ಲೋಕಸಭೆ - ಕಾಂಗೈಗೆ ಭರ್ಜರಿ ಫಸಲು: ಗುಪ್ತ ಮಾಹಿತಿ
ಬೆಂಗಳೂರು, ಜುಲೈ9: ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತುಸು ಓವರ್ ಸ್ಪೀಡಾಗಿಯೇ ಕಾರ್ಯಮಗ್ನರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶ್ರಮ ಫಲ ನೀಡುವುದೇ? ಅಂದರೆ ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳು ಇವೆ. ಅವುಗಳನ್ನು ಕಾಂಗ್ರೆಸ್ ಪಕ್ಷವು ಸಾರಾಸಗಟಾಗಿ ಬಾಚಿಕೊಳ್ಳುವುದೇ?
ಕೇಂದ್ರದಲ್ಲಿ ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಧ್ಯಮ ಸಮೀಕ್ಷೆಗಳು ನಿರಂತರವಾಗಿ ಹೇಳುತ್ತಿರುವಾಗ ರಾಜ್ಯದ ಕಥೆಯೇನು? ರಾಜ್ಯದ ಮತದಾರ ಸಿದ್ದರಾಮಯ್ಯ ಆಡಳಿತಕ್ಕೆ ಕೈ ಎತ್ತಿ ಜೈ ಅನ್ನುತ್ತಾನಾ? ಎಂಬ ಸಂದೇಹಗಳು ಕಾಡುತ್ತಿರುವುದು ಕರ್ನಾಟಕದ ಜನತೆಯನ್ನು ಅಲ್ಲ- ಕಾಂಗ್ರೆಸ್ಸಿಗೆ!
ಖುದ್ದು ಆಡಳಿತ ಪಕ್ಷವೇ ತನ್ನನ್ನು ತಾನು ಪರೀಕ್ಷೆಗೆ ಒಡ್ಡಿಕೊಳ್ಳಲು ಮುಂದಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಗಳಿಗೆ ತುಸು ಕೆಲಸ ಹಚ್ಚಿ, ಗುಪ್ತ ಮಾಹಿತಿಯನ್ನು ಕಲೆ ಹಾಕಿದೆ. ಅಂಗೈ ತೋರಿಸಿ ಸೈ ಎನಿಸಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ 23 ಸ್ಥಾನಗಳನ್ನು ಬಾಚಿಕೊಳ್ಳಲಿದೆ ಎನ್ನುತ್ತಿದೆ ಗುಪ್ತ ಮಾಹಿತಿ. ಗುಪ್ತ್ ಗುಪ್ತ್ ಮಾಹಿತಿಗಾಗಿ ಸ್ಲೈಡ್ ಪ್ಲೀಸ್...

ಒಟ್ನಲ್ಲಿ ಹೆಚ್ಚು ಸಂಸದರು ಗೆಲ್ಲಬೇಕು:
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಕೆಲಸ ಮಾಡಲಿದೆ ಎಂಬ ಗುಪ್ತ ಮಾಹಿತಿ ರವಾನೆಯಾಗುತ್ತಿದ್ದಂತೆ 9 ವರ್ಷಗಳ ನಂತರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಂಚಲನ ತಂದಿದೆ. ಕಾರ್ಯಕರ್ತರಲ್ಲಿ ಹುಮ್ಮಸ್ಸಿನ ಹೊಳೆ ಹರಿಸಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ UPA ಸರ್ಕಾರದ ಕುರ್ಚಿ ಅಲುಗಾಡುತ್ತಿದೆ. ಸಮೀಕ್ಷೆಗಳೆಲ್ಲಾ ಯುಪಿಎ ಸರ್ಕಾರದ ವಿರುದ್ಧವಾಗಿದೆ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಾತಾವರಣವಿದೆ. ನಾಯಕತ್ವ ಯಾರು ವಹಿಸಿದರೂ ಅದು ಮುಖ್ಯವಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿರಬೇಕು. ಹೆಚ್ಚು ಸಂಸದರು ಗೆಲ್ಲಬೇಕು ಎಂಬ ಧೋರಣೆ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ.

