ಯಡಿಯೂರಪ್ಪ ಜತೆ ಉಳಿದಿರುವವರು ಬಣಕಾರ್ ಒಬ್ಬರೇ
ಬೆಂಗಳೂರು, ಆಗಸ್ಟ್ 7: ಬಿಜೆಪಿಗೆ ಮರಳುವ ಧಾವಂತದಲ್ಲಿ ಬಿಎಸ್ ಯಡಿಯೂರಪ್ಪಗೆ ತಮ್ಮದೇ ಕೆಜೆಪಿ ಪಕ್ಷದ ಮೇಲಿನ ಹಿಡಿತ ತಪ್ಪಿದಂತಿದೆ. ಉಪಚುನಾವಣೆಗಳು ಎದುರುಗಿರುವಾಗ ರಾಜಕೀಯ ದಾಳಗಳನ್ನು ಉದುರಿಸದೆ ಬಿಜೆಪಿ ಜತೆ ಮಂತ್ರಾಲೋಚನೆಯಲ್ಲಿದ್ದಾಗಲೇ ಯಡಿಯೂರಪ್ಪ ಎಲ್ಲೋ ಎಡವುತ್ತಿರುವ ಸೂಚನೆಗಳು ಸಿಕ್ಕಿದ್ದವು. ಆದರೆ ಅದೀಗ ಸ್ಪಷ್ಟವಾಗುತ್ತಿದೆ.
ಏನಪ್ಪಾ ಅಂದರೆ ಬಿಎಸ್ ಯಡಿಯೂರಪ್ಪ ಸಾರಥ್ಯದ ಕರ್ನಾಟಕ ಜನತಾ ಪಕ್ಷವು ಪಕ್ಷದ ಚಿಹ್ನೆಯಂತೆ ಹೋಳುಗಳಾಗುವ ಸಾಧ್ಯತೆಗಳು ಇವೆ. ಇದು ನಟ ಉಪೇಂದ್ರ ಹೇಳಿದಂತೆ ಬರಿ ಓಳು ಎಂಬಂತಾಗುತ್ತದಾ ಅಥವಾ ತೆಂಗಿನ ಕಾಯಿ ಚೂರು ಚೂರು ಆಗುತ್ತದಾ, ಸದ್ಯೋಭವಿಷ್ಯತ್ತಿನಲ್ಲಿ ಗೊತ್ತಾಗಲಿದೆ.
ಏನಾಗಿದೆಯೆಂದರೆ ಕೇವಲ ಆರು ಶಾಸಕರನ್ನು ಹೊಂದಿರುವ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ವಿಧಾನಸಭೆಯಲ್ಲಿ ವಿಭಜನೆಯಾಗುವ ಹಾದಿಯಲ್ಲಿದೆ. ಪಕ್ಷದಲ್ಲಿರುವ ಬೆರಳೆಣಿಕೆಯಷ್ಟು ಮುಖಂಡರು ಅದಾಗಲೇ ಯಡಿಯೂರಪ್ಪ ಅವರಿಂದ ಮಾನಸಿಕವಾಗಿ ಬಹುದೂರ ಸಾಗಿಹೋಗಿದ್ದಾರೆ ಎನ್ನಲಾಗಿದೆ.
ಕುತೂಹಲದ ಸಂಗತಿಯೆಂದರೆ ಸ್ವತಃ ಯಡಿಯೂರಪ್ಪ ಅವರೂ ಈ ಬೆಳವಣಿಗೆಗಳಿಂದ ವಿಚಲಿತರಾದಂತೆ ಕಂಡುಬಂದಿಲ್ಲ. ಎಲ್ಲವೂ ನಿರೀಕ್ಷಿತ ಎಂಬಂತೆ ಸ್ಥಿರಪ್ರಜ್ಞರಾಗಿ ಉಳಿದಿದ್ದಾರೆ. ಹಿರೇಕೆರೂರು ಶಾಸಕ ಯುಬಿ ಬಣಕಾರ್ ಒಬ್ಬರೇ ಯಡಿಯೂರಪ್ಪ ಜತೆ ಉಳಿದುಕೊಂಡಿರುವವರು ಎನ್ನಲಾಗಿದೆ.

