ಎರಡನೇ ಅಡ್ವಾಣಿ ಆಗಲು ಹೊರಟ ಮೋದಿ ಬಂಟ
ಅಯೋಧ್ಯೆ, ಜು.7: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣ್ ಅವರ ಜೀವಮಾನದ ಕನಸನ್ನು ನನಸು ಮಾಡಲು ನರೇಂದ್ರ ಮೋದಿ ಅವರ ಬಂಟ ಅಮಿತ್ ಶಾ ಸಿದ್ಧತೆ ನಡೆಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಉಸ್ತುವಾರಿ ಅಮಿತ್ ಶಾ ಮತ್ತೊಮ್ಮೆ ರಾಮ ಮಂದಿರ ಬೀಜ ಬಿತ್ತು ಹೋಗಿದ್ದಾರೆ. ಎಲ್ಲವೂ ಯೋಜನೆಯಂತೆ ನಡೆಯುತ್ತಿದೆ ಎಂದು ಅಧ್ಯಕ್ಷ ರಾಜನಾಥ್ ಸಿಂಗ್ ಹರ್ಷವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಈ ಬಾರಿ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೇರಿದ ಗುಜರಾತಿನ ಮುಖ್ಯಮಂತ್ರಿ ಮೋದಿ ಅವರ ಅನುಯಾಯಿಗಳು ಮತ್ತೊಮ್ಮೆ ರಾಮಮಂದಿರ ನಿರ್ಮಾಣದ ವಿಷಯವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ವಿಚಾರವನ್ನ ಸಾರ್ವಜನಿಕರ ಮುಂದಿಡಲು ಬಿಜೆಪಿ ಸೂಕ್ತವಾದ ಸಮಯವನ್ನು ಕಾಯುತ್ತಿತ್ತು. ಬಿಜೆಪಿ ಮುಖಂಡ, ಉತ್ತರ ಪ್ರದೇಶ ಉಸ್ತುವಾರಿ ಅಮಿತ್ ಶಾ ಅವರು ಇತ್ತೀಚೆಗೆ ನೀಡಿದ ಭೇಟಿ ರಾಮಮಂದಿರ ನಿರ್ಮಾಣದ ಬಗ್ಗೆ ನೀಡಿದ ಹೇಳಿಕೆ ಈಗ ಚರ್ಚಾಸ್ಪದವಾಗಿದೆ.
ಉತ್ತರಪ್ರದೇಶ ಭೇಟಿ ಸಂದರ್ಭದಲ್ಲಿ ಅಮಿತ್ ಶಾ ಅವರು ತಮ್ಮ ಗುರು ಮೋದಿ ಅವರಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.. ಅಮಿತ್ ಶಾ ಭೇಟಿ, ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಚುನಾವಣಾ ಪ್ರಚಾರಕ್ಕೆ ತಯಾರಾದ ಮೋದಿ ಟೀಮ್ ನಲ್ಲಿ ಯಾರು ಯಾರಿದ್ದಾರೆ ಮುಂದೆ ನೋಡಿ....

ರಾಮನ ಜನ್ಮಸ್ಥಳದಲ್ಲಿ ಅಮಿತ್
ರಾಮನ ಜನ್ಮಸ್ಥಳ ಎನ್ನಲಾದ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ರಾಮಲಲ್ಲಾ ಮಂದಿರಕ್ಕೆ ಭೇಟಿ ನೀಡಿದ ವೇಳೆ ಅಮಿತ್ ಶಾ ಭವ್ಯವಾದ ರಾಮಮಂದಿರ ನಿರ್ಮಾಣದ ಕನಸು ನನಸಾಗಬೇಕಿದೆ. ಬೃಹತ್ ಮಂದಿರ ನಿರ್ಮಾಣ ಮಾಡಲು ನಮಗೆ ಶಕ್ತಿ ನೀಡುವಂತೆ ಶ್ರೀರಾಮಚಂದ್ರನಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಆದರೆ, ಅಪ್ಪಿ ತಪ್ಪಿ ಕೂಡಾ ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಬಗ್ಗೆ ಅಮಿತ್ ಮಾತನಾಡಲಿಲ್ಲ. ಸಿಬಿಐ ತಂಡ ಇಶ್ರತ್ ಜಹಾನ್ ಪ್ರಕರಣ ಕುರಿತ ದೋಷಾರೋಪಣ ಪಟ್ಟಿಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹೆಸರು ಕೈಬಿಟ್ಟಿರುವುದು ಗಮನಾರ್ಹ.

