ದೇಶದ 7 ವಿ. ನಿಲ್ದಾಣದ ಮೇಲೆ ಉಗ್ರರ ಕೆಂಗಣ್ಣು
ನವದೆಹಲಿ, ಜು.21: ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಮತ್ತೊಮ್ಮೆ ಉಗ್ರರ ಕಣ್ಣು ಬಿದ್ದಿದೆ. ಹಲವಾರ ಉಗ್ರ ಸಂಘಟನೆಗಳು ಭಾರತದ 7 ವಿಮಾನ ನಿಲ್ದಾಣಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ಹಾಕಿಕೊಂಡಿದ್ದಾರೆ. ಈ ನಿಲ್ದಾಣಗಳಿಗೆ ಬಿಗಿ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗುಪ್ತಚರ ಇಲಾಖೆ ಭಾನುವಾರ ಸೂಚಿಸಿದೆ.
ಬೌದ್ಧರ ಧಾರ್ಮಿಕ ಕ್ಷೇತ್ರವಾದ ಬಿಹಾರದ ಬೋಧಗಯಾ ಇತ್ತೀಚೆಗೆ ಸಂಭವಿಸಿದ ಸ್ಪೋಟದ ನಂತರ ಗುಪ್ತಚರ ಇಲಾಖೆ ಬೆಂಗಳೂರು ಸೇರಿದಂತೆ 8 ನಗರಗಳಿಗೆ ಉಗ್ರರ ದಾಳಿ ಎಚ್ಚರಿಕೆ ನೀಡಿತ್ತು. ಬೊಧ್ ಗಯಾ ಸ್ಫೋಟ ಹಿಂದೆ ಕರ್ನಾಟಕ ಕರಾವಳಿ ಮೂಲದ ರಿಯಾಜ್ ಭಟ್ಕಳ ಕೈವಾಡ ಇರುವ ಶಂಕೆ ಕೂಡಾ ವ್ಯಕ್ತವಾಗಿತ್ತು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸೈಯದ್ ಮಕ್ಬೂಲ್ ಮೂಲಕ ಈ ದುಷ್ಕೃತ್ಯ ಎಸಗಿರುವ ಅನುಮಾನ ವ್ಯಕ್ತಪಡಿಸಲಾಗಿತ್ತು.
ಈ ನಿಟ್ಟಿನಲ್ಲಿ ಬಿಹಾರದ ಬಾಂಬ್ ಸ್ಫೋಟ ನಂತರ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ನವದೆಹಲಿ, ಪುಣೆ, ಮುಂಬೈ ಹಾಗೂ ಅಹಮದಾಬಾದ್ ನಗರಗಳಲ್ಲಿ ಹೈ ಅಲರ್ಟ್ ಘೋಷಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಗೃಹ ಇಲಾಖೆ ಎಚ್ಚರಿಕೆ ನೀಡಲಾಗಿತ್ತು.

ಈಗ ಭಾನುವಾರ ನೀಡಿರುವ ಹೊಸ ಎಚ್ಚರಿಗೆ ಸಂದೇಶದ ಪ್ರಕಾರ ದೇಶದ ಪ್ರಮುಖ 7 ವಿಮಾನ ನಿಲ್ದಾಣಗಳು ಉಗ್ರರ ಟಾರ್ಗೆಟ್ ಆಗಿವೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(IGI), ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಹಮದಾಬಾದಿನ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗುವಾಹಟಿಯ ಲೋಕಪ್ರಿಯ ಗೋಪಿಅನಥ್ ಬೊರ್ಡೊಲೊಯಿ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಈ ಇಂದಿನ BIA)
ಈ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ಹೈಜಾಕ್ ಮಾಡಲು ಉಗ್ರರು ಸಂಚು ಹಾಕಿದ್ದಾರೆ. ಸಣ್ಣ ಅಥವಾ ಮಧ್ಯಮ ಗಾತ್ರದ ವಿಮಾನಗಳನ್ನು ಬಳಸಿ ಏರ್ ಬಸ್ ಗಳನ್ನು ಹೊತ್ತೊಯ್ಯಲು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಇದಲ್ಲದೆ ಬಾಂಬ್ ಸ್ಫೋಟದ ಭೀತಿ ಇದ್ದೇ ಇದೆ.
ಹೀಗಾಗಿ ಆಯಾ ರಾಜ್ಯಗಳು ಕೇಂದ್ರದ ನೆರವು ಪಡೆದು ಸೂಕ್ತ ಭದ್ರತೆ ಒದಗಿಸಿ ಮುನ್ನಚ್ಚರಿಕೆ ವಹಿಸಿಕೊಳ್ಳುವುದು ಉತ್ತಮ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ಸಿಬ್ಬಂದಿಗಳ ಜೊತೆಗೆ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲು ಸೂಚಿಸಲಾಗಿದೆ. ಉಗ್ರರು ಹೊಸ ಬಗೆಯ ಸ್ಫೋಟಕ ವಸ್ತುಗಳನ್ನು ಬಳಸುವ ಆತಂಕ ಶುರುವಾಗಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಒನ್ ಇಂಡಿಯಾ ಸುದ್ದಿ












Click it and Unblock the Notifications