ಲೋಕಸಭೆಗೆ ಸ್ಪರ್ಧಿಸದಿರಲು ಅಡ್ವಾಣಿ ನಿರ್ಧಾರ?
ನವದೆಹಲಿ, ಆಗಸ್ಟ್ 1: ಬಿಜೆಪಿಯ ಪ್ರಧಾನಿ ಅಭ್ಯರ್ಥಿಯ ಘೋಷಣೆ ಸಂಬಂಧ ರಾಜಧಾನಿಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ಬಿರುಸಿನ ಚುಟವಟಿಕೆ/ ಸಭೆಗಳು ನಡೆಯುತ್ತಿದ್ದರೆ ಇತ್ತೀಚೆಗೆ ಬಿಜೆಪಿಯ ಭೀಷ್ಮ ಪಿತಾಮಹ ಎನಿಸಿರುವ ಎಲ್ ಕೆ ಅಡ್ವಾಣಿ ಅವರು ಅದರಿಂದ ದೂರ ಉಳಿದಿದ್ದಾರೆ. ಅಷ್ಟೇ ಅಲ್ಲ. ಇನ್ನು ಮುಂದೆ ಚುನಾವಣೆಗಳಿಂದಲೂ ವಿಮುಖವಾಗುವ ಇಂಗಿತ ಹೊಂದಿದ್ದಾರೆ ಎನ್ನಲಾಗಿದೆ.
ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರ ಜತೆಗೆ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ್ ಜೋಷಿ ಅವರೂ ಸಹ ಚುನಾವಣಾ ಸ್ಪರ್ಧೆಗಳಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. ಪಕ್ಷದಲ್ಲಿ ಕಿರಿಯರಿಗೆ ಅವಕಾಶ ಮಾಡಿಕೊಡಬೇಕೆಂಬ ಹಿನ್ನೆಲೆಯಲ್ಲಿ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಬಿಜೆಪಿಯ ದೆಹಲಿ ಮೂಲಗಳು ತಿಳಿಸಿವೆ.

ಇನ್ನೊಂದು ಮೂಲಗಳ ಪ್ರಕಾರ ಸ್ವತಃ ಅಡ್ವಾಣಿಯೇ ಸ್ಪರ್ಧಿಸಲು ನಿರಾಸಕ್ತಿ ಹೊಂದಿದ್ದರು. ಜೋಶಿ ಕೂಡ ಇದೇ ಹಾದಿಯನ್ನು ಅನುಸರಿಸಿದ್ದಾರೆ. ಪಕ್ಷದೊಳಗೆ ಒಂದು ಗುಂಪು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಜೈಕಾರ ಹಾಕುತ್ತಿದೆ. ಹೀಗಾಗಿ ಪಕ್ಷದಲ್ಲಿದ್ದು ಮುಜುಗರ ಅನುಭವಿಸುವ ಬದಲು ಪಕ್ಷದಲ್ಲಿ ಪೋಷಕ ಪಾತ್ರ ವಹಿಸುವುದೇ ಸರಿಯಾದ ತೀರ್ಮಾನ ಎಂಬ ಲೆಕ್ಕಾಚಾರಕ್ಕೆ ಭೀಷ್ಮ ಪಿತಾಮಹ ಅಡ್ವಾಣಿ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಬಹಿರಂಗವಾಗಿ ಎಲ್ಲಿಯೂ ಅಡ್ವಾಣಿಯಾಗಲೀ ಅಥವಾ ಜೋಶಿ ಅವರಾಗಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿಲ್ಲ. ಆದರೆ ಪಕ್ಷದೊಳಗೆ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಇಬ್ಬರೂ ಹಿರಿಯ ನಾಯಕರು ಸಕ್ರಿಯ ಚುನಾವಣಾ ಕಣದಿಂದಲೇ ದೂರ ಸರಿಯುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
ಗಮನಾರ್ಹವೆಂದರೆ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಚುನಾವಣಾ ಸಮಿತಿಯಲ್ಲಿ ಅಡ್ವಾಣಿ ಮಾರ್ಗದರ್ಶಕರಾಗಿದ್ದರೆ ಜೋಷಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಅಡ್ವಾಣಿ ಅವರು ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ 1991, 1998, 1999, 2004, 2009 ರಿಂದ ಸತತವಾಗಿ ಆಯ್ಕೆಯಾಗಿದ್ದಾರೆ. ಮುರಳಿ ಮನೋಹರ ಜೋಶಿ ಅವರು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಹಾಲಿ ಲೋಕಸಭಾ ಸದಸ್ಯರಾಗಿದ್ದಾರೆ.












Click it and Unblock the Notifications