ಸಿದ್ದರಾಮಯ್ಯ ಕಿವಿ ಹಿಂಡಿ ಪಾಠ ಹೇಳಿದ ರಾಜ್ಯಪಾಲರು!
ಬೆಂಗಳೂರು, ಆ.2 : ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಪಾಲರು ಮತ್ತೊಮ್ಮೆ ಗುಡುಗಿದ್ದಾರೆ. ಸರ್ಕಾರದ ಎರಡು ತಿಂಗಳ ಆಡಳಿತ ತೃಪಿ ತಂದಿಲ್ಲ. ಜನರು ನಿಮ್ಮ ಮೇಲೆ ವಿಶ್ವಾಸವನ್ನು ಉಳಿಸಿಕೊಳ್ಳಿ ಎಂದು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ಗುರುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿದ್ದರು, ಬಜೆಟ್ ಅಧಿವೇಶನ ಅಂತ್ಯಗೊಂಡ ಹಿನ್ನಲೆಯಲ್ಲಿ ರಾಜ್ಯಪಾಲರನ್ನು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಸಮಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯಪಾಲರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿನಲ್ಲಿ ಸರ್ಕಾರದ ಕೆಲವು ನಡವಳಿಕೆಗಳು ನನಗೆ ತೃಪ್ತಿ ತಂದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ಅಂಬಿ ವಿರುದ್ಧ ಗರಂ : ರಾಜ್ಯಪಾಲರು ವಸತಿ ಸಚಿವ ಅಂಬರೀಶ್ ವಿರುದ್ಧ ಗರಂ ಆಗಿದ್ದಾರೆ. ಅಂಬರೀಶ್ ಇತ್ತೀಚೆಗೆ ನಡೆದ ಕುದುರೆ ರೇಸ್ ನಲ್ಲಿ ಪಾಲ್ಗೊಂಡಿದ್ದರು. ಈ ಫೋಟೋ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಪಾಲರು, ಸಾರ್ವಜನಿಕ ಜೀವನದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿರುವವರು ಹೀಗೆ ಕುದುರೆ ರೇಸ್ ನಲ್ಲಿ ಭಾಗವಹಿಸಬಾರದು. ಇದರಿಂದ ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಅವರ ಬಳಿ ಹೇಳಿದ್ದಾರೆ.
ತಂಗಡಗಿ ವಿರುದ್ದವೂ ಕೋಪ : ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್.ತಂಗಡಗಿ ವಿರುದ್ಧವೂ ರಾಜ್ಯಪಾಲರು ಕೋಪಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು.
ಇದು ರಾಜ್ಯಪಾಲರ ಕೋಪಕ್ಕೆ ಕಾರಣವಾಗಿದ್ದು, ಸಚಿವ ಸಂಪುಟದ ಸದಸ್ಯರು ಇಂತಹ ವಿವಾದಗಳಿಗೆ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯಪಾಲರು ಸಿಎಂಗೆ ಕಿವಿ ಹಿಂಡಿದ್ದಾರೆ.
ಉಳಿದಂತೆ ಡೆಂಗ್ಯೂ ನಿಯಂತ್ರಣ, ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆ, ನಮ್ಮ ಮೆಟ್ರೋ ಕಾಮಗಾರಿ ಪೂರ್ಣ ಮುಂತಾದ ವಿಚಾರಗಳಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ಕೆಲವು ದಿನಗಳಿಂದ ಕಾರ್ಯಕ್ರಮಗಳಲ್ಲಿ ಸರ್ಕಾರದ ವಿರುದ್ಧ ಗುಡುಗುತ್ತಿದ್ದ ರಾಜ್ಯಪಾಲರು ಈಗ, ಸಿಎಂ ಮುಂದೆಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಇದನ್ನು ಸಿಎಂ ಹೇಗೆ ಸ್ವೀಕರಿಸುತ್ತಾರೆ? ಎಂದು ಕಾದು ನೋಡಬೇಕು.












Click it and Unblock the Notifications