ಮನೆಯೊಡತಿಯಿಂದ ಕೆಲಸದಾಕೆಯ ಮಗು ಮಾರಾಟ!
ಭಾನುವಾರ ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಭೆಯಲ್ಲಿ ಇಂಥದೊಂದು ಘಟನೆ ನಡೆದಿರುವುದು ಪೊಲೀಸರನ್ನೇ ದಿಗಿಲು ಬೀಳಿಸಿದೆ. ತನ್ನ ಮಗುವನ್ನು ತನಗೆ ಕೊಡಿಸಬೇಕೆಂದು ಕೆಲಸದಾಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಕೊಟ್ಟಾರ ಕ್ರಾಸ್ನಲ್ಲಿ ಗೃಹಿಣಿಯೊಬ್ಬರ ಮನೆಯಲ್ಲಿ ಶ್ವೇತಾ ಎಂಬಾಕೆ ಕೆಲಸಕ್ಕಿದ್ದಳು. ಆಕೆಯ ಮಗು ಶ್ವೇತಾಳಿಗೆ ಕೆಲಸ ಮಾಡುವಾಗ ತೊಂದರೆ ಮಾಡುತ್ತದೆ ಎಂದು ಕೆಲ ದಿನಗಳ ಕಾಲ ಆಶ್ರಮವೊಂದರಲ್ಲಿ ಗೃಹಿಣಿ ಇರಿಸಿದ್ದಳು. ಆದರೆ, ಮಗುವನ್ನು ಭೇಟಿಯಾಗಲು ಬಿಟ್ಟಿರಲಿಲ್ಲ. ಈಗ ಶ್ವೇತಾ ಮಾಡುತ್ತಿರುವ ಆರೋಪವೆಂದರೆ, ಮಗುವನ್ನು ಮಾರಾಟ ಮಾಡಲಾಗಿದ್ದು, ಅದನ್ನು ಸೌದಿ ಅರೇಬಿಯಾಗೆ ಸಾಗಿಸಲಾಗಿದೆ.
ಮಗುವನ್ನು ಆಶ್ರಮದಲ್ಲಿ ಇಟ್ಟ ಮೇಲೆ 5 ವರ್ಷಗಳ ಕಾಲ ಮಗುವನ್ನು ಭೇಟಿ ಮಾಡಲು ಮತ್ತು ನೋಡಲು ಬಿಟ್ಟಿರಲಿಲ್ಲ. ಸುಮಾರು ಏಳು ವರ್ಷಗಳ ಕಾಲ ಗೃಹಿಣಿ ಮನೆಯಲ್ಲಿ ದುಡಿಮೆ ಮಾಡಿದ ನಂತರ ಕೆಲಸ ಬಿಟ್ಟ ಶ್ವೇತಾ ತನ್ನ ಮಗು ಎಲ್ಲಿದೆ ಎಂದು ಕೇಳಿದ್ದಾಳೆ. ಆಗ ಆಘಾತವಾಗುವ ಸರದಿ ಶ್ವಾತಾಳದಾಗಿತ್ತು. ತಾನು ಮಗುವನ್ನು ಮಾರಿ ಸೌದಿ ಅರೇಬಿಯಾಗೆ ಕಳಿಸಿಕೊಟ್ಟಿದ್ದಾಗಿ ಗೃಹಿಣಿ ಹೇಳಿದ್ದಾಳೆ.
ಶ್ವೇತಾಳಿಗೆ ಆಗಿರುವ ಮಾನಸಿಕ ಗಾಯಕ್ಕೆ ಉಪ್ಪು ಸುರಿದಂತೆ, ಕೆಲಸದಾಕೆಯ ಮೇಲೆಯೇ ಗೃಹಿಣಿ ಊರ್ವ ಪೊಲೀಸರಿಗೆ ದೂರು ನೀಡಿದ್ದಾಳೆ. ಕೆಲಸದಾಕೆ ತನ್ನ ಮನೆಯಲ್ಲಿದ್ದ ವಿದೇಶಿ ಮದ್ಯವನ್ನು ಕದ್ದಿದ್ದಾಳೆ ಎಂದು ದೂರಿದ್ದಾಳೆ. ಮಗು ಕಾಣೆಯಾಗಿರುವ ಪ್ರಕರಣದ ದಿಕ್ಕುತಪ್ಪಿಸಲು ಮತ್ತು ತನ್ನನ್ನೇ ತಪ್ಪಿತಸ್ಥಳನ್ನಾಗಿ ಮಾಡಲು ತನ್ನ ಮೇಲೆ ಸಲ್ಲದ ದೂರು ನೀಡಲಾಗಿದೆ ಎಂದು ಶ್ವೇತಾ ಹೇಳಿದ್ದಾಳೆ.
ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಮಗುವನ್ನು ಪತ್ತೆ ಹಚ್ಚಲು ಪೊಲೀಸ್ ವರಿಷ್ಠಾಧಿಕಾರಿ ಆದೇಶ ನೀಡಿದ್ದಾರೆ. ಗೃಹಿಣಿ ಶ್ರೀಮಂತಳಾಗಿರುವುದರಿಂದ ಹಣದ ಆಮಿಷ ಒಡ್ಡಿ ಕೇಸಿನ ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾಳೆ ಎಂದೂ ದೂರಲಾಗಿದೆ.