ಎನ್.ಸಿ.ಬಿ. ರಾಜರಾಜೇಶ್ವರಿ ನಗರ ಶಾಖೆ ಉದ್ಘಾಟನೆ
ಬೆಂಗಳೂರು, ಜು. 5 : ವೆಚ್ಚ ನಿಯಂತ್ರಣದ ಹೆಸರಲ್ಲಿ ಬಹುತೇಕ ಎಲ್ಲ ಬ್ಯಾಂಕ್ಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿತ ಮಾಡುತ್ತಿದ್ದು, ಇದರಿಂದ ಗ್ರಾಹಕರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ರಾಜರಾಜೇಶ್ವರಿ ನಗರದ, ಕನಕದಾಸ ವೃತ್ತದ ಬಳಿ ದಿ. ನ್ಯಾಷನಲ್ ಕೋ ಆಪರೇಟೀವ್ ಬ್ಯಾಂಕ್ನ 11ನೇ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಆಶೀರ್ವಚನ ನೀಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ತ್ವರಿತವಾಗಿ ಗುಣಮಟ್ಟದ ಸೇವೆ ಒದಗಿಸಬೇಕು ಎಂದರು.
ಯಾವುದೇ ಸೇವಾ ಸಂಸ್ಥೆ ತಾರತಮ್ಯ ಮನೋಭಾವ ಮಾಡಬಾರದು, ಉತ್ತಮ ಪ್ರಶಾಸನ ನೀಡುವ ಸಿಬ್ಬಂದಿ, ಆಡಳಿತ ಮಂಡಳಿ ಇದ್ದಾಗ ಸಹಕಾರಿ ಬ್ಯಾಂಕ್ಗಳು ಜನರ ವಿಶ್ವಾಸ ಗೆಲ್ಲಲು ಸಾಧ್ಯ. ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಕಳೆದ 37 ವರ್ಷಗಳಿಂದ ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎ.ಟಿ.ಎಂ. ಉದ್ಘಾಟಿಸಿದ ರಂಗಕರ್ಮಿ 'ನಟರತ್ನಾಕರ' ಮಾಸ್ಟರ್ ಹಿರಣ್ಣಯ್ಯ ಬ್ಯಾಂಕ್ ಆರಂಭದ ದಿನಗಳನ್ನು ಮೆಲುಕುಹಾಕಿ, ದಿವಂಗತ ವೈ.ವಿ. ಕೇಶವಮೂರ್ತಿ, ಬಡವರ ಬಂಧು ಟಿ.ಆರ್. ಶಾಮಣ್ಣ ಅವರ ಶ್ರಮದಿಂದ ಜನ್ಮತಳೆದ ಬ್ಯಾಂಕ್ ಇಂದು 1500 ಕೋಟಿ ರುಪಾಯಿ ವ್ಯವಹಾರ ನಡೆಸುತಿದ್ದು, ಬೃಹತ್ ಆಲದ ಮರದಂತೆ ಬೆಳೆದಿದೆ. ಬಿಳಿಲುಗಳನ್ನೂ ಬಿಟ್ಟಿದ್ದು ತನ್ನ 11 ಶಾಖೆಗಳಲ್ಲಿ ಒಂದೂವರೆ ಲಕ್ಷ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಇದು ಹೆಮ್ಮೆಯ ವಿಷಯ ಎಂದರು.
ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದವರಿಗೆ ಇನಾಂ ಬೂದಿಹಾಳ್ನಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.
ಬ್ಯಾಂಕ್ನ ಅಧ್ಯಕ್ಷ ಎಚ್.ಆರ್. ಸುರೇಶ್ ಮಾತನಾಡಿ, 1,816 ಪಟ್ಟಣ ಸಹಕಾರಿ ಬ್ಯಾಂಕ್ಗಳ ಸಾಲಿನಲ್ಲಿ ಎನ್.ಸಿ.ಬಿ. ಮೊದಲ 50ರಲ್ಲಿ ಸ್ಥಾನ ಪಡೆದಿದೆ. 280 ಪಟ್ಟಣ ಸಹಕಾರಿ ಬ್ಯಾಂಕ್ಗಳ ಪೈಕಿ ನಮ್ಮ ಬ್ಯಾಂಕ್ ಠೇವಣಿ ಸಂಗ್ರಹಣೆಯಲ್ಲಿ ಅಗ್ರ ಸ್ಥಾನದಲ್ಲಿದೆ ಎಂದರು. ಮುಂದಿನ 5 ವರ್ಷಗಳ ಅವಧಿಯಲ್ಲಿ ಬ್ಯಾಂಕ್ನ ವಹಿವಾಟನ್ನು 7,500 ಕೋಟಿ ರು.ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ನಲ್ಲಿ 1 ಕೋಟಿ ರುಪಾಯಿ ಠೇವಣಿ ಇಟ್ಟ ಹಯಗ್ರೀವಾಚಾರ್ ಅವರನ್ನು ಗೌರವಿಸಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಜಿ.ಎಚ್. ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.