ಮಲೆನಾಡು, ಕರಾವಳಿಯಲ್ಲಿ ಆರಿದ್ರಾ ಮಳೆಯ ಆರ್ಭಟ!
ಬೆಂಗಳೂರು, ಜು.4 : ಕರ್ನಾಟಕದ ದಕ್ಷಿಣ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಮಲೆನಾಡು ಹಾಗೂ ಕರಾವಳಿಯಲ್ಲಿ ಕುಂಭದ್ರೋಣ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ನೆರೆಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಅರ್ಭಟಕ್ಕೆ ಮಲೆನಾಡು ಹಾಗೂ ಕರಾವಳಿಯ ಅನೇಕ ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರುವ ಹಂತಕ್ಕೆ ತಲುಪಿವೆ. ಇದುವರೆಗೂ 9 ಮನೆಗಳು ಕುಸಿದಿದ್ದು, ಸಾವಿರಾರು ಎಕರೆ ಬೆಳೆನಾಶವಾಗಿದೆ.
ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಕೊಡಗಿನ ಭಾಗಮಂಡಲ, ಚಿಕ್ಕಮಗಳೂರಿನ ಶೃಂಗೇರಿ, ಕಳಸ, ಕುದುರೆಮುಖ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಭಾರೀ ಮಳೆಯಿಂದ ತುಂಬಿ ಹರಿಯುತ್ತಿರುವ ತುಂಗಾನದಿ (ಚಿತ್ರ ಕೃಪೆ : ಜಗದೀಶ್ ಶೃಂಗೇರಿ)
ಮಲೆನಾಡಿನಲ್ಲಿ ತೀವ್ರ ಮಳೆಯಾಗುತ್ತಿದ್ದು, ಕಾವೇರಿ, ಹೇಮಾವತಿ, ತುಂಗಾ, ಭದ್ರಾ, ದಂಡಾವತಿ, ವರದಾ, ಕಬಿನಿ ನದಿಗಳು ತುಂಬಿ ಹರಿಯುತ್ತಿವೆ. ಸಾಗರ ತಾಲೂಕಿನ 8 ಹಾಗೂ ಕುಮಟಾ ತಾಲೂಕಿನ 5 ಗ್ರಾಮಗಳ ಜನರಿಗಾಗಿ ಗಂಜಿ ಕೇಂದ್ರ ಆರಂಭಿಸಲಾಗಿದೆ.
ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ಬೆಂಗಳೂರು ಮತ್ತು ಮಂಗಳೂರು ನಡುವಿನ ಸಂಚರ ಸ್ಥಗಿತಗೊಂಡಿದೆ. ಬಸ್, ಲಾರಿ ಮತ್ತು ಇತರ ವಾಹನಗಳು ಉಪ್ಪಿನಂಗಡಿಯಲ್ಲಿ ನಿಂತಿವೆ. ನೀರಕಟ್ಟೆ ಬಳಿ ರಸ್ತೆ ಜಲಾವೃತವಾಗಿದೆ.
ಲಿಂಗನಮಕ್ಕಿಗೆ 4 ಅಡಿ ನೀರು : ವರದಾ, ಶರಾವತಿ ನದಿ ಪಾತ್ರದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ನಾಲ್ಕು ಅಡಿ ನೀರು ಬಂದಿದೆ. ಕಬಿನಿ ಜಲಾಶಯ ಭರ್ತಿಯಾಗಲು 2 ಅಡಿ ಬಾಕಿ ಇದೆ.
ಗಾಜನೂರಿನ ತುಂಗಾ ಡ್ಯಾಂ ನಿಂದ 90 ಸಾವಿರ ಕ್ಯೂ. ನೀರು ಹೊರ ಬಿಡಲಾಗುತ್ತಿದ್ದು, ಇದರಿಂದಾಗಿ ಶಿವಮೊಗ್ಗ ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. (ಚಿತ್ರಗಳಲ್ಲಿ ಜೋಗ ಜಲಪಾತ)
ರಾಜ್ಯದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಕೆಳಕಂಡಂತಿದೆ.
ಜಲಾಶಯ ಇಂದಿನ ಮಟ್ಟ ಗರಿಷ್ಠ ಮಟ್ಟ
ಕೆಆರ್ಎಸ್ 92.35 ಅಡಿ 124.80 ಅಡಿ
ಆಮಲಟ್ಟಿ 513.00 ಮೀ 519.60 ಮೀ
ಕಬಿನಿ 82 ಅಡಿ 84 ಅಡಿ
ಲಿಂಗನಮಕ್ಕಿ 1772 ಅಡಿ 1819 ಅಡಿ
ಹಾರಂಗಿ 2856 ಅಡಿ 2859 ಅಡಿ
ಹೇಮಾವತಿ 2282 ಅಡಿ 2922 ಅಡಿ
ತುಂಗಭದ್ರಾ 1603.91 ಅಡಿ 1633 ಅಡಿ












Click it and Unblock the Notifications