ಒಂದೆರಡು ಭವಿಷ್ಯ ನುಡಿದ ಮಾಜಿ ಡಿಸಿಎಂ ಈಶ್ವರಪ್ಪ

ಮುಂದಿನ ಲೋಕಸಭೆ ಚುನಾವಣೆಯು ಇದೇ ವರ್ಷಾಂತ್ಯ ಅಂದರೆ ನವೆಂಬರ್ ಅಥವಾ ಡಿಸೆಂಬರಿನಲ್ಲಿ ನಡೆಯಲಿದೆ ಎಂದು ಈಶ್ವರಪ್ಪ ನುಡಿದಿದ್ದಾರೆ. ಛತ್ತೀಸ್ ಗಡ, ದೆಹಲಿ, ಜಾರ್ಖಂಡ್, ರಾಜಾಸ್ತಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆ ನವೆಂಬರಿನಲ್ಲಿ ನಡೆಯಲಿದೆ. ಈ ಐದು ರಾಜ್ಯಗಳ ಪೈಕಿ ಬಿಜೆಪಿ ನಾಲ್ಕರಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ತತ್ಪರಿಣಾಮ ಕಾಂಗ್ರೆಸ್ ಅವಧಿಮುನ್ನ ಚುನಾವಣೆಗೆ ಅಣಿಯಾಗುತ್ತದೆ. ಹಾಗಾಗಿ ಡಿಸೆಂಬರಿನಲ್ಲೇ ಚುನಾವಣೆ ಎದುರಾಗಲಿದೆ ಅವರು ಹೇಳಿದರು.
ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯದ ಬಗ್ಗೆ ಮಾತನಾಡಿರುವ ಈಶ್ವರಪ್ಪ, ಸಿದ್ದರಾಮಯ್ಯ ಅವರ ವೇಗ ನೋಡಿದರೆ ಪೂರ್ಣಾವಧಿಗೆ 5 ವರ್ಷ ಕಾಲ ಮುಖ್ಯಮಂತ್ರಿ ಆಗಿ ಉಳಿಯುವುದರಲ್ಲಿ ಅವರಿಗೇ ನಂಬಿಕೆಯಿಲ್ಲ. ಹಾಗಾಗಿ ಸಿದ್ದು ಐದು ವರ್ಷ ಕಾಲ ಅಧಿಕಾರದಲ್ಲಿ ಇರುವುದಿಲ್ಲ ಎಂದಿದ್ದಾರೆ.
1 ರೂಗೆ 1 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ತಮ್ಮ ಆಡಳಿತಾವಧಿಯಲ್ಲಿ ಐದೂ ವರ್ಷ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಸಲಿಗೆ ಅವರು ತಮ್ಮ ಅಧಿಕಾರಾವಧಿವನ್ನು ಪೂರ್ಣಗೊಳಿಸುತ್ತಾರಾ ಎಂಬುದೇ ಅನುಮಾನವಾಗಿದೆ ಎಂದು ಈಶ್ವರಪ್ಪ ಹೇಳಿದರು.
ಮುಖ್ಯಮಂತ್ರಿ ಪದವಿಗೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರನ್ನು ಸೋಲಿಸಲು ಸಿದ್ದರಾಮಯ್ಯ ರಣತಂತ್ರ ರೂಪಿಸಿ, ಯಶಸ್ವಿಯಾದರು. ಅದರ ಫಲವಾಗಿ ಪರಮೇಶ್ವರ್ ಅವರು ಸಿದ್ದುರನ್ನು ತಮ್ಮ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಸಮನ್ವಯ ಸಮಿತಿ ಮೂಲಕ ಚಿತಾವಣೆ ನಡೆಸಿದ್ದಾರೆ.
ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಹ ಕೈಜೋಡಿಸಿದೆ. ಹಾಗಾಗಿ, ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ 5 ವರ್ಷ ಮುಖ್ಯಮಂತ್ರಿ ಆಗಿರುವುದಿಲ್ಲ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ಇನ್ನೂ ಒಂದಷ್ಟು ಭವಿಷ್ಯ ಹೇಳಿದರು:
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲಗಳಿರುವುದರಿಂದ ಲೋಕಸಭಾ ಚುನಾವಣೆ ಮುಗಿದ ವರ್ಷದಲ್ಲೇ ವಿಧಾನಸಭೆ ಚುನಾವಣೆ ಬರಲಿದೆ. ಆಗ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ರಚನೆಯಾಗಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಗ್ಯಾರಂಟಿ ಎಂದೂ ಅವರು ಭವಿಷ್ಯ ಹೇಳಿದರು.












Click it and Unblock the Notifications