ಉತ್ತರಾಖಂಡ್; ಕಾಣೆಯಾದ 6 ಸಾವಿರ ಮಂದಿ ಮೃತ
ಡೆಹ್ರಾಡೂನ್, ಜು.15: ಉತ್ತರಾಖಂಡದ ಭೀಕರ ಜಲ ಪ್ರಳಯಕ್ಕೆ ಸಿಲುಕಿ ಕಾಣೆಯಾಗಿದ್ದಾರೆ ಎಂದು ತಿಳಿಯಲಾದ ವ್ಯಕ್ತಿಗಳೆಲ್ಲರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲು ಉತ್ತರಾಖಂಡ್ ಸರ್ಕಾರ ಸಿದ್ಧವಾಗಿದೆ.
ಜಲ ಪ್ರವಾಹ ಸಂಭವಿಸಿ ಸುಮಾರು ತಿಂಗಳ ನಂತರ ಎಲ್ಲಾ ರೀತಿ ಹುಡುಕಾಟ ನಡೆಸಿ ವಿಫಲವಾದ ಮೇಲೆ ಸರ್ಕಾರ ಮೃತರ ಅಂಕಿ ಅಂಶ ಬಿಡುಗಡೆಗೆ ಸಿದ್ಧವಾಗಿದೆ. ಪ್ರವಾಹ ಹಾಗೂ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 6 ಸಾವಿರ ಎಂದು ಘೋಷಿಸಲು ಸರ್ಕಾರ ಸಿದ್ಧವಾಗಿದೆ.
ಕಾಣೆಯಾದವರೆಲ್ಲ ಸತ್ತುಹೋಗಿದ್ದಾರೆಂಬುದಕ್ಕೆ ಸರ್ಕಾರದ ಬಳಿ ದಾಖಲೆಗಳಾದರೂ ಎಲ್ಲಿವೆ. ಆ ಬಗ್ಗೆ ದಾಖಲು ಸೃಷ್ಟಿಸಲು ಸಾಧ್ಯವೇ? ಎಂಬುದು ನೊಂದವರು ಪ್ರಶ್ನಿಸಿದ್ದಾರೆ.
ಪ್ರವಾಹ, ಭೂ ಕುಸಿತದಲ್ಲಿ ಕಾಣೆಯಾದವರು ಇನ್ನೂ ಪತ್ತೆಯಾಗುವ ಸಾಧ್ಯತೆಗಳು ಕಡಿಮೆ ಎಂಬ ತೀರ್ಮಾನಕ್ಕೆ ಬಂದಿರುವ ಉತ್ತರಾಖಂಡ ಸರ್ಕಾರ, ಮೃತರ ಸಂಖ್ಯೆಯನ್ನು ಘೋಷಿಸಿ, ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸುವ ಕಾರ್ಯಕೈಗೊಳ್ಳಲಿದೆ.

ಈ ಮುಂಚೆ ವಿವಿಧ ಸಂಸ್ಥೆಗಳು, ಮಾಧ್ಯಮಗಳು ಮೃತರ ಸಂಖ್ಯೆ 5 ಸಾವಿರಕ್ಕೂ ಹೆಚ್ಚು ಎಂದು ವರದಿ ಮಾಡುತ್ತಿದ್ದರೂ ಉತ್ತರಾಖಂಡ ಸರ್ಕಾರ ಸತ್ತವರ ಸಂಖ್ಯೆ 3 ಸಾವಿರ ಎಂದೇ ಹೇಳುತ್ತಾ ಬಂದಿತ್ತು. ಯುಎನ್ ಸಂಸ್ಥೆ ಪ್ರವಾಹದಲ್ಲಿ ಮೃತಪಟ್ಟವರು 11 ಸಾವಿರ ಎಂದು ಹೇಳಿತ್ತು.