ಮೋದಿ ಚುನಾವಣೆ ತಂತ್ರ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಭವಿಷ್ಯ ಸೂಚಕವಾಗಿರುವ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಕನಿಷ್ಠ 40 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಗುರಿ ಹಾಕಿಕೊಂಡಿದೆ.
ಇದಕ್ಕಾಗಿ ನರೇಂದ್ರಮೋದಿ ಅವರು ತಮ್ಮ ಪ್ರಚಾರ ಸಮಿತಿಗೆ ಸಾಮಾಜಿಕ ಜಾಲ ತಾಣಗಳ ಮೆಲೆ ಕಣ್ಣಿಡುವಂತೆ ಸೂಚಿಸಿದ್ದಾರೆ. ಸಮಾಜವಾದಿ ಪಕ್ಷದ ಹಾಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜನಪ್ರಿಯತೆ ಫೇಸ್ ಬುಕ್ ನಲ್ಲಿ ಏರುತ್ತಲೇ ಇದೆ. ಬಿಜೆಪಿ ಇಲ್ಲಿ ರಾಮಜಪ ಬಿಟ್ಟರೆ ಮತ್ತೇನು ಮಾಡುವಂತಿಲ್ಲ.

ಮೋದಿ ತಂಡ ಇಂತಿದೆ
ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲ ತಾಣಗಳ ಜನರನ್ನು ಸೆಳೆಯಲು ಮೋದಿ ಹೊಸ ತಂಡ ಕಟ್ಟಿದ್ದಾರೆ.
ಸಾಮಾಜಿಕ ಜಾಲ ತಾಣಗಳ ಹೊಣೆ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ವಹಿಸಿಕೊಂಡಿದ್ದಾರೆ. ರೇಡಿಯೋ ಮೂಲಕ ಪ್ರಚಾರ: ರಾಜೀವ್ ಪ್ರತಾಪ್ ರೂಢಿಗೆ ಒಲಿದಿದೆ.
* ಪಕ್ಷದ ಕಾರ್ಯಕರ್ತರ ಸಭೆ, ಪದಾಧಿಕಾರಿಗಳ ಸಭೆ ಆಯೋಜನೆ: ಧರ್ಮೇಂದ್ರ ಪ್ರಧಾನ್, ರಾಮಲಾಲ್, ಸುಧಾಂಶು ತ್ರಿವೇದಿಗೆ ಹೆಗಲಿಗೆ ಬಿದ್ದಿದೆ.
* ಯುಪಿಎ ಸರ್ಕಾರ ವಿರುದ್ಧ ಟೀಕಾಸ್ತ್ರ ಪ್ರಯೋಗ, ಪ್ರಚಾರಕ್ಕೆ ಮಾಹಿತಿ ಒದಗಿಸುವುದು ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿಗೆ
* ಡಾಕ್ಟರ್, ಇಂಜಿನಿಯರ್ ಹಾಗೂ ವೃತ್ತಿಪರರ ಸಂಘಟನೆ ಹೊಣೆ : ಜೆಪಿ ನಡ್ಡಾ
* ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ವರುಣ್ ಗಾಂಧಿಗೆ ಯಾವ ಹೊಣೆ ಎಂಬುದು ಜು.8ರ ನಂತರ ತಿಳಿಯಲಿದೆ.

ಕಲ್ಯಾಣ್ ಸಿಂಗ್ ಖುಷಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಹಾಗೂ ಅವರ ಪುತ್ರ ರಾಜವೀರ್ ಸಿಂಗ್ ಜೊತೆ ಉತ್ತರ ಪ್ರದೇಶ ಉಸ್ತುವಾರಿ ಅಮಿತ್ ಶಾ

ರಾಜನಾಥ್ ಸಿಂಗ್ ಹೇಳಿಕೆ
ಎಲ್ ಕೆ ಅಡ್ವಾಣಿ ಅವರು ಬಿಜೆಪಿಯ ಹಿರಿಯ ನಾಯಕರಾಗಿದ್ದು ಕಳೆದ ಒಂದು ವಾರದಿಂದ ಆರೆಸ್ಸೆಸ್ ಹಾಗೂ ಕೆಲವು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಡ್ವಾಣಿ ಹಾಗೂ ಬಿಜೆಪಿಯ ಕನಸು.
ಅಮಿತ್ ಶಾ ಅವರ ಉತ್ತರ ಪ್ರದೇಶ ಭೇಟಿ ಫಲಪ್ರದವಾಗಿದೆ. ನರೇಂದ್ರ ಮೋದಿ ಹಾಗೂ ಅಡ್ವಾಣಿ ಅವರ ನಡುವೆ ಯಾವುದೇ ಭಿನ್ನಮತವಿಲ್ಲ. ಈಗ ಪಕ್ಷ ಮತ್ತಷ್ಟು ಬಲಗೊಂಡಿದೆ. ಎಂದಿದ್ದಾರೆ.












Click it and Unblock the Notifications