ಅನ್ನ ಭಾಗ್ಯ ಫಲಾನುಭವ: ಗಗನಕ್ಕೆ ಏರಲಿದೆ ಅಕ್ಕಿ ಬೆಲೆ
ಬೆಂಗಳೂರು, ಜುಲೈ8: ಬಿಪಿಎಲ್ ಕಾರ್ಡುದಾರರಿಗಾಗಿ 'ಅನ್ನ ಭಾಗ್ಯ' ಉಣಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಲ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಅಂದರೆ ಜುಲೈ 10ರಂದು ಬಹುತೇಕ ಜಿಲ್ಲೆಗಳಲ್ಲಿ 1 ರೂಪಾಯಿಗೆ 1 ಕೆಜಿ ಅಕ್ಕಿ ವಿತರಿಸುವ ಸರಕಾರಿ ಯೋಜನೆ ಜಾರಿಯಾಗುವುದು ನಿಶ್ಚಿತವಾಗಿದೆ.
ಆದರೆ ಇದ ಬೆನ್ನಿಗೇ ಹಲವಾರು ಆತಂಕಗಳು ಎದುರಾಗಿವೆ. ತಮ್ಮ ಜನಪ್ರಿಯ ಯೋಜನೆ ಕೈಗೂಡಿಸಿಕೊಳ್ಳಲು ಲೆವಿ ಗುಮ್ಮನ ಬೆನ್ನುಬಿದ್ದಿದ್ದಾರೆ. ಇದರಿಂದ ಗಿರಣಿ ಮಾಲೀಕರು, ವ್ಯಾಪಾರಸ್ಥರು ಬಾಯಿಗೆ ಅಕ್ಕಿ ಕಾಳು ಹಾಕಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.
ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ 1 ಕೆಜಿ ಅಕ್ಕಿ 50 ರೂ ಗಡಿದಾಟಿ ಯಾವುದೋ ಕಾಲವಾಗಿ ಈಗ 55 ರೂ. ಗೆ ಬಂದು ನಿಂತಿದೆ. ಮಧ್ಯಮ ವರ್ಗದ ಹೆಣ್ಣುಮಕ್ಕಳು ಅಕ್ಕಿ ರೇಟು ಕೇಳಿ ಕಣ್ಣೀರು ಹಾಕುತ್ತಲೇ ದಿನಾ ಅನ್ನಕ್ಕೆ ಎಸರು ಇಡುತ್ತಿದ್ದಾರೆ. ಆದರೆ ಮಧ್ಯಮ ವರ್ಗದವರನ್ನು ಮತ್ತಷ್ಟು ಅಧೀರರನ್ನಾಗಿಸುವ ಸುದ್ದಿಯೂ ಇದೆ.

ಏನಪ್ಪಾ ಅಂದರೆ ಸಿಎಂ ಸಿದ್ದರಾಮಯ್ಯಮನವರು ತಮ್ಮ ಸದುದ್ದೇಶ ಈಡೇರಿಕೆಗಾಗಿ ಲೆವಿ ಗುಮ್ಮನನ್ನು ಛೂ ಬಿಟ್ಟುರುವುದು ಸರಿಯಷ್ಟೇ. ಆದರೆ ಇದರ ನಷ್ಟ ಭರಿಸಲು ಗಿರಣಿ ಮಾಲೀಕರು/ ಅಕ್ಕಿ ವ್ಯಾಪಾರಿಗಳು ಸದ್ಯದಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ ಎನ್ನುತ್ತಿವೆ ಯಶವಂತಪುರದ ಎಂಪಿಎಂಸಿ ಯಾರ್ಡ್ ಅಂಗಡಿಕಟ್ಟೆಗಳು.
ಸರಕಾರ 20 ರೂ ದರದಲ್ಲಿ ಲೆವಿ ಅಕ್ಕಿ ಸಂಗ್ರಹಕ್ಕೆ ಮುಂದಾಗಿದೆ. ಹಳೆಯ ಬಾಕಿ ಸೇರಿದಂತೆ ಹಾಲಿ ಕೋಟಾವನ್ನು ಸಹ ನಾವು ಇದೇ ದರದಲ್ಲಿ ಸರಕಾರಕ್ಕೆ ಅಕ್ಕಿ ಕಟ್ಟಬೇಕಾಗಿದೆ. ಆದರೆ ವಾಸ್ತವವಾಗಿ ಅಕ್ಕಿ ಬೆಲೆ ಇದರ ದುಪ್ಪಟ್ಟು ಇದೆ. ನಮಗೆ ಅಕ್ಕಿ ದರ 45 ರೂಗೆ ಬೀಳುತ್ತದೆ. ಇಷ್ಟೊಂದು ನಷ್ಟವನ್ನು ನಾವು ಭರಿಸುವುದು ಹೇಗೆ. ಹಾಗಾಗಿ ಆ ನಷ್ಟವನ್ನು ಸಾಮಾನ್ಯ ಗ್ರಾಹಕರಿಗೆ ವರ್ಗಾಯಿಸುತ್ತೇವೆ. ಇದರಿಂದ ಸದ್ಯದಲ್ಲೇ 1 ಕೆಜಿ ಅಕ್ಕಿ 60 ರೂ. ಆದರೆ ನಾವು ಜವಾಬ್ದಾರರಲ್ಲ ಎಂದು ಗಿರಣಿ ಮಾಲೀಕರು/ ಅಕ್ಕಿ ವ್ಯಾಪಾರಸ್ಥರು ಆಗಲೇ ಎದ್ದುಕುಳಿತಿದ್ದಾರೆ.
ಹಿಂದಿನ ಹೊಣೆಗೇಡಿ ಬಿಜೆಪಿ ಸರಕಾರ ರಾಜಕೀಯದಲ್ಲಿ ಕಾಲಹರಣ ಮಾಡುತ್ತಾ ಉದ್ದೇಶಪೂರ್ವಕವಾಗಿ ಲೆವಿ ಅಕ್ಕಿ ಸಂಗ್ರಹವನ್ನು ಅರ್ಧಂಬರ್ಧ ಮಾಡಿತ್ತು. ಇದರಿಂದ ಗಿರಣಿ ಮಾಲೀಕರು ಸಹ ಸರಕಾರಕ್ಕೆ ಲೆವಿ ಕಟ್ಟದೇ ಸುಮ್ಮನಾಗಿದ್ದರು. ಆದರೆ ಈಗ ಅನ್ನ ಭಾಗ್ಯ ಕಲ್ಪಿಸುವ ಧಾವಂತದಲ್ಲಿರುವ ಸಿಎಂ ಸಿದ್ದು ಅವರು ಬಾಕಿ ಸಹಿತ ಎಲ್ಲ ಲೆವಿ ಅಕ್ಕಿಯನ್ನು ಕಡ್ಡಾಯವಾಗಿ ಸಂಗ್ರಹಿಸಿ ಎಂದು ಆದೇಶಿಸಿದಿದ್ದಾರೆ. ಹಾಗಾಗಿ ಸದ್ಯದಲ್ಲೇ 1 ಕೆಜಿ ಅಕ್ಕಿ ಬೆಲೆ 60 ರೂ ದಾಟುವುದು ಬಹುತೇಕ ನಿಶ್ಚಿತವಾಗಿದೆ.












Click it and Unblock the Notifications