5 ಪುತ್ರಿಯರ ತಲೆ ಕತ್ತರಿಸಿದ್ದ ಅಪ್ಪ ನೇಣಿನಿಂದ ಬಚಾವ್

ಮುಂದೆ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಅವನಿಗೆ ಗಲ್ಲು ಶಿಕ್ಷೆಯಾಗಿತ್ತು. ಅದರಂತೆ ಇಂದು ಗುರುವಾರ ಇಷ್ಟೊತ್ತಿಗಾಗಲೇ ಅವನನ್ನು ನೇಣಿಗೆ ಹಾಕುವ ಪ್ರೋಗ್ರಾಂ ಸಹ ಇತ್ತು. ಆದರೆ ಆರೋಪಿಯ ಪರ ವಕೀಲರು ಬುಧವಾರ ಮಧ್ಯರಾತ್ರಿ 12 ಗಂಟೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಮೂರ್ತಿ ಪಿ ಸದಾಶಿವಂ ಅವರನ್ನು ಭೇಟಿ ಮಾಡಿ, ಗಲ್ಲು ಶಿಕ್ಷೆಗೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಮಧ್ಯಪ್ರದೇಶದ ಸೇಹೋರ್ ಜಿಲ್ಲೆಯ ಮಗನ್ ಲಾಲ್ ಬರೇಲಾ (43) ಎಂಬ ಆದಿವಾಸಿ ಮನುಷ್ಯ ಸದ್ಯಕ್ಕೆ ನೇಣಿನಿಂದ ಬಚಾವಾಗಿದ್ದಾನೆ.
ಇತ್ತೀಚೆಗೆ ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಬ್ ಮತ್ತು ಕಾಶ್ಮೀರಿ ಉಗ್ರ ಅಫ್ಜಲ್ ಗುರುನನ್ನು ನೇಣಿಗೆ ಹಾಕಿದ ಬಳಿಕ ಗಲ್ಲು ಶಿಕ್ಷೆ ಜಾರಿಯಾಗುತ್ತಿರುವ ಮೂರನೇ ಪ್ರಕರಣ ಇದಾಗಬೇಕಿತ್ತು. ಮಧ್ಯಪ್ರದೇಶದ ಜಬಲ್ಪುರ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ವಿಧಿಸಬೇಕಿತ್ತು. ಆದರೆ ಆರೋಪಿ ಪರ ವಕೀಲರ ಪ್ರತಿವಾದವನ್ನು ಇಂದು ಆಲಿಸಿದ ಬಳಿಕ ನ್ಯಾಯಾಧೀಶರು ತಮ್ಮ ಅಂತಿಮ ತೀರ್ಪು ಪ್ರಕಟಿಸಲಿದ್ದಾರೆ.
ಏನು ನಡೆದಿತ್ತು?:
2010ರ ಜೂನ್ ತಿಂಗಳಲ್ಲಿ ಸೇಹೋರ್ ಜಿಲ್ಲೆಯಲ್ಲಿ ಮಗನ್ ಲಾಲ್ ತನ್ನ 1, 2, 4, 5, 6 ವರ್ಷದ ಪುತ್ರಿಯರನ್ನು ಕೊಂದು ಹಾಕಿದ್ದ. ಇಬ್ಬರು ಪತ್ನಿಯರನ್ನು ಹೊಂದಿದ್ದ ಈತ ಅವರ ಜತೆಗಿನ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿದ್ದ.
ಮಗನ್ ಲಾಲಗೆ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಮಗನ್ ಲಾಲ್ ಸಲ್ಲಿಸಿದ್ದ ಅರ್ಜಿಗಳು ವಜಾ ಆಗಿದ್ದವು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಇವನ ಕ್ಷಮಾದಾನ ಅರ್ಜಿಯನ್ನು 2013ರ ಜುಲೈ 22ರಂದು ತಿರಸ್ಕರಿಸಿದ್ದರು. ಅದಾಗುತ್ತಿದ್ದಂತೆ ಮಗನ್ ಲಾಲನನ್ನು ಆ. 8ರಂದು ಗಲ್ಲಿಗೇರಿಸಲು ಸೇಹೋರ್ ಜಿಲ್ಲಾ ನ್ಯಾಯಾಲಯ ಬ್ಲ್ಯಾಕ್ ವಾರಂಟ್ ಹೊರಡಿಸಿತ್ತು. ಆದರೆ ಅದಕ್ಕೆ ಈಗ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ.












Click it and Unblock the Notifications