ಮೊಳಕಾಲ್ಮೂರು : ಸರಣಿ ಅಪಘಾತದಲ್ಲಿ 4 ಜನ ಬಲಿ

ಮುಂಜಾನೆ 3 ಗಂಟೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಮೀನು ತುಂಬಿಕೊಂಡು ಬರುತ್ತಿದ್ದ ಮಿನಿ ಲಾರಿ ನಡುವೆ ಬಿಜೆಕೆರೆ ಕ್ರಾಸ್ ಬಳಿ ಡಿಕ್ಕಿ ಸಂಭವಿಸಿದೆ. ಮಿನಿ ಲಾರಿ ಬಳ್ಳಾರಿಯಿಂದ ತುಮಕೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ನಂತರ ಮಿನಿ ಲಾರಿ ಬೊಲೆರೋ ವಾಹನಕ್ಕೆ ಗುದ್ದಿದೆ. ಶಹಾಪುರದ ಹುಲಿಕಲ್ ಗ್ರಾಮದ ಬಸ್ ಚಾಲಕ ಲಿಂಗಣ್ಣ, ತುಮಕೂರಿನ ಲಾರಿ ಚಾಲಕ ನಿಯಾಜ್, ಸಾನು, ಭಕ್ಷ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬಸ್ ನ ಹಿಂದೆ ಬರುತ್ತಿದ್ದ ಬೊಲೆರೊ ಕಾರೊಂದು ಇದೇ ವೇಳೆ ಬಸ್ ಗೆ ಡಿಕ್ಕಿ ಹೊಡೆಯಿತಾದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಾಳುಗಳ ಪೈಕಿ 9 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದ 3 ಜನರನ್ನು ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಬಸ್ ಹಾಗೂ ಲಾರಿ ಚಾಲಕ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಬಸವನಗೌಡ(42), ನಾಗಮ್ಮ(30), ರಾಮೇಗೌಡ(40), ಸಾಯಿಗೌಡ(41), ಮಣಿ(17), ಪ್ರಶಾಂತ(27), ರಾಜಣ್ಣ(20), ಶಿವಶರಣಪ್ಪ(40), ಚೈತನ್ಯ (24), ಖಾಸಿಂ(40), ಸೂರಜ್(40) ಹಾಗೂ ಭರಮಣ್ಣ(50) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ಪೊಲೀಸ್ ಉಪ ವಿಭಾಗಾಧಿಕಾರಿ ಶೇಖರ್ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications