ಗೋವಾ ಜತೆ ಸಂಪರ್ಕ ಕಡಿದುಕೊಂಡ ಕರ್ನಾಟಕ
ಕಾರವಾರ, ಜುಲೈ 3: ಅತ್ತ ಗೋವಾ ಇತ್ತ ಕರ್ನಾಟಕ ಎರಡೂ ಕಡೆ ವಿಪರೀತ ಎನಿಸುವಷ್ಟು ಮಳೆಯಾಗುತ್ತಿದೆ. ಇದರಿಂದ ಅಲ್ಲಲ್ಲಿ ಭೂಸ್ಖಲನಗಳು ಉಂಟಾಗುತ್ತಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದೆ.
ಅದರಲ್ಲೂ ರಾಷ್ಟ್ರೀಯ ಹೆದ್ದಾರಿ -17 ಕ್ಕೆ ಭಾರಿ ಧಕ್ಕೆಯೊದಗಿದೆ. ಮಡಗಾಂವ್ ನಿಂದ ಕಾರವಾರ ವರೆಗಿನ ಈ ರಾಷ್ಟ್ರೀಯ ಹೆದ್ದಾರಿ (National Highway-17) ಮಂಗಳವಾರ ರಾತ್ರಿ 2 ಗಂಟೆಯ ನಂತರ ಬಂದ್ ಆಗಿದೆ.

ಎರಡೂ ರಾಜ್ಯಗಳನ್ನು ಸಂಪರ್ಕ ಕಲ್ಪಿಸುವ ಅನಮೋದ್ ಘಟ್ಟ ಪ್ರದೇಶದಲ್ಲಿ ಬಲಿ ಎಂಬಲ್ಲಿ ಭೂಸ್ಖಲನ ಜಾಸ್ತಿಯಾಗಿದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ -17 ರ ರಸ್ತೆ ಮಾರ್ಗವನ್ನು ಬದಲಿಸಲಾಗಿದೆ.
ಬರೀ ಮಣ್ಣು, ಭಾರಿ ಕಲ್ಲುಬಂಡೆಗಳು ಸುಮಾರು 10 ಅಡಿ ಎತ್ತರದಲ್ಲಿ ರಸ್ತೆಯಲ್ಲಿ ಬಿದ್ದಿವೆ. ಇದರಿಂದ ಜನಸಾಮಾನ್ಯರಿಗೆ ಜರೂರತ್ತಾಗಿರುವ ಈ NH-17 ಬಂದ್ ಆಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಗೋವಾ ಚೆಕ್ ಪೋಸ್ಟಿನಿಂದ 6 ಕಿಮೀ ದೂರದಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ.
ದಕ್ಷಿಣ ಗೋವಾ ಜಿಲ್ಲಾಧಿಕಾರಿ ಎನ್ ಡಿ ಅಗರವಾಲ್ ಅವರು ವಿಪತ್ತು ನಿರ್ವಹಣಾ ತಂಡದ ಜತೆಗೂಡಿ ಸ್ಥಳಕ್ಕೆ ಧಾವಿಸಿದ್ದು, ರಸ್ತೆ ಸಂಚಾರವನ್ನು ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಮಧ್ಯೆ, ಗೋವಾದಲ್ಲಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸೋಮವಾರದಿಂದೀಚೆಗೆ 8 ಅಂಗುಲ ಮಳೆಯಾಗಿದೆ. ಸಣವಾರಕೋಟಾ ಮತ್ತು ಭೀವಸಾ ಭಾಗಗಳು ಹೆಚ್ಚು ಸಂತ್ರಸ್ಥಗೊಂಡಿವೆ. ಬಿಚೋಲಿಂ ಮತ್ತು ವಳವಂತಿ ನದಿಗಳಲ್ಲಿ ನೀರು ಅಪಾಯದ ಮಟ್ಟ ತಲುಪಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದೆ.












Click it and Unblock the Notifications