ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆಗೆ ಸುಪ್ರೀಂ ಅಸ್ತು

ನವದೆಹಲಿ, ಜು.9: ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿ ಚಿನ್ನದ ಗಣಿಗಾರಿಕೆ ಮತ್ತೊಮ್ಮೆ ಆರಂಭಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಹಸಿರು ನಿಶಾನೆ ನೀಡಿದೆ. ಭಾರತ್ ಗೋಲ್ಡ್ ಮೈನ್ಸ್ ಲಿ. ಮುಚ್ಚಿದ್ದರಿಂದ ಕಂಗಾಲಾಗಿದ್ದ ಗಣಿ ಕಾರ್ಮಿಕರಿಗೆ ಚಿನ್ನದಂಥ ಆದೇಶ ಸಿಕ್ಕಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಕೆಜಿಎಫ್ ನಲ್ಲಿ ಚಿನ್ನದ ಗಣಿ ಪುನರಾರಂಭಕ್ಕೆ ಮನಸ್ಸು ಮಾಡಿತ್ತು. ಕಾರ್ಮಿಕರ ಹಿತ ಕಾಯುವ ಉದ್ದೇಶದಿಂದ ಗಣಿಗಾರಿಕೆಯನ್ನು ಕಾರ್ಮಿಕರೇ ನಡೆಸಲು ಮುಂದಾದರೆ ಟೆಂಡರ್ ನಲ್ಲಿ ಅವರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ತೀರ್ಮಾನಿಸಲಾಗಿತ್ತು. ಆದರೆ, ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. BGML ಗೆ ಸಂಬಂಧಿಸಿದಂತೆ ಸುಮಾರು 24ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ನ್ಯಾಯ ದೊರಕಿಸಿಕೊಡುವಂತೆ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದವು.

ಕಾರ್ಮಿಕರ ಪರ ವಾದದಲ್ಲಿ ಹುರುಳಿರುವುದನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ಸುಮಾರು 3100ಕ್ಕೂ ಅಧಿಕ ಕಾರ್ಮಿಕರಿಗೆ ನೀಡಬೇಕಾಗಿರುವ ವೇತನವನ್ನು ಪಾವತಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

Bharat Gold Mines Limited gets SC Nod, set to revival soon

ಗಣಿಯಲ್ಲಿ ಚಿನ್ನದ ಪ್ರಮಾಣ ಅಗತ್ಯಕ್ಕಿಂತ ಕಡಿಮೆ ದೊರಕುತ್ತಿದ್ದ ಹಿನ್ನೆಲೆ ಹಾಗೂ ಗಣಿಗಾರಿಕೆ ವೆಚ್ಚ ಅಧಿಕವಾದ ಕಾರಣಕ್ಕೆ 2001ರಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಗೋಲ್ಡ್ ಮೈನ್ಸ್ ಲಿ. ಮುಚ್ಚಲು ಸರ್ಕಾರ ನಿರ್ಧರಿಸಿತು. ಗಣಿಗಾರಿಕೆ ಮತ್ತೆ ಆರಂಭಿಸುವಂತೆ ಗಣಿ ಕಾರ್ಮಿಕರು ಕಳೆದ ದಶಕದಿಂದ ಒತ್ತಾಯಿಸುತ್ತಲೇ ಬಂದಿದ್ದರು.

2003ರಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಗಣಿಯನ್ನು ಕಾರ್ಮಿಕರ ವಶಕ್ಕೆ ಒಪ್ಪಿಸುವಂತೆ ಸೂಚಿಸಿತ್ತು. ಸರ್ಕಾರ ಕೂಡಾ 2006ರ ವೇಳೆಗೆ ಮಾರುಕಟ್ಟೆ ಮೌಲ್ಯ ನಿಗದಿ, ನೂತನ ಟೆಂಡರ್ ಪ್ರಕ್ರಿಯೆ ಆರಂಭಿಸಿತು. ಆದರೆ, ಗಣಿಗಾರಿಕೆ ಮೇಲೆ ಹೂಡಬೇಕಾಗಿರುವ ಬಂಡವಾಳ ಹಾಗೂ ಸಿಗಲಿರುವ ಉತ್ಪನ್ನ (ಅಂದಾಜಿನ ಪ್ರಕಾರ 12 ವರ್ಷಕ್ಕೆ 1 ಟನ್ ಚಿನ್ನ) ಗಮನಿಸಿದ ಸರ್ಕಾರ ಕೆಜಿಎಫ್ ಗಣಿ ಆರಂಭಕ್ಕೆ ಮನಸ್ಸು ಮಾಡಲೇ ಇಲ್ಲ.

ವಾಸ್ತವಾಂಶ ಬೇರೆ ಇದೆ: ಕೆಜಿಎಎಫ್ ನಿಂದ ಶ್ರೀನಿವಾಸಪುರದವರೆಗಿನ 80 ಕಿ.ಮೀ.ನಷ್ಟು ಉದ್ದದ ಅಂತರ್ಗತ ಶಿಲಾಪದರ ಚಿನ್ನದ ಅಂಶ ಹೊಂದಿದೆ. ಜಗತ್ತಿನಲ್ಲಿ ಒಂದು ಟನ್ ಗೆ ಕೇವಲ 0.5 ಗ್ರಾಂ ಚಿನ್ನ ಸಿಕ್ಕರೂ ಅಲ್ಲಿ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೆ, ಕೆಜಿಎಎಫ್ ನಲ್ಲಿ ಪ್ರತಿ ಟನ್ ಗೆ ಐದು ಗ್ರಾಂನಷ್ಟು ಚಿನ್ನ ಸಿಗುತ್ತದೆ ಎಂಬುದು ವೈಜ್ಞಾನಿಕವಾಗಿ ನಿರೂಪಿತವಾಗಿದೆ. ಹೀಗಾಗಿ ಅಲ್ಲಿ ಮುಂದಿನ 100 ವರ್ಷ ಗಣಿಗಾರಿಕೆ ನಡೆಸಲು ಅವಕಾಶವಿದೆ ಎಂದು ವೈಜ್ಞಾನಿಕ ದಾಖಲೆಗಳು ಸಾರುತ್ತಿವೆ.

ಇತ್ತೀಚೆಗೆ ಕೂಡಂಕುಳಂ ಅಣುಸ್ಥಾವರದ ತ್ಯಾಜ್ಯವನ್ನು ಕೆಜಿಎಎಫ್ ನ ಗಣಿ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಸಾಲಿಸಿಟರ್ ಜನರಲ್ ರೋಹಿಂಗ್ಟನ್ ನಾರೀಮನ್ ನೀಡಿದ ಹೇಳಿಕೆ ವಿವಾದ ಎಬ್ಬಿಸಿತ್ತು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ತಮ್ಮ ಸ್ವಕ್ಷೇತ್ರದಲ್ಲಿ ಅಣುತ್ಯಾಜ್ಯ ಬರುವ ಯೋಜನೆ ಬಗ್ಗೆ ತಿಳಿದು ಕಂಗಾಲಾದರು. ಆದರೆ, ನಂತರ ಪರಿಸ್ಥಿತಿ ವಿವರಿಸಿ ಗಣಿ ಇನ್ನೂ ಜೀವಂತ ಇರುವ ಬಗ್ಗೆ ವಿವರಿಸಿ ಕೋಲಾರದ ಕಡೆಗೆ ಅಣುತ್ಯಾಜ್ಯ ಗಾಳಿ ಸೋಂಕದಂತೆ ನೋಡಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+