ಕೇರಳ ನೀರು ನಮಗೆ ಬೇಕು ಎಂದ ತಮಿಳುನಾಡು!

ಸೋಮವಾರ ನವದೆಹಲಿಯಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿಯ ಮೂರನೇ ಸಭೆ ನಡೆಯಿತು. ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಿದ್ದರಿಂದ, ತಮಿಳುನಾಡಿಗೆ ಜೂನ್ ಮತ್ತು ಜುಲೈ ತಿಂಗಳ ಮೊದಲಾರ್ಧದಲ್ಲಿ ನಿಗದಿಪಡಿಸಿದ ನೀರಿಗಿಂತಲೂ ಹೆಚ್ಚಿನ ನೀರು ಹರಿಸಿದ್ದೇವೆ ಎಂದು ಕರ್ನಾಟಕ ಹೇಳಿತು.
ಇದರಿಂದಾಗಿ ವಿವಾದ ತಾತ್ಕಾಲಿಕವಾಗಿ ಅಂತ್ಯವಾದರೂ, ತಮಿಳುನಾಡು ತನ್ನ ಹಠಮಾರಿ ಧೋರಣೆ ಮುಂದುವರೆಸಿತು. ಕಾವೇರಿ ಮೇಲುಸ್ತುವಾರಿ ಸಮಿತಿಯ ಮುಖ್ಯಸ್ಥರು, ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು.
ಸಮಿತಿ ಅತೃಪ್ತಿ : ಸಮಿತಿಯ ಮೇಲೆ ತಮಿಳುನಾಡು ಸರ್ಕಾರದ ಒತ್ತಡ ಹೇರುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಲೋಕ್ ರಾವತ್, ಈ ವಿಷಯದ ಕುರಿತು ಸುಪ್ರೀಂಕೋರ್ಟ್ ತೀರ್ಮಾನ ಪ್ರಕಟಿಸಲಿದೆ ಎಂದು ಸ್ಪಷ್ಟನೆ ನೀಡಿದರು.
6.5 ಟಿಎಂಸಿ ಹೆಚ್ಚು ನೀರು : ಕರ್ನಾಟಕದ ಅಧಿಕಾರಿಗಳು ಜು.14ರವರೆಗೆ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಹೆಚ್ಚುವರಿಯಾಗಿ 6.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದ್ದೇವೆ ಎಂದು ಅಂಕಿ ಅಂಶ ನೀಡಿದರು. (ಮತ್ತೆ 10 ಟಿಎಂಸಿ ನೀರು ಕೇಳಿದ ಜಯಲಲಿತಾ!)
ಆಗಸ್ಟ್ ತಿಂಗಳಿನಲ್ಲಿ 50 ಟಿಎಂಸಿ ನೀರನ್ನು ಕರ್ನಾಟಕ ಬಿಡುಗಡೆ ಮಾಡುವ ಆಶ್ವಾಸನೆಯನ್ನು ನೀಡಬೇಕು ಎಂದು ತಮಿಳುನಾಡು ಸಭೆಯಲ್ಲಿ ಆಗ್ರಹಿಸಿತು. ಆದರೆ ಇಂತಹ ಭರವಸೆ ನೀಡಲು ಸಾಧ್ಯವಿಲ್ಲ. ಲಭ್ಯವಾಗುವ ನೀರನ್ನು ಹಂಚಿಕೊಳ್ಳಲಿದ್ದೇವೆ ಎಂದು ಕರ್ನಾಟಕ ಸ್ಪಷ್ಟಪಡಿಸಿತು.
ಕೇರಳದ ಪಾಲು ಕೊಡಿ : ನ್ಯಾಯಾಧೀಕರಣದ ಆದೇಶದಂತೆ 30 ಟಿಎಂಸಿ ನೀರನ್ನು ಕೇರಳ ರಾಜ್ಯಕ್ಕೆ ನಿಗದಿ ಪಡಿಸಲಾಗಿದೆ. ಆದರೆ ಈ ನೀರನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಲು ಅಗತ್ಯವಾದ ಸಂಪನ್ಮೂಲ ಕೇರಳ ಸರ್ಕಾರದ ಬಳಿ ಇಲ್ಲ.
ಆದ್ದರಿಂದ ಆ ನೀರನ್ನು ನಾವು ಬಳಸಿಕೊಳ್ಳುತ್ತೇವೆ ಎಂದು ತಮಿಳುನಾಡು ಸರ್ಕಾರ ಬೇಡಿಕೆ ಮುಂದಿಟ್ಟಿತು. ಆದರೆ, ಈ ಬೇಡಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿಲ್ಲ. ಕಾವೇರಿ ಕೊಳ್ಳದ ರಾಜ್ಯಗಳ ಅಂತರ್ಜಲ ಮಟ್ಟದ ಬಗ್ಗೆ ಜಲ ಆಯೋಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ.












Click it and Unblock the Notifications