ಐಟಿ ಕಾರಿಡಾರ್ ಹಗರಣ, ಯಡಿಯೂರಪ್ಪ ಆರೋಪಿ

ಐಟಿ ಕಾರಿಡಾರ್ ಗೆ ಸೇರಿದ ವರ್ತೂರು-ವೈಟ್ ಫೀಲ್ಡ್ ಪ್ರದೇಶದ ಸುಮಾರು 100 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪವನ್ನು ಯಡಿಯೂರಪ್ಪ, ಆರ್ ವಿ ದೇಶಪಾಂಡೆ ಸೇರಿದಂತೆ 7 ಜನ ಆರೋಪಿಗಳ ಮೇಲೆ ಹಾಕಲಾಗಿದೆ. ಈ ಕುರಿತು ಇತ್ತೀಚೆಗೆ ಲೋಕಾಯುಕ್ತ ಕೋರ್ಟಿನಲ್ಲಿ ದೂರು ಸಲ್ಲಿಸಲಾಗಿದೆ.
ಬೃಂದಾವನ ಟೆಕ್ ವಿಲೇಜ್ ಹೆಸರಿನ ಐಟಿ ಪ್ರದೇಶದಲ್ಲಿ ಅನೇಕ ಐಟಿ ಹಾಗೂ ಐಟಿಯೇತರ ಸಂಸ್ಥೆಗಳಿದೆ ಸುಮಾರು 100 ಎಕರೆ ವಿಸ್ತೀರ್ಣದ ಈ ಭೂ ಭಾಗದ ಬೆಲೆ ಸುಮಾರು 2000 ಕೋಟಿ ರು ಎನ್ನಲಾಗಿದೆ.
ಲೋಕಾಯುಕ್ತಕ್ಕೆ ದೂರು ನೀಡಿರುವ ವಾಸುದೇವ ರೆಡ್ಡಿ ಪ್ರಕಾರ, 2004ರಲ್ಲಿ ಕೈಗಾರಿಕಾ ಸಚಿವರಾಗಿದ್ದ ಆರ್ ವಿ ದೇಶಪಾಂಡೆ ಅವರು ಅನೇಕ ಉದ್ಯಮಿಗಳ ಜೊತೆ ಕೈ ಜೋಡಿಸಿ ಅಕ್ರಮವಾಗಿ ಭೂ ಪ್ರದೇಶವನ್ನು ಡಿನೋಟಿಫೈ ಮಾಡಿಸಿಕೊಂಡಿದ್ದಾರೆ. ದೇವರಬೀಸನಹಳ್ಳಿ, ವರ್ತೂರು ವ್ಯಾಪ್ತಿಯ ಈ ಪ್ರದೇಶಗಳ ಭೂಮಿಯನ್ನು ಡಿನೋಟಿಫೈ ಮಾಡುವಲ್ಲಿ ಯಡಿಯೂರಪ್ಪ ಅವರ ಪಾತ್ರವೂ ಇದ್ದು. ಉದ್ಯಮಿಗಳ ಜೊತೆ ಯಡಿಯೂರಪ್ಪ ನಿರಂತರ ಸಂಪರ್ಕದಲ್ಲಿದ್ದರು ಎಂದು ದೂರಿದ್ದಾರೆ.
ಕೈಗಾರಿಕಾ ಸಂಸ್ಥೆಗಳಿಗೆ ಅಕ್ರಮ ಭೂ ಹಂಚಿಕೆ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡನೇ ಬಾರಿಗೆ ಈ ರೀತಿ ಭೂ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿಂದೆ ಕೆಐಎಡಿಬಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಹೊತ್ತಿದ್ದ ಯಡಿಯೂರಪ್ಪ ಅವರು ಭಾರಿ ಮುಜುಗರಕ್ಕೆ ಒಳಗಾಗಿದ್ದರು.
ಸುಪ್ರೀಂ ಬಿಲ್ಡ್ ಕಾಪ್ ಪ್ರೈ.ಲಿಮಿಟೆಡ್, ವಿಕಾಸ್ ಟೆಲಿಕಾಂ ಪ್ರೈ. ಲಿ ಹಾಗೂ ಇನ್ನೊಂದು ಖಾಸಗಿ ಕಂಪನಿಗೆ ಇದರಿಂದ ಭಾರಿ ಲಾಭವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ವಾಸುದೇವ ರೆಡ್ಡಿ ಲೋಕಾಯುಕ್ತ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಉದ್ಯಮಿ ಅಲಂಪಾಷಾ ಅವರಿಗೆ 23 ಎಕರೆ ನೀಡಲಾಗಿತ್ತು. ಇದರಲ್ಲಿ KIADBಗೆ ಸೇರಿದ 20 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ. ಕೈಗಾರಿಕಾ ಭೂಮಿಗೆ ತೆರಿಗೆ ಮನ್ನಾ ಮಾಡಿ, ಯಡಿಯೂರಪ್ಪ ಅವರು ತಮ್ಮ ಅಪ್ತರಿಗೆ ಹಂಚಿಕೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಕೆಐಎಡಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ನಂತರ ಕಟ್ಟಾ ಸುಬ್ರಮಣ್ಯ ನಾಯ್ಡು, ಕಟ್ಟಾ ಜಗದೀಶ್ ಹಾಗೂ ಇಟಾಸ್ಕಾ ಸಂಸ್ಥ ಎಂಡಿ ಶ್ರೀನಿವಾಸ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.












Click it and Unblock the Notifications