ಶಿಕ್ಷಣ ತಜ್ಞ ಕುರುಂಜಿ ವೆಂಕಟರಮಣ ಗೌಡ ಇನ್ನಿಲ್ಲ
ಆಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಮೂಲಕ ಕೆವಿಜಿ ವಿದ್ಯಾಸಂಸ್ಥೆಗಳ ಸಮೂಹ ಹುಟ್ಟು ಹಾಕಿ ಶಿಕ್ಷಣ ಕ್ಷೇತ್ರದಲ್ಲಿ ವೆಂಕಟರಮಣ ಗೌಡ ಅವರು ಹೊಸ ಕ್ರಾಂತಿ ಮಾಡಿದರು. ಪ್ರಾಥಮಿಕ ಶಿಕ್ಷಣ, ತಾಂತ್ರಿಕ, ಆಯುರ್ವೇದ, ಡೆಂಟಲ್ ಹಾಗೂ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿದರು. ಶಿಕ್ಷಣದಿಂದ ಮಾನವ ಪರಿಪೂರ್ಣತೆ ಹೊಂದಲು ಸಾಧ್ಯ. 'ಜ್ಞಾನಂ ಸರ್ವತ್ರ ಸಾಧನಂ' ಎಂಬ ತತ್ತದಡಿಯಲ್ಲಿ ವಿದ್ಯಾಸಂಸ್ಥೆಗಳನ್ನು ಬೆಳೆಸಿಕೊಂಡು ಬಂದವರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲಿ ಕೆವಿಜಿ ಕಾಲೇಜ್ ಆಫ್ ಇಂಜಿನಿಯರ್ ಈಗ ಮೆಕ್ಯಾನಿಕಲ್, ಕೆಮಿಕಲ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸಂಶೋಧನಾ ಕೇಂದ್ರವಾಗಿ ಬೆಳೆದಿದೆ. ಸಾವಿರಾರು ವಿದ್ಯಾರ್ಥಿಗಳು ಕೆವಿಜಿ ವಿದ್ಯಾಸಂಸ್ಥೆಯಿಂದ ಪ್ರಗತಿ ಹೊಂದಿದ್ದಾರೆ. ನವದೆಹಲಿ ಹಾಗೂ ಬೆಂಗಳೂರು ಸೇರಿದಂತೆ 40ಕ್ಕೂ ಅಧಿಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅನೇಕ ಕಡೆ ಪ್ರತಿಭಾವಂತರನ್ನು ಗುರುತಿಸಿ ಉದ್ಯೋಗ ಒದಗಿಸಿದ್ದಾರೆ.
ತಾಲೂಕಿನಲ್ಲಿರುವ ನೂರಕ್ಕೂ ಅಧಿಕ ಮಹಿಳಾ ಕ್ಲಬ್ ಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಕಾರ್ಯ ನಿರತರಾಗಿದ ಕೆವಿಜಿ ಅವರು ಗಾಂಧೀಜಿ ಸಿದ್ಧಾಂತ ಪ್ರತಿಪಾದಕರಾಗಿದ್ದವರು. ಶಿಕ್ಷಣದ ಮೂಲಕ ಸುಳ್ಯದ ಚಿತ್ರಣವನ್ನೇ ಬದಲಾಯಿಸಿದವರು.
ಯುಎಸ್ಎನ ಫೋರಿಡಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ರಾಜೀವ್ ಗಾಂಧಿ ಏಕತಾ ಪ್ರಶಸ್ತಿ, ಪರಿಸರ ರತ್ನ ಪ್ರಶಸ್ತಿ, ವಿಕಾಸ್ ಜ್ಯೋತಿ ಪ್ರಶಸ್ತಿ, ಇಂದಿರಾಗಾಂಧಿ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉಡುಪಿ ಮನುಕುಲ ಭೂಷಣ, ಅಂತಾರಾಷ್ಟ್ರೀಯ ಗೋಲ್ಡ್ ಸ್ಟಾರ್ ಮಿಲೇನಿಯಂ ಪ್ರಶಸ್ತಿ, ಮದರ್ ಎಕ್ಸ್ ಲೆನ್ಸ್, ನೇಪಾಳ್ ಫ್ರೆಂಡ್ ಶಿಪ್, ರಾಷ್ಟ್ರೀಯ ರತ್ನ ಸೇರಿದಂತೆ ಅನೇಕ ಪ್ರಶಸ್ತಿಗಳು ವೆಂಕಟರಮಣ ಗೌಡ ಅವರನ್ನು ಹುಡುಕಿಕೊಂಡು ಬಂದಿತ್ತು.
2012ರಲ್ಲಿ ಪತ್ನಿ ಜಾನಕಿ ಅವರನ್ನು ಕಳೆದುಕೊಂಡಿದ್ದ ಕುರುಂಜಿ ವೆಂಕಟರಮಣ ಗೌಡರು ಪುತ್ರರಾದ ಡಾ. ಕೆವಿ ಚಿದಾನಂದ, ಡಾ. ರೇಣುಕಾ ಪ್ರಸಾದ್, ಪುತ್ರಿ ಗೋವರ್ಧಿನಿ ಜಯಕುಮಾರ್ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.