ಬಿಜೆಪಿ-ಕೆಜೆಪಿ ಗೊಂದಲ ಕಾಂಗ್ರೆಸ್ಗೆ ವರ:
ರಾಜ್ಯದ ಬಿಜೆಪಿಯಲ್ಲಿ ನಾಯಕತ್ವದ ಗೊಂದಲ ಬಗೆಹರಿದಿಲ್ಲ. ಯಡಿಯೂರಪ್ಪ ಅವರನ್ನು ಸೇರಿಸಿಕೊಳ್ಳುವ ಅಥವಾ ಬಿಡುವ ಜಿಜ್ಞಾಸೆ ಮುಂದುವರಿದಿದೆ. ಕಳೆದ ಬಾರಿ ಯಡಿಯೂರಪ್ಪನವರು ಬೇರೆ ಪಕ್ಷ ಕಟ್ಟಿ ಚುನಾವಣೆ ಎದುರಿಸಿದ್ದಕ್ಕೆ ಬಿಜೆಪಿಗೆ ಮರ್ಮಾಘಾತವಾಗಿತ್ತು.
ಅದರಿಂದ ಬಿಜೆಪಿ ಪಕ್ಷ ಇನ್ನೂ ಹೊರ ಬಂದಿಲ್ಲ. ಶೇ. 10ರಷ್ಟು ಮತವನ್ನು ಯಡಿಯೂರಪ್ಪ ಪಕ್ಷ ಗಳಿಸಿತ್ತು. ಒಂದು ವರ್ಗದವರು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದರು.
ಕೆಜೆಪಿಯಿಂದ ಗೆದ್ದ ಆರೂ ಶಾಸಕರು ಒಂದೇ ವರ್ಗಕ್ಕೆ ಸೇರಿದವರಾಗಿದ್ದಾರೆ. ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ನಡುವೆ ಗೊಂದಲ ಇರುವುದು ಕಾಂಗ್ರೆಸ್ಗೆ ವರದಾನವಾಗುವುದರಲ್ಲಿ ಅನುಮಾನವಿಲ್ಲ.

ಕಾಂಗ್ರೆಸ್ ಮತಗಳಿಕೆ ಪ್ರಮಾಣ ಹೆಚ್ಚಳ
ಯಡಿಯೂರಪ್ಪ ಪಡೆದ ಶೇ. 10 ರಷ್ಟು ಮತದ ಬಹುಪಾಲನ್ನು ಕಾಂಗ್ರೆಸ್ ಪಡೆಯಲಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶೇ. 36ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಶೇ. 3-4 ರಷ್ಟು ಮತವನ್ನು ಹೆಚ್ಚಿಸಿಕೊಳ್ಳಲಿದೆ ಎನ್ನುತ್ತಿದೆ ಗುಪ್ತ ಚರ ಮಾಹಿತಿ

ಕರ್ನಾಟಕ ರಾಜ್ಯದತ್ತ UPA ಹೆಚ್ಚು ಆಸಕ್ತಿ
ಪ್ರಸ್ತುತ ಕಾಂಗ್ರೆಸ್ನಲ್ಲಿ ಇರುವ ಚೈತನ್ಯದ ಪರಿಸ್ಥಿತಿ ಮುಂದುವರಿದರೆ ನಿರೀಕ್ಷೆ ಮೀರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದಾಗಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತಗಳತ್ತ ಹೆಚ್ಚು ತನ್ನ ಚಿತ್ತ ಹರಿಸಿದೆ. ಪ್ರಬಲ ಲಿಂಗಾಯಿತ, ಒಕ್ಕಲಿಗರು ಆಡಳಿತಾರೂಢ ಕಾಂಗ್ರೆಸಿಗೆ ಒಲವು ತೋರುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ರಾಜ್ಯದಲ್ಲಿ ಯಾವುದೇ ಅಡೆ-ತಡೆ ಇಲ್ಲದೆ ಮುನ್ನುಗ್ಗಲಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ. ಹಾಗಾಗಿ ಯುಪಿಎ ಸರ್ಕಾರ, ಕರ್ನಾಟಕ ರಾಜ್ಯಕ್ಕೆ ಹೆಚ್ಚು ಆಸಕ್ತಿ ತೋರಿಸಿದೆ.