ಆದರೆ ಸತ್ತವರೆಷ್ಟು ಎಂಬುದಕ್ಕೆ ಇನ್ನೂ ಸಮರ್ಪಕವಾದ, ನಿಖರವಾದ ಉತ್ತರ ದೊರೆತಿಲ್ಲ. ಪ್ರವಾಹದಲ್ಲಿ ಕಾಣೆಯಾದವರು ಇನ್ನು ಪತ್ತೆಯಾಗುವ ಸಂಭವ ಕಡಿಮೆ. ನಮಗೆ ಆ ಭರವಸೆ ನಶಿಸಿಹೋಗಿದೆ ಎಂದು ಮುಖ್ಯಮಂತ್ರಿ ವಿಜಯ್ ಬಹುಗುಣ ಹೇಳಿದ್ದಾರೆ.
ಆದರೆ, ಮಗುಚಿಬಿದ್ದಿರುವ ಒಂದು ಕಲ್ಲು ಬಂಡೆಯನ್ನು ಎತ್ತಿ ನೋಡದೆ ನಾವು ಬಿಡುವುದಿಲ್ಲ. ಶೋಧ ಕಾರ್ಯ ನಿಲ್ಲುವುದಿಲ್ಲ. ಅದು ಮುಂದುವರೆಯುತ್ತಿರುತ್ತದೆ ಎಂದು ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬಗಳಿಗೆ ಭರವಸೆ ನೀಡಿದ್ದಾರೆ.
ಪರಿಹಾರ ವಿತರಣೆಗೆ ಕ್ರಮ : ಪ್ರವಾಹದಲ್ಲಿ ಬಂಧು-ಬಾಂಧವರು ಸಹಿತ ಸರ್ವಸ್ವವನ್ನೂ ಕಳೆದುಕೊಂಡು ನಿರ್ಗತಿಕರಾಗಿರುವ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಲು ಸಕಲ ಸಿದ್ಧತೆ ನಡೆಸಿದೆ. ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ನೀಡಲಾಗಿರುವ 3-5 ಲಕ್ಷ ರೂ.ಗಳ ಜೊತೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 1.5 ಲಕ್ಷ ರೂ. ನೀಡಲಿದೆ.
ಪ್ರವಾಹದಲ್ಲಿ ಕಾಣೆಯಾಗಿರುವವರ ಪೈಕಿ ಉತ್ತರಪ್ರದೇಶದ 2 ಸಾವಿರಕ್ಕೂ ಹೆಚ್ಚು, ಮಧ್ಯಪ್ರದೇಶದಿಂದ 1 ಸಾವಿರಕ್ಕೂ ಹೆಚ್ಚು, ರಾಜಸ್ಥಾನದ 620 ಹಾಗೂ ಮಹಾರಾಷ್ಟ್ರದ 260 ಮಂದಿ ಸೇರಿದ್ದಾರೆ ಎಂದು ಮೂಲಗಳು ಹೇಳಿವೆ.
ಇಷ್ಟಾದರೂ ತಮ್ಮವರನ್ನು ಕಳೆದುಕೊಂಡಿರುವ ಸ್ಥಳೀಯರು, ಯಾತ್ರಿಗಳು ಕಾಣೆಯಾಗಿರುವ ತಮ್ಮ ಬಂಧುಗಳು ಮೃತಪಟ್ಟಿದ್ದಾರೆಂದು ನಂಬಲು ಸಿದ್ಧರಿಲ್ಲ. ಕಾಣೆಯಾಗಿರುವವರು ಇಂದಲ್ಲ ನಾಳೆ ಬಂದೇ ಬರುತ್ತಾರೆ ಎಂಬ ಕಾತುರ, ನಿರೀಕ್ಷೆಯಲ್ಲಿ ಅವರಿದ್ದಾರೆ.
ಕಾಣೆಯಾದವರು ಮರಳಿ ಬರುತ್ತಾರೆಂಬ ನಂಬಿಕೆ ಇದ್ದರೂ, ಈಗ ನಾವು ಕೊಡುವ ಪರಿಹಾರ ತೆಗೆದುಕೊಳ್ಳಿ, ಒಂದು ವೇಳೆ ನಿಮ್ಮ ನಿರೀಕ್ಷೆಯಂತೆ ನಿಮ್ಮವರು ಮರಳಿ ಬಂದರೆ ಪರಿಹಾರದ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿ ಎಂದು ಸರ್ಕಾರ ಹೇಳಿದೆ.












Click it and Unblock the Notifications