ಯಾರೆಲ್ಲಾ ಈಡುಗಾಯಿ ಹೊಡೆಯುತ್ತಿದ್ದಾರೆ?
ಈಗಾಗಲೇ ಮುಖಂಡರಾದ ಕೆ ಮುಕುಡಪ್ಪ, ಮಾಜಿ ಶಾಸಕರಾದ ಎಚ್ಎಂ ವಿಶ್ವನಾಥ್, ವೈಜನಾಥ್ ಪಾಟೀಲ್ ಮೊದಲಾದವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ತಮ್ಮ ಹಾದಿ ತಾವು ನೋಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ ಶಾಸಕರೂ ಹೊರಹೋಗುವ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಈಡುಗಾಯಿ ಚೂರು ಯಾವ ಪಕ್ಷಕ್ಕೆ?
ಮುಖಂಡರ ಆದಿಯಾಗಿ ಶಾಸಕರೂ ಲೋಕಸಭಾ ಚುನಾವಣೆಗೆ ಮುನ್ನವೇ ಅಥವಾ ಆನಂತರ ಕೈ ಬಲ ಪಡಿಸುವ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ.

ಕಾರಣವಾದರೂ ಏನು?:
ಮುಖ್ಯವಾಗಿ, ಯಡಿಯೂರಪ್ಪ ಕೆಜೆಪಿ ಸಂಘಟನೆಗೆ ಗಂಭೀರ ಪ್ರಯತ್ನ ನಡೆಸದೆ ಬಿಜೆಪಿಗೆ ವಾಪಸಾಗುವತ್ತಲೇ ಗಮನಹರಿಸಿರುವುದು. ಮಾಜಿ ಸಚಿವ ವೈಜನಾಥ್ ಪಾಟೀಲ್ ಅವರು ಹೇಳುವಂತೆ ಯಡಿಯೂರಪ್ಪ ಕೆಜೆಪಿಯನ್ನು ತೃತೀಯ ಶಕ್ತಿಯನ್ನಾಗಿ ಬೆಳೆಸುತ್ತಾರೆ ಎಂಬ ವಿಶ್ವಾಸವಿತ್ತು. ಅಂಥ ಶಕ್ತಿಯೂ ಅವರಿಗಿದೆ. ಆದರೆ ಆ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಯಡಿಯೂರಪ್ಪ ಪಕ್ಷ ಸಂಘಟನೆಗೆ ಲಕ್ಷ್ಯ ವಹಿಸದೆ ಗೊಂದಲದಲ್ಲಿ ಮುಳುಗಿರುವುದು.

ಯಡಿಯೂರಪ್ಪ ಜತೆಯೇ ಇದ್ದರೆ ಭವಿಷ್ಯವಿಲ್ಲ ಎಂಬ ಲೆಕ್ಕಾಚಾರ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರಿಂದ ಮುಕ್ತ ಆಹ್ವಾನ ಬಂದಿದೆ ಎನ್ನಲಾಗಿದೆ. ಇದರಿಂದ ಯಡಿಯೂರಪ್ಪನ ಕೆಜೆಪಿಯಲ್ಲೇ ಇದ್ದರೆ ರಾಜಕೀಯ ಭವಿಷ್ಯವಿಲ್ಲ ಎಂಬ ಲೆಕ್ಕಾಚಾರ ಇವರದು.
ಬಿಜೆಪಿ ಬದಲು ಆಡಳಿತಾರೂಢ ಕಾಂಗ್ರೆಸನ್ನು ಬೆಂಬಲಿಸುವುದರಿಂದ ಮುಂದಿನ ನಾಲ್ಕು ವರ್ಷಗಳ ಕಾಲ ತಮ್ಮ ಕ್ಷೇತ್ರಕ್ಕೆ ಅನುದಾನ ಸೇರಿದಂತೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇಲ್ಲಿ ಸಕ್ರಿಯವಾಗಿದೆ.

ಬಹುತೇಕರು ಕಾಂಗ್ರೆಸ್ ಮೂಲದಿಂದ ಬಂದವರೇ
ಅಷ್ಟಕ್ಕೂ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಕೆಜೆಪಿಯ ಹಾಲಿ ಶಾಸಕರ ಪೈಕಿ ಬಹುತೇಕರು ಕಾಂಗ್ರೆಸ್ ಮೂಲದಿಂದ ಬಂದವರೇ. ಏನೋ, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲಾಂತ ಅನಿವಾರ್ಯವಾಗಿ ಕೆಜೆಪಿಗೆ ಸೇರ್ಪಡೆಗೊಂಡಿದ್ದರು.

