ಗರಿಷ್ಠ ಮಟ್ಟದತ್ತ ಏರುತ್ತಿರುವ ಕೆಆರ್ಎಸ್ ಜಲಾಗಾರ
ಮಂಡ್ಯ, ಜು.21: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ (ಕೆಆರ್ಎಸ್)ಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಭರ್ತಿಗೆ ಕೇವಲ 7 ಅಡಿ ಮಾತ್ರ ಬಾಕಿ ಇದೆ. ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಜಲಾಶಯದ ನೀರಿನ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ಜಲಾಶಯಕ್ಕೆ ಸುಮಾರು 42,742 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಲಾಶಯದ ಗರಿಷ್ಠಮಟ್ಟ 124.80 ಅಡಿಗಳಾಗಿದ್ದು, 117.35 ಅಡಿಗೆ ಏರಿದೆ. ಭರ್ತಿಗೆ 7 ಅಡಿ ಬಾಕಿ ಇದೆ. ಜಲಾಶಯದಿಂದ 3,953 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಜಲಾಶಯ ಭರ್ತಿಯಾಗುವ ಹಂತ ತಲುಪಿರುವುದು ಅಚ್ಚುಕಟ್ಟು ಪ್ರದೇಶದ ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದ್ದು, ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ ಅಚ್ಚುಕಟ್ಟು ಪ್ರದೇಶ ಮಂಡ್ಯ ಜಿಲ್ಲೆಯಲ್ಲಿ ಇದೀಗ ತುಂತುರು ಮಳೆ ಶುರುವಾಗಿದ್ದು, ಕೃಷಿ ಚಟುವಟಿಕೆಗೆ ನಾಂದಿ ಹಾಡಿದೆ
ಶನಿವಾರ ಹಲವೆಡೆ ಬಿದ್ದ ತುಂತುರು ಮಳೆಯಿಂದ ರೈತರು ಜಮೀನನ್ನು ಹಸನುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಮಳೆ ಮುಂದುವರಿದರೆ ಖುಷ್ಕಿ ಕೃಷಿ ಚಟುವಟಿಕೆ ಸುಗಮವಾಗಲಿದೆ. ಜಲಾಶಯ ಭರ್ತಿಯತ್ತ ದಾಪುಗಾಲು ಹಾಕುತ್ತಿರುವಂತೆಯೇ ಕೃಷಿಗೆ ನಾಲೆಗಳಲ್ಲಿ ನೀರು ಹರಿಸಲಾಗಿದೆ. ರೈತರು ಭತ್ತದ ಮಡಿಗಳನ್ನು ಹದಗೊಳಿಸುವ ಕಾರ್ಯ ಆರಂಭಿಸಿದ್ದಾರೆ.ನಾಲೆಯಲ್ಲಿ ನೀರು ಹರಿಸುತ್ತಿರುವುದು, ಜತೆಗೆ ತುಂತುರು ಮಳೆ ಬೀಳುತ್ತಿರುವುದು ಒಣಗಿರು ಕಬ್ಬು, ಹಿಪ್ಪುನೇರಳೆ ಬೆಳೆಗೆ ಜೀವ ತಂದಿದೆ. ಭತ್ತದ ಜತೆಗೆ ಕಬ್ಬಿನ ನಾಟಿಗೂ ಚಾಲನೆ ದೊರೆತಿದೆ.

ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಒಳಹರಿವು 55031 ಕ್ಯೂಸೆಕ್ಸ್ಗೆ ಏರಿಕೆಯಾಗಿದೆ. ಶನಿವಾರ ಬೆಳಗ್ಗೆ 8:30ರ ಮಾಹಿತಿಯಂತೆ ಜಲಾಶಯದ ನೀರಿನ ಮಟ್ಟ 1796 ಅಡಿಗೆ ಏರಿಕೆಯಾಗಿದೆ. ಜಲಾಶಯ ವ್ಯಾಪ್ತಿಯಲ್ಲಿ 100 ಮಿ.ಮೀ. ಮಳೆಯಾಗಿದೆ. ಬದ್ರಾ ಜಲಾಶಯದ ನೀರಿನ ಮಟ್ಟ 167.60 ಅಡಿಗೆ ತಲುಪಿದೆ. 30163 ಕ್ಯೂಸೆಕ್ ಒಳಹರಿವಿದ್ದು,1,749 ಕ್ಯೂಸೆಕ್ ಹೊರಹರಿವಿದೆ. ಜಲಾಶಯ ವ್ಯಾಪ್ತಿಯಲ್ಲಿ 56.9 ಮಿ.ಮೀ. ಮಳೆಯಾಗಿದೆ.
ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟ 139.11 ಅಡಿ ಇತ್ತು. ತುಂಗಾ ಜಲಾಶಯದ ನೀರಿನ ಮಟ್ಟ ಈಗಾಗಲೇ 588.24 ಅಡಿ ಗರಿಷ್ಠ ಮಟ್ಟ ತಲುಪಿದೆ. ಜಲಾಶಯದ ಒಳಹರಿವು 60,500 ಕ್ಯೂಸೆಕ್ ಇದ್ದು, 66 ಸಾವಿರ ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ ಹರಿಯಬಿಡಲಾಗುತ್ತಿದೆ.












Click it and Unblock the Notifications