ಚೀನಾದಲ್ಲಿ ಅರುಣಾಚಾಲ; 'ಮಹಾ' ಪ್ರಮಾದ
ಪುಣೆ ಮೂಲದ ಸರ್ಕಾರಿ ಸ್ವಾಮ್ಯದ ಬಾಲ್ ಭಾರತಿ ಬ್ಯೂರೋ ಆಫ್ ಟೆಕ್ಸ್ ಬುಕ್ ಪ್ರಕಟಣಾ ಸಂಸ್ಥೆ ಮಾಡಿರುವ ಪ್ರಮಾದ ಅತ್ಯಂತ ಮುಜುಗರ ಹುಟ್ಟಿಸಿದೆ. ಹತ್ತನೇ ತರಗತಿ ಪಠ್ಯದಲ್ಲಿ ಭಾರತದ ಈಶಾನ್ಯ ಭಾಗದ ಪ್ರಮುಖ ರಾಜ್ಯ ಅರುಣಾಚಲ ಪ್ರದೇಶವನ್ನು ಚೀನಾಕ್ಕೆ ಸೇರಿಸಲಾಗಿದೆ. ಭಾರತದ ಭೂಪಟದಿಂದ ಅರುಣಾಚಲ ಪ್ರದೇಶ ಮಾಯವಾಗಿದ್ದು ಚೀನಾ ನಕ್ಷೆಯಲ್ಲಿ ಕಾಣಿಸಿಕೊಂಡಿದೆ.
ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ರಾಜೇಂದ್ರ ದರ್ದ ಅವರು ಇದು ದೊಡ್ಡ ಪ್ರಮಾದ ನಾವು ತಲೆತಗ್ಗಿಸುವಂತಾಗಿದೆ ಎಂದಿದ್ದಾರೆ. ಭಾರತದ ರಾಜ್ಯ ಅರುಣಾಚಾಲ ಪ್ರದೇಶ ನಮ್ಮ ಅವಿಭಾಜ್ಯ ಅಂಗ, ಹತ್ತನೇ ತರಗತಿ ಪುಸ್ತಕದ ಭೂಪಟದಲ್ಲಿ ಚಿತ್ರಿತವಾಗಿರುವುದು ತಪ್ಪಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಮುಖಂಡ ಸುಧೀರ್ ಮುಂಗಂಟಿವಾರ್ ಅವರು ಮಾತನಾಡಿ, ಸರ್ಕಾರ ಈ ಬಗ್ಗೆ ಈವರೆಗೂ ಕಣ್ಣು ಮುಚ್ಚಿ ಕುಳಿತ್ತಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಆದರೆ, ಇದೊಂದು ತಾಂತ್ರಿಕ ದೋಷದಿಂದ ಉಂಟಾದ ಪ್ರಮಾದ. ಪಠ್ಯದಲ್ಲಿರುವ ಇತರೆ 9 ನಕಾಶೆಗಳು ದೋಷರಹಿತವಾಗಿವೆ. ಈ ಭೂಪಟ ಕಣ್ತಪ್ಪಿನಿಂದ ಮುದ್ರಿತವಾಗಿರುವ ಸಾಧ್ಯತೆಯಿದೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ಶಿಕ್ಷಣ ತಜ್ಞರ ಸಮಿತಿ ನೇಮಿಸಿ ಹೊಸ ಪಠ್ಯ ಹಾಗೂ ನಕಾಶೆ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಸೂಚಿಸಲಾಗುವುದು ಎಂದು ಸಚಿವ ಸುಧೀರ್ ಹೇಳಿದರು.
ಆದರೆ, ಈ ಉತ್ತರದಿಂದ ವಿಪಕ್ಷಗಳೂ ತೃಪ್ತರಾಗದಿದ್ದಾಅಗ ಪುಸ್ತಕ ಮುದ್ರಿಸಿದ ಸಂಸ್ಥೆ ಮೇಲೆ ಎಫ್ ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಲಾಗುವುದು ಎಂಬ ಭರವಸೆಯನ್ನು ಸಚಿವ ಸುಧೀರ್ ನೀಡಿದರು.
ಮಹಾರಾಷ್ಟ್ರ ರಾಜ್ಯ ಶಿಕ್ಷಣ ಬೋರ್ಡ್ MSBSHSEನ ಅಡಿಯಲ್ಲಿ ಸುಮಾರು 1.5 ಮಿಲಿಯನ್ ವಿದ್ಯಾರ್ಥಿಗಳು ಈ ಪಠ್ಯ ಪುಸ್ತಕವನ್ನು ಓದುತ್ತಿದ್ದಾರೆ. ಈ ಹಿಂದೆ ಕೂಡಾ ಈ ರೀತಿ ಪ್ರಮಾದಗಳು ಮಹಾರಾಷ್ಟ್ರದ ಪಠ್ಯಗಳಲ್ಲಿ ಕಾಣಿಸಿಕೊಂಡಿತ್ತು. ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರನ್ನು ರಾಜ್ಯದ ಗಣ್ಯ ವ್ಯಕ್ತಿಗಳ ಪಟ್ಟಿಯಿಂದ ಹೊರಹಾಕಲಾಗಿತ್ತು.
(ಐಎಎನ್ಎಸ್)