ಬೆಂಗಳೂರು ಸೇರಿ 8 ನಗರದ ಮೇಲೆ ಉಗ್ರರ ಕಣ್ಣು
ಬೆಂಗಳೂರು, ಜು.7: ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ ಭಗವಾನ್ ಬುದ್ಧನಿಗೆ ಜ್ಞಾನೋದಯ ನೀಡಿದ ನಾಡಿನಲ್ಲಿ ಭಾನುವಾರ ಸಂಭವಿಸಿದ ಸ್ಫೋಟಕ್ಕೆ ಇಡೀ ದೇಶವೇ ಬೆಚ್ಚು ಬಿದ್ದಿದೆ. ಈ ನಡುವೆ ಗುಪ್ತಚರ ಇಲಾಖೆ ಬೆಂಗಳೂರು ಸೇರಿದಂತೆ 8 ನಗರಗಳಿಗೆ ಉಗ್ರರ ದಾಳಿ ಎಚ್ಚರಿಕೆಯನ್ನು ನೀಡಿದೆ. ಬೊಧ್ ಗಯಾ ಸ್ಫೋಟ ಹಿಂದೆ ರಿಯಾಜ್ ಭಟ್ಕಳ ಕೈವಾಡ ಇರುವ ಶಂಕೆ ಕೂಡಾ ವ್ಯಕ್ತವಾಗಿದೆ.
ಉನ್ನತ ಮೂಲಗಳ ಪ್ರಕಾರ ಕಳೆದ ಅಕ್ಟೋಬರ್ ನಲ್ಲಿ ಸೆರೆಸಿಕ್ಕ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸೈಯದ್ ಮಕ್ಬೂಲ್ ಈ ಕೃತ್ಯ ನಡೆಸಿದ್ದಾನೆ. ರಿಯಾಜ್ ಭಟ್ಕಳನನ್ನು ಸಂಪರ್ಕಿಸಿ ಮಹಾಬೋಧಿ ದೇಗುಲದಲ್ಲಿ ಬಾಂಬ್ ಸ್ಫೋಟ ನಡೆಸಲು ಅನುಮತಿ ಕೋರಿದ್ದಾನೆ. ರಿಯಾಜ್ ಆದೇಶ, ಯೋಜನೆಯಂತೆ ಸ್ಫೋಟ ಸಂಭವಿಸಿದೆ.
ಬೌದ್ಧರ ಧಾರ್ಮಿಕ ಕ್ಷೇತ್ರವಾದ ಬಿಹಾರದ ಬೋಧಗಯಾದಲ್ಲಿರುವ, ಭಗವಾನ್ ಬುದ್ಧ ಜ್ಞಾನೋದಯ ಪಡೆದ ವಿಶ್ವಪ್ರಸಿದ್ಧ ಮಹಾಬೋಧಿ ಮಂದಿರದಲ್ಲಿ ಜು.7ರ ಬೆಳಗಿನ ಜಾವ ಸರಣಿ ಸ್ಪೋಟಗಳು ಸಂಭವಿಸಿದ ಸ್ಥಳಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ನಡುವೆ ಸಂಭಾವ್ಯ ಬಾಂಬ್ ಸ್ಫೋಟದ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಿದ ಸಿಎಂ ನಿತೀಶ್ ಕುಮಾರ್ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಗುಜರಾತ್ ಸಿಎಂ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಮಹಾಬೋಧಿ ದೇಗುಲ ಬಳಿ ಸ್ಫೋಟವನ್ನು ಖಂಡಿಸಿದ್ದಾರೆ.
ಸದ್ಯಕ್ಕೆ ಬಿಹಾರದ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಸ್ಫೋಟದಲ್ಲಿ ಅಲ್ ಖೈದಾ ಕೈವಾಡದ ಸಾಧ್ಯತೆ ಕಮ್ಮಿ ಎಂದು ಗೃಹ ಇಲಾಖೆ ಹೇಳಿದೆ. ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಆರೋಪಿಗಳನ್ನು ಪ್ರಶ್ನಿಸಲಾಗುತ್ತಿದೆ. ಇದೊಂದು ಉಗ್ರರ ಕೃತ್ಯ ಎಂದು ಗೃಹ ಇಲಾಖೆ ರಾಜ್ಯ ಸಚಿವ ಆರ್ ಪಿಎನ್ ಸಿಂಗ್ ಹೇಳಿದ್ದಾರೆ.
ಎಚ್ಚರಿಕೆ ಗಂಟೆ: ಬಿಹಾರದ ಬಾಂಬ್ ಸ್ಫೋಟ ನಂತರ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ನವದೆಹಲಿ, ಪುಣೆ, ಮುಂಬೈ ಹಾಗೂ ಅಹಮದಾಬಾದ್ ನಗರಗಳಲ್ಲಿ ಹೈ ಅಲರ್ಟ್ ಘೋಷಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಗೃಹ ಇಲಾಖೆ ಎಚ್ಚರಿಕೆ ನೀಡಿದೆ.
ಮಾಯಾನ್ಮಾರ್ ನ ಟಿಬೇಟ್ ನಿವಾಸಿಗಲ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮ್ ಹಾಗೂ ಬೌದ್ಧರ ನಡುವೆ ನಡುವೆ ನಡೆದಿದ್ದ ಘರ್ಷಣೆಯ ಪ್ರತಿಯಾಗಿ ಈ ಸ್ಫೋಟ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ದಾಳಿ ಬಗ್ಗೆ ಗುಪ್ತಚರ ಇಲಾಖೆ ಈ ಹಿಂದೆಯೂ ಎಚ್ಚರಿಕೆ ಮಾಹಿತಿ ನೀಡಿತ್ತು.












Click it and Unblock the Notifications