ಸೀರೆ ಕದ್ದ ಲಕ್ಷ್ಮಿದೇವಿ ಸಾವಿನ ಹೊಣೆ ಯಾರದ್ದು?
ಬೆಂಗಳೂರು, ಜು.18 : ನಗರದ ಹತ್ತು ರೇಷ್ಮೆ ಸೀರೆ ಕಳ್ಳತನ ಪ್ರಕರಣ ದುರಂತವಾಗಿ ಅಂತ್ಯಗೊಂಡಿದೆ. ಪೊಲೀಸರಿಗೆ ಹೆದರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ, ಆರೋಪಿ ಲಕ್ಷ್ಮಿದೇವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.
ಹತ್ತು ರೇಷ್ಮೆ ಸೀರೆ ಕದ್ದ ಆರೋಪ ಎದುರಿಸುತ್ತಿದ್ದ ಲಕ್ಷ್ಮಿದೇವಿ, ಭಾನುವಾರ ದೊಡ್ಡಬೊಮ್ಮಸಂದ್ರದ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿದ್ದರು. ಶೇ 75ರಷ್ಟು ಸುಟ್ಟಗಾಯದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸತತವಾಗಿ ಮೂರು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಲಕ್ಷ್ಮಿದೇವಿ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದರಿಂದ ರೇಷ್ಮೆ ಸೀರೆ ಕದ್ದ ಪ್ರಕರಣದ ದುರಂತ ಅಂತ್ಯ ಕಂಡಿದೆ.
ಘಟನೆ ಏನು : ಮೂಲತಃ ಆಂಧ್ರ ಪ್ರದೇಶ ಮೂಲದ ಲಕ್ಷ್ಮಿದೇವಿ (28) ದೊಡ್ಡಬೊಮ್ಮಸಂದ್ರದ ಡಾ.ಅಜಯ್ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಯಲ್ಲಿ ಕೆಲವು ದಿನಗಳ ಹಿಂದೆ 10 ರೇಷ್ಮೆ ಸೀರೆ ಕಳುವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಅಜಯ್ ಮನೆ ಕೆಲಸ ಮಾಡುತ್ತಿದ್ದ ಲಕ್ಷ್ಮಿದೇವಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಲಕ್ಷ್ಮಿದೇವಿಯನ್ನು ಕರೆದು ವಿಚಾರಣೆ ಮಾಡಿದಾಗ, ಆಕೆ ತಪ್ಪೊಪ್ಪಿಕೊಂಡಿದ್ದಳು.
ಆದರೆ, ಶನಿವಾರ ಪೊಲೀಸರಿಂದ ತಪ್ಪಿಸಿಕೊಂಡು ಓಡಿಬಂದಿದ್ದ ಲಕ್ಷ್ಮಿದೇವಿ ತನ್ನ ಮನೆಯಲ್ಲಿ ಪೊಲೀಸರಿಗೆ ಹೆದರಿ, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲಕ್ಷ್ಮಿದೇವಿ ಹೇಳಿಕೆಯೇ ಬೇರೆ : ಆತ್ಮಹತ್ಯೆಗೆ ಯತ್ನಿಸುವ ಮೊದಲು ಲಕ್ಷ್ಮಿದೇವಿ ತನ್ನ ಪರ ವಕೀಲರಿಗೆ ಡಾ.ಅಜಯ್ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅದನ್ನು ಪ್ರಶ್ನಿಸಿದಾಗ ಸೀರೆ ಕದ್ದ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಳು.
ನನಗೆ ಮತ್ತು ಚಿಕ್ಕಪ್ಪನಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ವಕೀಲರು ಪೊಲೀಸ್ ಆಯುಕ್ತರಿಗೆ ಈ ಪ್ರಕರಣದ ವಿವರ ನೀಡಿದ್ದರು. ಅವರು, ಇನ್ಸ್ಪೆಕ್ಟರ್ ಪ್ರಸಾದ್ ಹಾಗೂ ಸಬ್ಇನ್ಸ್ಪೆಕ್ಟರ್ ಸುದರ್ಶನ್ಸಿಂಗ್ ಅವರನ್ನು ಅಮಾನತು ಮಾಡಿದ್ದರು.
ಆದರೆ, ಪ್ರಕರಣದ ಸತ್ಯಾಂಶ ಹೊರಗೆ ಬರುವ ಮುನ್ನವೇ ಲಕ್ಷ್ಮಿದೇವಿ ಸಾವಿಗೆ ಶರಣಾಗಿದ್ದಾಳೆ. ಇದರಿಂದಾಗಿ ಪ್ರಕರಣ ಅಂತ್ಯಗೊಂಡಿದೆ. ಹಾಗಾದರೆ ಲಕ್ಷ್ಮಿದೇವಿ ಸಾವಿನ ಹೊಣೆ ಯಾರದ್ದು? ಎಂಬ ಪ್ರಶ್ನೆ ನಿಗೂಢವಾಗಿಯೇ ಉಳಿದಿದೆ.












Click it and Unblock the Notifications