ಕಾವೇರಿದ ಆನೆ ದಾಳಿಯಿಂದ ಜಯಲಲಿತಾ ಬಚಾವ್!
ಮದುಮಲೈ, ಜುಲೈ 31: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೂ ಕಾವೇರಿಗೂ ಅವಿನಾಭಾವ ಸಂಭವವಿದೆ. ನದಿ ಕಾವೇರಿ ವಿಷಯದಲ್ಲಿ ಅಂತಿಮ ನಗು ಜಯಲಲಿತಾ ಅವರದ್ದೇ ಆಗಿದ್ದರೂ ಮುಗ್ಧ ಆನೆ ಮರಿ ಕಾವೇರಿ ನಿನ್ನೆ ಸೆಲ್ವಿ ಜಯಲಲಿತಾ ಮೇಲೆ ದಾಳಿ ನಡೆಸಿದೆ.
ಜಯಲಲಿತಾಗೆ ಆನೆಯೋಗ:
ತಮಿಳುನಾಡು ಸಿಎಂ ಜಯಾ ನಿನ್ನೆ ಮಂಗಳವಾರ ಮಧ್ಯಾಹ್ನ ಮದುಮಲೈ ಅಭಯಾರಣ್ಯದಲ್ಲಿರುವ ನೀಲಗಿರೀಸ್ ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ವೇಳೆ ಈ ಅವಘಡ ನಡೆದಿದೆ. ತಮಿಳು ಸೆಲ್ವಿ ಜಯಲಲಿತಾ ಸ್ವಲ್ಪದರಲ್ಲಿ ಬಚಾವಾಗಿದ್ದಾರೆ.

ನೀಲಗಿರೀಸ್ ತೆಪ್ಪಕಾಡು ಆನೆ ಶಿಬಿರದಲ್ಲಿ ಅವಾಂತರ
ನೀಲಗಿರೀಸ್ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿ, ಆನೆಗಳಿಗೆ ಹಣ್ಣು ಮತ್ತು ಕಬ್ಬು ತಿನ್ನಿಸುವ ಖುಷಿಯಲ್ಲಿ ಈ ಅವಾಂತರ ನಡೆದಿದೆ. ಎಲ್ಲಾ ಆನೆಗಳಿಗೆ ಕಬ್ಬು ತಿನ್ನಿಸಿದ ನಂತರ ಕೊನೆಗೆ ಮರಿಯಾನೆ 'ಕಾವೇರಿ' ಸಮೀಪ ಬಂದ ಮೇಡಂ ಜಯಲಲಿತಾ ಸೊಂಡಿಲನ್ನು ಮುಟ್ಟಿ ಖುಷಿಪಟ್ಟರು.

ಆಯತಪ್ಪಿ ಬೀಳುತ್ತಿದ್ದ ಜಯಲಲಿತಾ ಕೈಹಿಡಿದ ಭದ್ರತಾ ಸಿಬ್ಬಂದಿ
ಆದರೆ ಜನರ ಗುಂಪು ಕಂಡ ಮರಿಯಾನೆ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡಿತ್ತು. ಜಯಲಲಿತಾ ಅವರು ಸೊಂಡಿಲು ಮುಟ್ಟುತ್ತಿದ್ದಂತೆ ಅವರತ್ತ ನುಗ್ಗಿ ಬಂದಿದೆ. ಆಯತಪ್ಪಿ ಬೀಳುತ್ತಿದ್ದ ಜಯಲಲಿತಾರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಮರಿಯಾನೆಯನ್ನು ನಿಯಂತ್ರಿಸಿ, ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.

ಶಕುನ- ಅಪಶಕುನದ ಬಗ್ಗೆ ತಮಿಳುನಾಡಿನಲ್ಲಿ ಚರ್ಚೆ
ಜಯಲಲಿತಾಗೆ ಆನೆ ಮೇಲೆ ಹಿಂದಿನಿಂದಲೂ ಭಾರೀ ಪ್ರೀತಿ. ಈ ಹಿಂದೆ ಮೈಸೂರಿನ ಚಾಮುಂಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೂ ಜಯಲಲಿತಾ ಆನೆ ಕಾಣಿಕೆ ಸಲ್ಲಿಸಿದ್ದರು. ಜಯಾ ಮೇಲೆ ದಾಳಿ ಮಾಡಿದ ಆನೆ ತಮಿಳುನಾಡಿನ ಶ್ರೀರಂಗಂ ದೇವಾಲಯದ್ದು. ಆನೆ ದಾಳಿಯ ನಂತರ ಶಕುನ ಮತ್ತು ಅಪಶಕುನದ ಬಗ್ಗೆ ತಮಿಳುನಾಡಿನಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

ಅಪಶಕುನದ ಮುನ್ಸೂಚನೆಯೇ?
ಇದೊಂದು ಅಪಶಕುನದ ಮುನ್ಸೂಚನೆ, ಜಯಾ ಮೇಲೆ ದೇವರು ಮುನಿಸಿ ಕೊಂಡಿದ್ದಾರೆ ಎಂದು ಒಂದು ವಾದವಾದರೆ, ಆನೆ ದಾಳಿ ನಡೆದರೆ ರಾಜಯೋಗವಿದೆ ಎಂದರ್ಥ ಎನ್ನುವುದು ಪ್ರತಿವಾದ. ಅಂದರೆ ಈ ಘಟನೆಯಿಂದಾಗಿ ಜಯಲಲಿತಾಗೆ ರಾಜಯೋಗ ಅಕ್ಷಯವಾಗಲಿದೆ ಎಂಬ ಗುಲ್ಲೆದ್ದಿದೆ.












Click it and Unblock the Notifications