ಪಕ್ಷದ ನಾಯಕರ ಬಾಯಿಗೆ ರಾಹುಲ್ ಗಾಂಧಿ ಬೀಗ!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಡಿಸಿರುವ ಆದೇಶದ ಪ್ರಕಾರ, ಪಕ್ಷದ ಯಾವ ನಾಯಕರು ಅನಗತ್ಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಂತಿಲ್ಲ. ಅದರಲ್ಲೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆಯಂತೂ ಟೀಕೆ ಮಾಡುವಂತಿಲ್ಲ. ತಮ್ಮ ಮಾಧ್ಯಮ ನೀತಿಯ ಮೂಲಕ ರಾಹುಲ್ ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಮುಂದಾಗಿದ್ದಾರೆ.
ಮಾಧ್ಯಮ ಮತ್ತು ನಾಯಕರ ನಿರ್ವಹಣೆಗಾಗಿ ನೂತನವಾಗಿ ಇಬ್ಬರು ಮಾಧ್ಯಮ ಸಂಚಾಲಕರನ್ನು ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ. ಪಕ್ಷದ ಯಾವುದೇ ನಾಯಕರು ಸಂಚಾಲಕರ ಅನುಮತಿ ಇಲ್ಲದೆ, ಬಹಿರಂಗವಾಗಿ ಯಾವುದೇ ಹೇಳಿಕೆಗಳನ್ನು ನೀಡುವಂತಿಲ್ಲ. ಇದನ್ನು ಮೀರಿದರೆ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ.
ಪಕ್ಷದ ನಾಯಕರು ಮಾಧ್ಯಮಗಳ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನವೂ ಮಾಧ್ಯಮ ಸಂಚಾಲಕರ ಅನುಮತಿ ಪಡೆಯಬೇಕಾಗಿದೆ. ಅನುಮತಿ ಇಲ್ಲದೇ ಮಾಧ್ಯಮಗಳ ಮುಂದೆ ವಿವಾದಾತ್ಮಕ ಹೇಳಿಕೆ ನೀಡುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಮೋದಿ ಬಗ್ಗೆ ಮಾತು ಬೇಡ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಪಕ್ಷದ ಯಾವ ನಾಯಕರು ಅನುಮತಿ ಇಲ್ಲದೆ ಹೇಳಿಕೆ ನೀಡಬಾರದು ಎಂದು ರಾಹುಲ್ ಗಾಂಧಿ ಆದೇಶಿಸಿದ್ದಾರೆ. ಮೋದಿ ಟೀಕೆಗಳಿಗೆ ಉತ್ತರ ನೀಡುತ್ತಾ, ಅವರಿಗೆ ಸುಮ್ಮನೆ ಪ್ರಚಾರ ಕೊಡಬೇಡಿ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸಂಚಾಲರ ನೇಮಕ : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದ ನಾಯಕರ ವಿವಾದಾತ್ಮಕ ಹೇಳಿಕೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ದೇಶದಲ್ಲಿ ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ರಾಹುಲ್ ಗಾಂಧಿ ನಾಯಕರ ಬಾಯಿಗೆ ಬೀಗ ಹಾಕಿದ್ದಾರೆ. ಪಕ್ಷದ ನಾಯಕರು ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳುವುದು, ಹೇಳಿಕೆ ನೀಡುವುದು ಮುಂತಾದವುಗಳನ್ನು ನೋಡಿಕೊಳ್ಳಲು ಇಬ್ಬರು ಮಾಧ್ಯಮ ಸಂಚಾಲಕರನ್ನು ನೇಮಿಸಿದ್ದಾರೆ. ನಾಯಕರು ಚರ್ಚೆಯಲ್ಲಿ ಭಾಗವಹಿಸುವ ಮುನ್ನ ಇವರ ಅನುಮತಿ ಪಡೆಯುವುದು ಕಡ್ಡಾಯ.












Click it and Unblock the Notifications