ಈಶ್ವರಪ್ಪ ಲೋಕಸಭೆ ಕಣಕ್ಕಿಳಿಯುವುದಿಲ್ಲಂತೆ!

ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮೇಲೆ ನರೇಂದ್ರ ಮೋದಿ ಅವರು ತಮ್ಮದೇ ಆದ ಹೊಸ ಟೀಂ ಕಟ್ಟುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳ ಉಸ್ತುವಾರಿ ನೋಡಿಕೊಳ್ಳಲು ಹೊಸ ತಂಡ ನೇಮಿಸಿದ ಬೆನ್ನಲ್ಲೇ ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು ಪಡೆಯುವ ಸಾಧ್ಯತೆಯಿದೆ ಎಂಬ ಸಮೀಕ್ಷೆ ನಡೆಸಲಾಗುತ್ತಿದೆಯಂತೆ.
ಕರ್ನಾಟಕದಲ್ಲಿ ಕಾಂಗ್ರೆಸ್ 25 ಸೀಟು ಗೆಲ್ಲುವ ಬಗ್ಗೆ ಮಾತನಾಡಿದೆ. ಈ ನಡುವೆ ಬಿಜೆಪಿಯಿಂದ ಯಾರು ಯಾರು ಸ್ಪರ್ಧೆಗಿಳಿಯಬೇಕು, ಬಿಎಸ್ ಯಡಿಯೂರಪ್ಪ ಬಂದರೆ ಅವರ ಜೊತೆ ಬರುವ ಬೆಂಬಲಿಗರಲ್ಲಿ ಯಾರಿಗೆ ಆದ್ಯತೆ ನೀಡಬೇಕು ಎಂಬ ಚರ್ಚೆಯೂ ಜಾರಿಯಲ್ಲಿದೆ ಎಂಬ ಸುದ್ದಿಯಿದೆ.
ಈಶ್ವರಪ್ಪ ಸ್ಪರ್ಧಿಸಲ್ಲ: ಕರ್ನಾಟಕ ಬಿಜೆಪಿ ಮಾಜಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಚುನಾವಣೆ ಸ್ಪರ್ಧೆ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಯಡಿಯೂರಪ್ಪ ವಾಪಸ್ ಬರುವ ಸಾಧ್ಯತೆಯಿಂದ ಈ ನಿರ್ಧಾರ ಕೈಗೊಂಡಿದ್ದಾರೆಯೇ ಅಥವಾ ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲು ಅವರನ್ನು ಕಾಡುತ್ತಿದೆಯೇ ಶಿವನೇ ಬಲ್ಲ
ಚುನಾವಣೆಯಲ್ಲಿ ಏಕೆ ಸ್ಪರ್ಧಿಸುತ್ತಿಲ್ಲ ಎಂಬುದರ ಬಗ್ಗೆ ಈಶ್ವರಪ್ಪ ಏನು ಹೇಳಲಿಲ್ಲ. ಇದರ ಜೊತೆಗೆ ಯಡಿಯೂರಪ್ಪ ಅವರ ವಾಪಸ್ಸಾತಿ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದರು.
ಈ ನಡುವೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಮತ್ತೊಮ್ಮೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲೇ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಸದಾನಂದ ಗೌಡರ ಶಾಸಕ ಸ್ಥಾನ(ವಿಧಾನಪರಿಷತ್ ಸದಸ್ಯತ್ವ) ಜೂನ್ 2014ಕ್ಕೆ ಮುಗಿಯಲಿದೆ. ಒಂದು ಅಂದಾಜಿನ ಪ್ರಕಾರಕ್ಕೆ ಲೋಕಸಭೆ ಚುನಾವಣೆ ನಿಗದಿತ ಅವಧಿಗಿಂತ ಮುಂಚಿತವಾಗಿ ನಡೆಯುವ ಸಾಧ್ಯತೆಯಿದೆ.
ಡಿವಿ ಸದಾನಂದ ಗೌಡರ ಜೊತೆಗೆ ಮಾಜಿ ಸಚಿವರಾದ ಆರ್ ಅಶೋಕ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಸೇರಿದಂತೆ ಹಲವಾರು ಪ್ರಮುಖ ನಾಯಕರು ಲೋಕಸಭೆಗೆ ಪ್ರವೇಶ ಪಡೆಯಲು ಇಚ್ಛಿಸಿದ್ದಾರೆ ಎಂಬ ಮಾಹಿತಿಯಿದೆ. ಪಕ್ಷದ ನಾಯಕರ ಅನುಭವ, ಜಾತಿ ಆಧಾರ, ಇತ್ತೀಚಿನ ಸಾಧನೆ, ಜನಮನ್ನಣೆ ಪರಿಗಣಿಸಿ ಟಿಕೆಟ್ ಹಂಚಿಕೆ ಮಾಅಡಲು ಬಿಜೆಪಿ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಬಿಜೆಪಿ ತಯಾರಿ ಭರ್ಜರಿಯಾಗಿ ಸಾಗಿದೆ.












Click it and Unblock the Notifications