ಕರುಳಬಳ್ಳಿ ಹೇಳಿದ ಚಿಲ್ಲರೆ ಭಿಕ್ಷುಕಿಯ ಕರುಣಾಜನಕ ಕಥೆ!
ದಾವಣಗೆರೆ, ಜುಲೈ 16: ಕಳೆದ ವಾರಾಂತ್ಯ ನಗರದ ಬಸ್ ಸ್ಟಾಂಡಿನಲ್ಲಿ ಸಿಕ್ಕಿದ ಚಿಲ್ಲರೆ ಕಾಸಿನ ಭಿಕ್ಷುಕಿಯ ಬಗ್ಗೆ ಕೇಳಿದಿರಲ್ಲಾ. ಅದೇ, ಸಾವಿರಾರು ರೂಪಾಯಿಗಳ ಮೂಟೆಯೊಂದಿಗೆ ಪಾಲಿಕೆ ಪೌರ ಕಾರ್ಮಿಕರ ಕೈಗೆ ಸಿಕ್ಕಿದ್ದ ಮುದುಕಿಯ ಕಥೆ. ಇಷ್ಟಕ್ಕೂ ಆಕೆ ಭಿಕ್ಷಾಟನೆಗೆ ಇಳಿದಿದ್ದು ಏಕೆ? ಈ ಇಳಿವಯಸ್ಸಿನಲ್ಲಿ ಆಕೆಗೆ ಅಂತಹ ಅವಸ್ಥೆ ಒದಗಿದ್ದಾರೂ ಏಕೆ?
ಅದಕ್ಕೂ ಮುನ್ನ ಲೇಟೆಸ್ಟ್ ಏನಪ್ಪಾ ಅಂದರೆ ಆ 70ರ ಹಣ್ಣು ಹಣ್ಣು ಮುದುಕಿಯನ್ನು ಕರುಳಬಳ್ಳಿಯೊಂದು ಹುಡುಕಿಕೊಂಡು ಬಂದಿದೆ. ಭಿಕ್ಷುಕಿಯ ಮಗಳು ಲಕ್ಷ್ಮಿಬಾಯಿ ಹೇಳಿದ ಆ ಭಿಕ್ಷುಕಿಯ ಕರುಣಾಜನಕ ಕಥೆ ಇಲ್ಲಿದೆ ಕೇಳಿ!

ನಮ್ಮದು ಹರಪನಹಳ್ಳಿ ತಾಲೂಕು ಪುಣಬ ಘಟ್ಟ. ಅಲ್ಲಿನ ತಾಂಡಾ ಜನರು ನಾವು. ನಾನು ಚಿಕ್ಕವಳಿರುವಾಗ ನನ್ನ ತಾಯಿ (ಅಂದರೆ ಸದರಿ ಭಿಕ್ಷುಕಿ) ಕಾಳಿಬಾಯಿಗೆ ತಲೆ ಕೆಟ್ಟಿದೆ ಎಂದು ಹೇಳಿ ನನ್ನ ತಂದೆ ಹೀರಾನಾಯ್ಕ ಆಕೆಯನ್ನು ಮನೆಯಿಂದ ಹೊರಹಾಕಿದ್ದರು. ಸಣ್ಣವಳಿದ್ದ ಕಾರಣ ತಂದೆ ವಿರುದ್ಧ ಪ್ರತಿಭಟಿಸಲು ನನಗೆ ಆಗ ಸಾಧ್ಯವಾಗಲಿಲ್ಲ. ನಂತರ ತಂದೆ ಸಹ ಮೃತಪಟ್ಟರು.
ಮುಂದೆ... ಗ್ರಾಮದವರ ನೆರವಿನಿಂದ ನಾನು ಲಕ್ಷ್ಮಣ ನಾಯ್ಕ ಎಂಬುವವರನ್ನು ಮದುವೆಯಾದೆ. ಈಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ತೋಟವೊಂದರಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನನಗೆ 14 ವರ್ಷದ ಮಗ ಇದ್ದಾನೆ.
ಮಾಧ್ಯಮಗಳಲ್ಲಿ ನನ್ನ ತಾಯಿ ದಾವಣಗೆರೆಯಲ್ಲಿ ಇರುವ ವಿಷಯ ತಿಳಿದುಬಂತು. ಎಷ್ಟೇ ಆಗಲಿ ಆಕೆ ನನ್ನ ಹೆತ್ತಮ್ಮ. ತಡಮಾಡದೆ, ಪತಿ ಲಕ್ಷ್ಮಣನೊಂದಿಗೆ ಸೀದಾ ದಾವಣಗೆರೆಗೆ ಬಂದೆ.
15 ವರ್ಷಗಳಿಂದ ನನ್ನ ತಾಯಿ ಕಾಳಿಬಾಯಿ ಎಲ್ಲಿಗೆ ಹೋದಳು ಎಂಬುದನ್ನು ತಿಳಿಯದೆ ತಹತಹಿಸುತ್ತಿದ್ದೆ. ಟಿವಿಗಳಲ್ಲಿ ನನ್ನ ತಾಯಿಯ ಸುದ್ದಿ ನೋಡಿ ರಾಮನಗರದಲ್ಲಿರುವ ಮಹಿಳಾ ನಿಲಯಕ್ಕೆ ಬಂದಿದ್ದೇನೆ. ತಾಯಿಯನ್ನು ನನ್ನ ವಶಕ್ಕೆ ನೀಡಿ. ನಾನು ಆಕೆಯನ್ನು ಜೋಪಾನವಾಗಿ ನೋಡಿಕೊಳ್ಳುತ್ತೇನೆ ಎಂದು ಮಹಿಳಾ ನಿಲಯದ ಮೇಲ್ವಿಚಾರಕಿ ಗಂಗಮ್ಮ ಅವರಿಗೆ ಮೊರೆಹೋಗಿದ್ದೇನೆ ಎಂದು ಲಕ್ಷ್ಮಿಬಾಯಿ ನಿಟ್ಟುಸಿರು ಬಿಟ್ಟಳು.
ಮುಂದ!?: ನಿಲಯದ ಸಿಬ್ಬಂದಿ ಕಾಳಿಬಾಯಿಯನ್ನು ಆಕೆಯ ಮಗಳೊಂದಿಗೆ ಕಳುಹಿಸಲು ಒಪ್ಪಿದ್ದಾರೆ. ಕಾಳಿಬಾಯಿ ಸಹ ತನ್ನ ಮಗಳೊಂದಿಗೆ ಹೋಗಲು ಸಿದ್ಧವಾಗಿದ್ದಾರೆ ಎಂಬುದರೊಂದಿಗೆ 'ಭಿಕ್ಷುಕಿಯಾಗಿದ್ದ' ಕಾಳಿಬಾಯಿಯ ಕರುಣಾಜನಕ ಕಥೆ ಸುಖಾಂತ್ಯ ಕಂಡಿದೆ!
ಮನೆಯವರಿಂದ ನಿರ್ಲಕ್ಷಕ್ಕೆ ಒಳಗಾದ ಇಂತಹ 'ಭಿಕ್ಷುಕಿ ಕಾಳಿಬಾಯಿಗಳು' ಇನ್ನೂ ಎಷ್ಟು ಮಂದಿ ಇದ್ದಾರೋ?












Click it and Unblock the Notifications