ಬದುಕಿ ಬರಲಿಲ್ಲ ಚಿತ್ರದುರ್ಗದ ಚೇತನಾ
ಚೇತನಾ (21) ಬುಧವಾರ ಮುಂಜಾನೆ 4.30ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಜುಲೈ 25ರಿಂದ ಚೇತನಾ ಅವರ ಸ್ಥಿತಿ ಗಂಭೀರವಾಗಿತ್ತು, ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.
ಚಿತ್ರದುರ್ಗದ ಕೃಷ್ಣಾ ಆಸ್ಪತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚೇತನಾ ಅವರಿಗೆ ಅರಿವಳಿಕೆ ಔಷಧಿ ನೀಡಿದ್ದರಿಂದ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಅವರಿಗೆ ಮೆದುಳಿನ ಸೋಂಕು ಉಂಟಾಗಿದ್ದರಿಂದ, ನಿಮ್ಹಾನ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಜುಲೈ 21ರಂದು ಚೇತನಾ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಾಳಿ ಬದುಕಬೇಕಾದ ಯುವತಿ ಸಾವನ್ನಪ್ಪಿದ್ದಾಳೆ. (ಚಿತ್ರದುರ್ಗದ ಚೇತನಾ ಸ್ಥಿತಿ ಗಂಭೀರ)
ಚಿತ್ರದುರ್ಗ ಜಿಲ್ಲೆಯ ಹಿರೇಬೆನ್ನೂರು ಗ್ರಾಮದ ಚೇತನಾ ನಿದ್ರಾಹೀನತೆಯಿಂದ ಬಳಲುತ್ತಿದ್ದರು. ಅವರನ್ನು ನಗರದ ಕೃಷ್ಣಾ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ವೈದ್ಯರು ಅವರಿಗೆ, ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿದ್ದರಿಂದ, ಕೋಮಾ ಸ್ಥಿತಿಗೆ ತಲುಪಿದ್ದರು.
ಎರಡು ದಿನಗಳಾದರೂ ಚೇತನಾ ಎಚ್ಚರವಾಗದ ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಒಂದು ವಾರ ಕಳೆದರೂ, ಪ್ರಜ್ಞೆ ಬಂದಿರಲಿಲ್ಲ. ವೈದ್ಯರು ಆಕೆ ಚೇತರಿಸಿಕೊಳ್ಳುವ ಭರವಸೆ ನೀಡದಿದ್ದಾಗ, ಪೋಷಕರು ವಾಪಸ್ ಮನೆಗೆ ಕರೆತಂದಿದ್ದರು. ಆರೋಗ್ಯ ಸಚಿವ ಯು.ಟಿ.ಖಾದರ್ ಸಲಹೆಯಂತೆ ಜು.21ರಂದು ಚೇತನಾ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಂದಿನಿಂದಲೂ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಯುವತಿ ಕೋಮಾ ಸ್ಥಿತಿಗೆ ಬರಲು ಕಾರಣವಾದ ಚಿತ್ರದುರ್ಗದ ಕೃಷ್ಣಾ ಆಸ್ಪತ್ರೆಯನ್ನು ಸರ್ಕಾರ ತಾತ್ಕಾಲಿಕವಾಗಿ ಮುಚ್ಚಿದೆ. ಆಸ್ಪತ್ರೆಯ ವೈದ್ಯರಾದ ದೀಪಕ್ ಅವರ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು. (ವೈದ್ಯರ ಯಡವಟ್ಟು, ಯುವತಿ ಕೋಮಾ ಸ್ಥಿತಿಗೆ)
ವೈದ್ಯ ದೀಪಕ್ ಪ್ರತಿಕ್ರಿಯೆ : ಚೇತನಾ ಅವರು ನಮ್ಮ ಆಸ್ಪತ್ರಗೆ ದಾಖಲಾದಾಗ ರೇಬಿಸ್ ಸೋಕಿನಿಂದ ಬಳಲುತ್ತಿದ್ದರು. ಮಣಿಪಾಲ್ ಮತ್ತು ನಿಮ್ಹಾನ್ಸ್ ಆಸ್ಪತ್ರೆಯ ವೈದರು ಇದನ್ನು ದೃಡಪಡಿಸಿದ್ದಾರೆ. ಆದ್ದರಿಂದ ಚೇತನಾ ರೇಬಿಸ್ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿದ್ದರಿಂದ ಮೃತಪಟ್ಟಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ನನ್ನ ಯಾವುದೇ ತಪ್ಪಿಲ್ಲ ಎಂದು ಕೃಷ್ಣಾ ಆಸ್ಪತ್ರೆಯ ವೈದ್ಯರಾದ ಡಾ.ದೀಪಕ್ ಪ್ರತಿಕ್ರಿಯೆ ನೀಡಿದ್ದಾರೆ.
ರೇಬಿಸ್ ನಿಂದಾಗಿ ಚೇತನಾ ಸಾವು : ಚೇತನಾ ಸಾವಿಗೆ ರೆಬೀಸ್ ರೋಗ ಕಾರಣ. ಹೆಚ್ಚಿನ ಪ್ರಮಾಣದ ಅನಸ್ತೇಶಿಯಾ ನೀಡಿದ್ದರಿಂದ ಆಕೆ ಮೃತಪಟ್ಟಿಲ್ಲ ಎಂದು ನಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕ ಡಾ.ಸತೀಶ್ ಸ್ಪಷ್ಟಪಡಿಸಿದ್ದಾರೆ. ರೇಬಿಸ್ ಸೋಂಕಿನಿಂದಾಗಿ ಚೇತನಾ ಅವರಿಗೆ ನರ ಮತ್ತು ಮೆದುಳಿನ ಸೋಂಕು ಉಂಟಾಗಿತ್ತು. ನಾವು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.