳಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರ ರಾಹುಲ್ ವಿರುದ್ಧ ತಾವು ಸ್ಪರ್ಧಿಸುವುದಾಗಿ ಘೋಷಿಸಿದರು.

ತಪ್ಪಿದ ಮತ್ತೊಂದು ಬಸ್ ದುರಂತ
ಬೇಲೂರಿನ ದೊಡ್ಡ ನಿಂಗಾಪುರ ಕೆರೆಯ ಬಳಿ ಸರ್ಕಾರಿ ಬಸ್ ಸ್ಟೆರಿಂಗ್ ಕಟ್ ಆಗಿದ್ದು, ವಿದ್ಯಾರ್ಥಿಯ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಬಸ್ ಚಾಲಕ ಸ್ಟೆರಿಂಗ್ ಕಟ್ ಆಗಿದೆ ಎಂದು ಕೂಗಿಕೊಂಡ ತಕ್ಷಣ ಕೆಳೆಗೆ ಹಾರಿದ ವಿದ್ಯಾರ್ಥಿ ಚಕ್ರಕ್ಕೆ ಕಲ್ಲು ಅಡ್ಡಹಾಕಿ ಬಸ್ ನಿಲ್ಲಿಸಿದ್ದಾನೆ. ಬಸ್ ನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿದ್ದರು.

ತುಮಕೂರಿನಲ್ಲಿ ಬೀದಿನಾಯಿ ಹಾವಳಿ
ತುಮಕೂರು ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಬೀದಿನಾಯಿಯೊಂದು ಸಾರ್ವಜನಿಕರ ಮೇಲೆ ದಾಳಿ ಮಾಡಿದೆ. ಘಟನೆಯಿಂದಾಗಿ ಐವರು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿಗಳನ್ನು ಹಿಡಿಯಲು ನಗರಸಭೆಯವರು ಕಾರ್ಯಾಚರಣೆ ಕೈಗೊಂಡಿದ್ದಾರೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)

ಕೋಲಾರ : ಮಹಿಳೆ ಆತ್ಮಹತ್ಯೆ
ಕೌಟುಂಬಿಕ ಕಲಹದ ಹಿನ್ನೆಯಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಎಡಹಳ್ಳಿ ಎಂಬಲ್ಲಿ ನಡೆದಿದೆ. ಸುಗುಣಾ (30) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications