ಶಾಲಾ ಮಕ್ಕಳಿಗೆ ಆಗಸ್ಟ್ 1ರಿಂದ ಹಾಲು

ವಿಧಾನಪರಿಷತ್ ನಲ್ಲಿ ಗುರುವಾರ ಹೇಳಿಕೆ ನೀಡಿರುವ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ, ಆಗಸ್ಟ್ 1ರಿಂದ 35 ಲಕ್ಷ ಅಂಗನವಾಡಿ ಮಕ್ಕಳು ಹಾಗೂ 1ರಿಂದ 10ನೇ ತರಗತಿವರೆಗಿನ 65 ಲಕ್ಷ ಮಕ್ಕಳಿಗೆ ಹಾಲು ನೀಡುವ ಯೋಜನೆ ಜಾರಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಪ್ರತಿದಿನ ಹಾಲು ನೀಡುವ ಯೋಜನೆ ಪರಿಷ್ಕರಿಸಲಾಗಿದ್ದು, ಪ್ರತಿ ಮಗುವಿಗೆ ವಾರದಲ್ಲಿ 3 ದಿನ ತಲಾ 150 ಮಿ.ಲೀ ಹಾಲು ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. (ಮೂರುದಿನ ಮಾತ್ರ ಶಾಲಾ ಮಕ್ಕಳಿಗೆ ಹಾಲು!)
ಈ ಯೋಜನೆಗಾಗಿ ಪ್ರತಿನಿತ್ಯ 4 ಲಕ್ಷ ಲೀಟರ್ ಹಾಲು ಹಾಗೂ 40 ಮೆಟ್ರಿಕ್ ಟನ್ ಕೆನೆಭರಿತ ಹಾಲಿನ ಪುಡಿ ಅಗತ್ಯವಿದೆ. ಹಾಲು ಉತ್ಪಾದಕರಿಗೆ 4 ರೂ. ಪ್ರೋತ್ಸಾಹಧನವನ್ನು ಸರ್ಕಾರ ನೀಡಿರುವುದರಿಂದ ಹಾಲಿನ ಕೊರತೆ ಉಂಟಾಗುವುದಿಲ್ಲ ಎಂದು ಜಯಚಂದ್ರ ವಿವರಣೆ ನೀಡಿದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ತಕ್ಷಣ ಈ ಯೋಜನೆಯನ್ನು ಘೋಷಿಸಲಾಗಿತ್ತು. ಜುಲೈ 1 ರಿಂದ ಹಾಲು ನೀಡುವುದಾಗಿ ಸಿಎಂ ಹೇಳಿದ್ದರು. ಆದರೆ, ಯೋಜನೆ ಜಾರಿಗೆ ಬಂದಿರಲಿಲ್ಲ. ಸದ್ಯ ಆಗಸ್ಟ್ 1ರಿಂದ ಯೋಜನೆ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ.
ಕಳಪೆ ಹಾಲಿಗೆ ದಂಡ : ನರೆ ರಾಜ್ಯಗಳಿಂದ ಕಳಪೆ ಗುಣಮಟ್ಟದ ಹಾಲು ಬೆಂಗಳೂರಿಗೆ ಸರಬರಾಜು ಆಗುತ್ತಿರುವ ಬಗ್ಗೆಯೂ ಸದನದಲ್ಲಿ ಚರ್ಚೆ ನಡೆಯಿತು. ಈ ಬಗ್ಗೆ ವಿವರಣೆ ನೀಡಿದ ಸಚಿವರು, ಪ್ರತಿ ಲೀಟರ್ ಗೆ ಶೇ. 8.5ರಷ್ಟು ಎಸ್ಎನ್ಎಫ್ ಇರಲೇಬೇಕು.
ಅದಕ್ಕಿಂತ ಕಡಿಮೆ ಇದ್ದರೆ ದಂಡ ವಿಧಿಸಲಾಗುತ್ತದೆ. ಬೆಂಗಳೂರನಲ್ಲಿ ಬಿಬಿಎಂಪಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಅಧಿಕಾರಿಯೊಬ್ಬರನ್ನು ಹಾಲಿನ ಗುಣಮಟ್ಟ ಪರೀಕ್ಷೆಗೆ ನಿಯೋಜಿಸಲಾಗಿದೆ. ಕಳಪೆ ಹಾಲು ಕಂಡು ಬಂದರೆ ಅಂತಹ ಕಂಪನಿಗಳಿಗೆ ಅವರು ದಂಡ ವಿಧಿಸುತ್ತಾರೆ ಎಂದು ಸಚಿವರು ಉತ್ತರ ನೀಡಿದರು.












Click it and Unblock the Notifications