ಬಿಎಸ್ವೈ ಪಕ್ಷ ಸೇರ್ಪಡೆಗೆ ಅನಂತ್ ಕುಮಾರ್ ಅಸ್ತು!

ನವದೆಹಲಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ, ರಾಜ್ಯ ಸಂಸದರ ನಿಯೋಗದೊಂದಿಗೆ ಮಾತುಕತೆ ನಡೆಸಿದ ಅನಂತ್ ಕುಮಾರ್, ಪಕ್ಷದ ಶಕ್ತಿ ಹೆಚ್ಚಿಸುವ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಮರಳಿ ಕರೆ ತರಲು ಸಮ್ಮತಿ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು ಎಂದು ಕೇಂದ್ರ ನಾಯಕರ ಮನವೊಲಿಸಲು ಮಾಜಿ ಸಿಎಂ ಸದಾನಂದ ಗೌಡರ ನಿಯೋಗ ದೆಹಲಿಗೆ ತೆರಳಿತ್ತು. ಮಂಗಳವಾರ ನಿಯೋಗ ಅನಂತ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ರಾಜಕೀಯವಾಗಿ ಯಡಿಯೂರಪ್ಪ ಅನಂತ್ ಕುಮಾರ್ ಅವರ ಕಡುವೈರಿಯಾದರೂ, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪಕ್ಷದ ಬಲ ಹೆಚ್ಚಿಸಲು ಯಡಿಯೂರಪ್ಪ ಅನಿವಾರ್ಯ ಎಂದು ಅನಂತ್ ಕುಮಾರ್ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಬಿಸ್ವೈ ಪಕ್ಷಕ್ಕೆ ಮರಳಲು ಅವರು ಹಸಿರು ನಿಶಾನೆ ತೋರಿದ್ದಾರೆ.
ಡಿ.ವಿ.ಸದಾನಂದಗೌಡ ಅವರ ನೇತೃತ್ವ ಸಮಿತಿಯಲ್ಲಿ ಸಂಸದ ಡಿ.ಬಿ.ಚಂದ್ರೇಗೌಡ, ಜನಾರ್ದನ ಸ್ವಾಮಿ, ಕೆ.ಜಿ.ಬೋಪಯ್ಯ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಹಾಗೂ ಬಸವರಾಜ ಬೊಮ್ಮಾಯಿ ಇದ್ದರು.
ಹಿಂದೆ ಸುಳಿವು ನೀಡಿದ್ದರು : ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅನಂತ್ ಕುಮಾರ್ ಕಾಂಗ್ರೆಸ್ ಮುಕ್ತ ದೇಶವನ್ನು ನಿರ್ಮಿಸುವುದು ಬಿಜೆಪಿ ಪಕ್ಷದ ಗುರಿಯಾಗಿದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ನಾವು ಕೆಲವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಅನಂತ್ ಕುಮಾರ್ ಸುಳಿವು ನೀಡಿದ್ದರು.(ಕೆಜೆಪಿ ಜೊತೆ ಮೈತ್ರಿಗೆ ಅನಂತ್ ಕುಮಾರ್ ಅಸ್ತು?)
ರಾಜ್ಯದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗಬೇಕಾದರೆ, ಯಡಿಯೂರಪ್ಪ ಅವರೊಂದಿಗೆ ಹೊಂದಾಣಿಕೆ ಅನಿವಾರ್ಯ ಎನ್ನುವ ವಿಷಯವನ್ನು ಅನಂತ್ ಕುಮಾರ್ ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದ ಯಡಿಯೂರಪ್ಪ ಮರಳಲು ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಾನು ಹೇಳಿಕೆ ನೀಡಲ್ಲ : ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯವರಾದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬಿಎಸ್ವೈ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಆದ್ದರಿಂದ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು. [ಮೋದಿಗೆ ಜೈ ಎನ್ನಲಿದ್ದಾರೆ ಅಡ್ವಾಣಿ]












Click it and Unblock the Notifications