ಸಿದ್ದರಾಮಯ್ಯ ಬಜೆಟ್ ಕುತೂಹಲದ ಗೂಡು:
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಹತ್ವಾಕಾಂಕ್ಷಿ ಆಹಾರ ಭದ್ರತಾ ಕಾಯ್ದೆಯನ್ನು ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕ ಮತ್ತು ದೆಹಲಿಯಲ್ಲಿ ಜಾರಿಗೊಳಿಸಲು ಮುಂದಾಗಿದೆ. ಅನ್ನ ಭಾಗ್ಯ ಯೋಜನೆ ಯಶಸ್ವಿಯಾದರೆ ಕಾಂಗ್ರೆಸ್ ಪಕ್ಷ ಮತ್ತಷ್ಟು ಜನಪ್ರಿಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್ ಕುತೂಹಲಕಾರಿಯಾಗಿದೆ.

ರಾಮ ಜಪ - ಮೋದಿ ಫ್ಯಾಕ್ಟರ್ ಕಾಂಗೈಗೆ ಪೂರಕ
ಬಿಜೆಪಿ ಮತ್ತೆ ರಾಮಮಂದಿರ ಜಪ ಮಾಡುತ್ತಿರುವುದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪಟ್ಟಕಟ್ಟಲು ಮುಂದಾಗಿರುವುದೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ಅಲ್ಪಸಂಖ್ಯಾತ ಮತಗಳು ಕ್ರೂಢೀಕರಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ. ಅಲ್ಪಸಂಖ್ಯಾತರು ಪ್ರಾದೇಶಿಕ ಪಕ್ಷವನ್ನು ಬದಿಗೆ ಸರಿಸಿ ರಾಷ್ಟ್ರೀಯ ಪಕ್ಷವನ್ನು ಕೈ ಹಿಡಿಯುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಹವಾ ರಾಜ್ಯದಲ್ಲಿ ಜೋರು
ಎಲ್ಲಕ್ಕಿಂತ ಮಿಗಿಲಾಗಿ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷ ಶೇ. 36 ರಷ್ಟು ಮತ ಪಡೆದಿತ್ತು. ಆಂತರಿಕ ಗೊಂದಲ, ವ್ಯಾಪಕ ಭ್ರಷ್ಟಾಚಾರ, ಯಡಿಯೂರಪ್ಪ ಮತ್ತು ಶ್ರೀರಾಮುಲು ಬೇರೆ ಪಕ್ಷ ಕಟ್ಟಿದ್ದು ಭಾರಿ ಹೊಡೆತ ನೀಡಿತ್ತು. ಸೋತ ಪಕ್ಷಗಳನ್ನು ಜನ ಪುರಸ್ಕರಿಸುವ ಸಾಧ್ಯತೆ ಇಲ್ಲ. ಹಿಂದುಳಿದ ವರ್ಗಗಳ ನಾಯಕ, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿರುವ ಸಿದ್ದರಾಮಯ್ಯನವರ ಹವಾ ರಾಜ್ಯದಲ್ಲಿ ಜೋರಾಗಿಯೇ ಇದೆ. ಅಹಿಂದ ಮತಗಳು ಹೆಚ್ಚು ಕಾಂಗ್ರೆಸಿಗೆ ಒಲಿಯಲಿದೆ ಎನ್ನುತ್ತಿದೆ ಗುಪ್ತಚರ ಮಾಹಿತಿ.

ನಿರೀಕ್ಷೆ ಮೀರಿದ ಗುಪ್ತ ಫಲಿತಾಂಶ!:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತದ ಭರವಸೆ ಇರಲಿಲ್ಲ. ನಿರೀಕ್ಷೆ ಮೀರಿ ಫಲಿತಾಂಶ ಬಂದಿತ್ತು. ಅದೇ ರೀತಿ ಲೋಕಸಭೆ ಚುನಾವಣೆಯಲ್ಲೂ ಕೂಡ ನಿರೀಕ್ಷೆ ಮೀರಿ ಫಲಿತಾಂಶ ಬರುವ ಸಾಧ್ಯತೆ ಇದೆ. ಅಂದರೆ 28 ಕ್ಷೇತ್ರಗಳ ಪೈಕಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಗುಪ್ತ ಮಾಹಿತಿಯನ್ನು ರವಾನಿಸಿದೆ.












Click it and Unblock the Notifications