ಬಿಜೆಪಿ ಸೇರುವ ಗುಟ್ಟು ಬಿಚ್ಚಿಟ್ಟ ಯಡಿಯೂರಪ್ಪ?

ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 7-8 ಸ್ಥಾನಗಳನ್ನು ಮಾತ್ರ ಕರ್ನಾಟಕದಲ್ಲಿ ಗಳಿಸಲಿದೆ. ಅದಕ್ಕೆ ಬೇಕಾದ ಕಾರ್ಯತಂತ್ರವನ್ನು ನಾವು ರೂಪಿಸುತ್ತೇವೆ ಎಂದು ಹೇಳಿದರು.
ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಿಶ್ಚಿತ ಎಂದು ಹೇಳುವ ಮೂಲಕ, ಯಡಿಯೂರಪ್ಪ ಬಿಜೆಪಿಗೆ ಮರಳುವ ಬಗ್ಗೆ ಸುಳಿವು ನೀಡಿದ್ದಾರೆ. [ಯಡಿಯೂರಪ್ಪ ವಾಪಸಾತಿಗೆ ಈಶ್ವರಪ್ಪ ಅಪಸ್ವರ]
ಕಾಂಗ್ರೆಸ್ ಸೋಲಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿರುವುದು ಅಚ್ಚರಿ ಉಂಟುಮಾಡಿದೆ. ಬಿಜೆಪಿ ಸದನದಲ್ಲಿ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ವೇದಿಕೆ ಸಿದ್ಧಗೊಳಿಸಿದ ಮರುದಿನವೇ ನಾವು ಎಂದು ಯಡಿಯೂರಪ್ಪ ಹೇಳಿರುವುದು ಮೈತ್ರಿಯ ಸುಳಿವು ನೀಡಿದೆ.
ನಮ್ಮಿಂದ ತಪ್ಪಾಗಿದೆ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮಿಂದ(ಬಿಜೆಪಿ) ತಪ್ಪಾಗಿದೆ. ನಮ್ಮ ಒಳಜಗಳಗಳಿಂದಾಗಿ ಕಾಂಗ್ರೆಸ್ ಗೆದ್ದು ಇಂದು ಆಡಳಿತ ನಡೆಸುತ್ತಿದೆ. ಮುಂದೆ ಇಂಥ ತಪ್ಪು ನಡೆಯಲು ಬಿಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಬಿಎಸ್ವೈ ಹೇಳಿದರು.
ನಮ್ಮ ತಪ್ಪಿನ ಅರಿವು ನಮಗಾಗಿದೆ. ಮುಂದೆ ಇಂತಹ ತಪ್ಪು ಆಗದಂತೆ ನಾವು ಎಚ್ಚರ ವಹಿಸುತ್ತೇವೆ ಎಂದು ಯಡಿಯೂರಪ್ಪ ತಪ್ಪೊಪ್ಪಿಕೊಂಡರು. ಇದರಿಂದ ಬಿಜೆಪಿ ಜೊತೆ ವಿಲೀನಗೊಂಡು ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ ಎಂಬ ಸುಳಿವು ನೀಡಿದರು.
ಯಡಿಯೂರಪ್ಪ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಕೂತೂಹಲ ಪ್ರಾರಂಭವಾಗಿದೆ. ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಪಕ್ಷಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವುದು ಸಾಧ್ಯವಾಗುವುದಿಲ್ಲ ಎಂಬ ಸತ್ಯ ಕಾಂಗ್ರೆಸ್ ಪಕ್ಷದ ನಾಯಕರಿಗೂ ತಿಳಿದಿದೆ.
ಪಕ್ಷವನ್ನು ಈಗಿನಿಂದಲೇ ಸಂಘಟಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುತ್ತೇನೆಂದು ಬಿಎಸ್ವೈ ಘೋಷಿಸಿದ್ದಾರೆ. ಪಕ್ಷ ಸಂಘಟನೆ ಎಂದರೆ, ಕೆಜೆಪಿಯೇ ಅಥವ ಬಿಜೆಪಿ ಸೇರಿ ಅದನ್ನು ಪುನಃ ಯಡಿಯೂರಪ್ಪ ಸಂಘಟಿಸುತ್ತಾರೋ? ಎಂಬ ಗೊಂದಲ ಕಾಂಗ್ರೆಸ್ ಪಕ್ಷಕ್ಕೆ ಪ್ರಾರಂಭವಾಗಿದೆ.












Click it and Unblock the Notifications