ಕಾಂಗ್ರೆಸ್ಸಿನಲ್ಲೇ ಇದ್ದಿದ್ದರೆ ಇಷ್ಟೊತ್ತಿಗೆ ಸಚಿವನಾಗಿಬಿಡುತ್ತಿದೆ
ಬೀದರ್ ಕ್ಷೇತ್ರದ ಗುರುಪಾದಪ್ಪ ನಾಗಮಾರಪಲ್ಲಿ, ಆಳಂದ ಕ್ಷೇತ್ರದ ಬಿಆರ್ ಪಾಟೀಲ್ ಅವರು ಈಗಾಗಲೇ ಮಾನಸಿಕವಾಗಿ ಕೆಜೆಪಿ ತೊರೆಯಲು ಸಿದ್ಧತೆ ನಡೆಸಿದ್ದಾರೆ. ಗುರುಪಾದಪ್ಪ ಅವರಂತೂ ಕಾಂಗ್ರೆಸ್ಸಿನಲ್ಲೇ ಇದ್ದಿದ್ದರೆ ಇಷ್ಟೊತ್ತಿಗೆ ಸಚಿವನಾಗಿಬಿಡುತ್ತಿದೆ ಎಂದು ಹಲುಬಿದ್ದಾರೆ. ಜತೆಗೆ, ಶಹಾಪೂರ ಕ್ಷೇತ್ರದ ಗುರುಪಾಟೀಲ್ ಮತ್ತು ಬೈಲಹೊಂಗಲ ಕ್ಷೇತ್ರದ ವಿಶ್ವನಾಥ್ ಪಾಟೀಲ ಅವರನ್ನು ಮನವೊಲಿಸುವ ಪ್ರಯತ್ನವೂ ಜಾರಿಯಲ್ಲಿದೆ. ಇವರಿಬ್ಬರೂ ಕೆಜೆಪಿ ತೊರೆಯುವ ನಿರ್ಧಾರಕ್ಕೆ ಬರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಪಕ್ಷಾಂತರ ನಿಷೇಧ ಕಾಯ್ದೆಯ ರಗಳೆಯೂ ಇಲ್ಲ
ಆದರೆ, ಏಕಾಏಕಿ ಈ ಶಾಸಕರು ಕೆಜೆಪಿ ತೊರೆದು ಕಾಂಗ್ರೆಸ್ ಅಥವಾ ಅನ್ಯ ಪಕ್ಷವನ್ನು ಸೇರ್ಪಡೆಯಾಗುವಂತಿಲ್ಲ. ಈಗಿರುವ 6 ಶಾಸಕರ ಪೈಕಿ 3ನೇ ಎರಡು ಭಾಗದಷ್ಟು ಅಂದರೆ, ನಾಲ್ವರು ಪಕ್ಷದಿಂದ ಹೊರ ಬಂದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ರಗಳೆಯಿಲ್ಲದೆ ತಾವು ನಡೆದಿದ್ದೇ ಹಾದಿ ಎಂಬಂತೆ ಲೋಕಸಭಾ ಚುನಾವಣೆಗೂ ಮುನ್ನವೇ ವಿಧಾನಸಭೆಯ ಪ್ರತ್ಯೇಕ ಸ್ಥಾನಮಾನ ದಕ್ಕಿಸಿಕೊಳ್ಳಬಹುದು. ಆಪರೇಶನ್ ಕಾಂಗ್ರೆಸ್ ಎನಿಸಿಕೊಳ್ಳದೆ ನಾಲ್ಕೂ ಶಾಸಕರು ಮತ್ತೂಂದು ಚುನಾವಣೆ ಎದುರಿಸುವ ಅಗತ್ಯವೂ ಬೀಳುವುದಿಲ್ಲ.

ಹಾಲಿ ಕೆಜೆಪಿ ಶಾಸಕರು ಇವರೇ
1. BS Yedyurappa ( Shikaripura)
2. Vishwanath I Patil (Bailhongala)
3. Guru Patil Shiraval (Shahpur)
4. Gurupadappa Nagamarpalli (Bidar)
5. UB Banakar (Hirekerur)
6. Bhojaraj Ramachandra Patil(Aland)

ಯುಬಿ ಬಣಕಾರ್ ಒಬ್ಬರೇ ಯಡಿಯೂರಪ್ಪ ಜತೆ
ಹಿರೇಕೆರೂರು ಶಾಸಕ ಯುಬಿ ಬಣಕಾರ್ ಒಬ್ಬರೇ ಯಡಿಯೂರಪ್ಪ ಜತೆ ಉಳಿದುಕೊಂಡಿರುವವರು ಎನ್ನಲಾಗಿದೆ.












Click it and Unblock the Notifications