ಬೆಂಗಳೂರು ರಕ್ತ ಪ್ರಮಾದಕ್ಕೆ ಯುವತಿ ಬಲಿ!

ರಕ್ತಹೀನತೆಯಿಂದ ಬಳಲುತ್ತಿದ್ದ ರಾಜೇಶ್ವರಿ (25) ಅವರಿಗೆ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರು 'ಒ' ಪಾಸಿಟಿವ್ ಗುಂಪಿನ ರಕ್ತದ ಬದಲಿಗೆ 'ಬಿ' ಪಾಸಿಟಿವ್ ನೀಡಿದ್ದಾರೆ. ಪರಿಣಾಮವಾಗಿ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವತಿ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.
ನಾಲ್ಕು ವರ್ಷಗಳಿಂದ ರಕ್ತಹೀನತೆಯಿಂದ ಬಳಲುತ್ತಿದ್ದ ರಾಜೇಶ್ವರಿ ಅವರಿಗೆ ನಿಯಮಿತವಾಗಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿಯೇ ರಕ್ತಕೊಡಿಸಲಾಗುತ್ತಿತ್ತು. ಜೂ. 29ರಂದು ರಾಜೇಶ್ವರಿ ತೀವ್ರವಾಗಿ ಅಸ್ವಸ್ಥವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು.
ಪರೀಕ್ಷೆ ನಡೆಸಿ, ವೈದ್ಯರು ರಕ್ತ ನೀಡಿದ್ದರು. ಆದರೆ, ಬೇರೆ ಗುಂಪಿನ ರಕ್ತವಾದ್ದರಿಂದ ರಾಜೇಶ್ವರಿ ಅವರ ಆರೋಗ್ಯದಲ್ಲಿ ಹದಗೆಟ್ಟಿದೆ. ಯುವತಿಯು ಸ್ಥಿತಿಕಂಡ ವೈದ್ಯರು ತಮ್ಮ ತಪ್ಪು ಮುಚ್ಚಿಹಾಕಲು ಯತ್ನಿಸಿದ್ದಾರೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ರಾಜೇಶ್ವರಿ ಅವರನ್ನು ದಾಖಲು ಮಾಡುವಂತೆ ಶಿಫಾರಸು ಮಾಡಿದ್ದಾರೆ. ಆದರೆ, ಸೆಂಟ್ ಜಾನ್ಸ್ ನಲ್ಲಿ ಐಸಿಯು ಭರ್ತಿಯಾಗಿದ್ದರಿಂದ ಅವರು ದಾಖಲು ಮಾಡಿಕೊಂಡಿಲ್ಲ.
ನಂತರ ರಾಜೇಶ್ವರಿ ಅವರನ್ನು ಪೋಷಕರು ಮೆಜೆಸ್ಟಿಕ್ ಬಳಿಯ ಶ್ರೀನಿವಾಸ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿಂದ ನಂತರ, ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೊ ನ್ಯೂರಾಲಜಿಗೆ ವಿಭಾಗಕ್ಕೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾಜೇಶ್ವರಿ ಮೃತಪಟ್ಟಿದ್ದಾರೆ.
ಕೆಲಸ ಹುಡುಕುತ್ತಿದ್ದರು : ನಾಗಮಂಗಲ ಸಮೀಪದ ಭೀಮನಹಳ್ಳಿಯ ಗೋವಿಂದಪ್ಪ ಮತ್ತು ಸುಭದ್ರಮ್ಮ ಅವರ ಪುತ್ರಿ ರಾಜೇಶ್ವರಿ ಸಹೋದರಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಮಲ್ಲೇಶ್ವರಂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದ ಅವರು ಉದ್ಯೋಗದ ಹುಡುಕಾಟದಲ್ಲಿದ್ದರು.
ಘಟನೆಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ರಾಜೇಶ್ವರಿ ಕುಟುಂಬದವರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂದೆಯೂ ನಡೆದಿತ್ತು : ಹಿಂದೆಯೂ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ರೋಗಿಯ ರಕ್ತದ ಗುಂಪಿನ ಬದಲಿಗೆ ಬೇರೆ ಗುಂಪಿನ ರಕ್ತ ನೀಡಿದ್ದರಿಂದ ಲಕ್ಷ್ಮೀ ಎಂಬುವವರು ಮೃತಪಟ್ಟಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಲೋಕಯುಕ್ತರ ಭೇಟಿ ಫಲ ನೀಡಿಲ್ಲ : ಕೆ.ಸಿ.ಜನರಲ್ ಆಸ್ಪತ್ರಗೆ ಕೆಲವು ದಿನಗಳ ಹಿಂದೆ ಲೋಕಾಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವೈದ್ಯರ ನಿರ್ಲಕ್ಷ್ಯ ಗಮನಿಸಿದರೆ, ಲೋಕಾಯುಕ್ತರ ಭೇಟಿ ಫಲ ನೀಡಿದಂತೆ ಕಾಣುತ್ತಿಲ್ಲ ಅಲ್ಲವೇ?












Click it and Unblock the Notifications