ಪದ್ಮಶ್ರೀ ಗಿರೀಶ್ ಚಿತ್ತ ವಿಶ್ವ ಚಾಂಪಿಯನ್ ಪಟ್ಟದತ್ತ

"ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ನಂಬಿಕೆ ಇದೆ. ಫ್ರಾನ್ಸ್ ದೇಶದ ವಾತಾವರಣ ಕ್ರೀಡಾ ಕೂಟದ ಸಂದರ್ಭದಲ್ಲಿ ಹೇಗಿರುತ್ತೆ ಎಂಬುದು ಕೂಡ ನನ್ನ ಪಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಆದರೂ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದ ನಾನು ಫ್ರಾನ್ಸ್ ನ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನವಾಗಿ ಪರಿವರ್ತಿಸುತ್ತೇನೆ. ದೇಶದ ಜನತೆ ನನ್ನ ಮೇಲಿಟ್ಟಿರುವ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುತ್ತೇನೆ" ಎಂದು ಆತ್ಮವಿಶ್ವಾಸದಿಂದ ನುಡಿದರು.
ಕಳೆದ ನವೆಂಬರ್ ನಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಪ್ಯಾರಾಲಿಂಪಿಕ್ ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಹೊಸನಗರ ಗಿರೀಶ್ ಅಲ್ಲಿ 1.74 ಮೀಟರ್ ಎತ್ತರ ಜಿಗಿದು ಸಾಧನೆ ಮಾಡಿದ್ದರು. ಸಧ್ಯ ಸಾಯ್ ಕೇಂದ್ರದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲೂ ಅದೇ ಮಟ್ಟವನ್ನು ಕಾಯ್ದುಕೊಂಡಿರುವ ಗಿರೀಶ್, ಈಗಲೂ ವಿಶ್ವ ಹೈಜಂಪ್ ರ್ಯಾಂಕಿಂಗ್ ನಲ್ಲಿ ನಂ.2 ಆಗಿದ್ದಾರೆ.
ವಿಶ್ವ ದಾಖಲೆಯ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಗಿರೀಶ್ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟುವಾಗಿದ್ದು ಅವರ ಹೆಸರನ್ನು ಭಾರತ ಕ್ರೀಡಾ ಪ್ರಾಧಿಕಾರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೂ ಶಿಫಾರಸ್ಸು ಮಾಡಿದೆ. ಕ್ರೀಡಾ ಕ್ಷೇತ್ರದ ಅತ್ಯುನ್ನತ ಸಾಧನೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತದೆ ಬರುವ ಆಗಸ್ಟ್ 15ರ ವೇಳೆಗೆ ಆ ಪ್ರಶಸ್ತಿಗಳು ಪ್ರಕಟವಾಗಲಿವೆ.
ಸರಕಾರಿ ಹುದ್ದೆ ಗಗನ ಕುಸುಮ : ಗಿರೀಶ್ ಪ್ಯಾರಾಲಿಂಪಿಕ್ ಪದಕ ಜಯಿಸುತ್ತಿದ್ದಂತೆಯೇ ಬಹುಮಾನಗಳ ಆಮಿಷ ಮತ್ತು ಸರ್ಕಾರಿ ಹುದ್ದೆ ಗಿರೀಶ್ ಗೆ ಇನ್ನು ಗಗನ ಕುಸುಮವಾಗಿಯೇ ಉಳಿದಿದೆ. ರಾಜ್ಯ ಸರ್ಕಾರ ಘೋಷಿಸಿದ್ದ ಬಹುಮಾನದ ಹಣ ತಲುಪಿದೆಯಾದರೂ ಸೀನಿಯರ್ ಹುದ್ದೆ ನೀಡುವ ಘೋಷಣೆ ಇನ್ನೂ ಘೋಷಣೆ ರೂಪದಲ್ಲಿಯೇ ಇದೆ. ಅದೇ ರೀತಿ ಕೇಂದ್ರ ಸರ್ಕಾರ ಘೋಷಿಸಿದ್ದ ಬಹುಮಾನದ ಹಣ ಪಡೆಯುವ ಯೋಗ ಇನ್ನೂ ಗಿರೀಶ್ ಗೆ ಸಿಕ್ಕಿಲ್ಲ. ಅದೇ ರೀತಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗ ನೀಡುವ ಕೇಂದ್ರ ಸರ್ಕಾರದ ಭರವಸೆ ಅಂದಿನ ಕ್ರೀಡಾ ಸಚಿವ ಅಜಯ್ ಮೇಕನ್ ಬದಲಾಗುತ್ತಿದ್ದಂತೆಯೇ ನೆನೆಗುದಿಗೆ ಬಿದ್ದಿದೆ.
ಆದರೆ ಸದ್ಯಕ್ಕೆ ಇದಾವುದಕ್ಕೂ ತಲೆಬಿಸಿ ಮಾಡಿಕೊಳ್ಳದ ಗಿರೀಶ್ ವಿಶ್ವ ಚಾಂಪಿಯನ್ ಕ್ರೀಡಾಕೂಟದತ್ತ ಗಮನ ಹರಿಸಿದ್ದಾರೆ. ಅಲ್ಲಿಂದ ಹಿಂತಿರುಗಿದ ಬಳಿಕೆ ಈ ಕುರಿತು ಸರ್ಕಾರವನ್ನು ಮನವಿ ಮಾಡಲಾಗುವುದು, ಫ್ರಾನ್ಸ್ ಗೆ ತೆರಳುವ ಮುನ್ನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಗಿರೀಶ್ ಹೇಳುತ್ತಾರೆ.
ಆರ್ಥಿಕವಾಗಿ ಗಿರೀಶ್ ಸೇಫ್ : ಬೆಳ್ಳಿ ಪದಕ ಜಯಿಸಿದ ನಂತರ ಸೆಲೆಬ್ರಿಟಿಯಾಗಿ ಬದಲಾಗಿರುವ ಗಿರೀಶ್ ಒಂದಿಲ್ಲೊಂದು ಸನ್ಮಾನ ಹಾಗೂ ಗೌರವಕ್ಕೆ ಪಾತ್ರವಾಗಿದ್ದು ಹರ್ಬಲ್ ಲೈಫ್ ಪ್ರಾಡಕ್ಟ್ ನ ಅಂತಾರಾಷ್ಟ್ರೀಯ ರಾಯಭಾರಿಯಾಗಿಯೂ ಅವಕಾಶ ಗಳಿಸಿದ್ದಾರೆ. ಅಲ್ಲಿ ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್, ಮೇರಿಕೋಮ್ ಜೊತೆ ರಾಯಭಾರಿ ಜಾಹೀರಾತಿನಲ್ಲಿ ಮಿಂಚುತ್ತಿರುವ ಗಿರೀಶ್ ಈಗ ಸದ್ಯಕ್ಕೆ ಆರ್ಥಿಕವಾಗಿ ಸೇಫ್. ಬೆಂಗಳೂರಿನ ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ ಅವರು ಗಿರೀಶ್ ಗೆ ಹ್ಯುಂಡೈ ಐ20ಕಾರನ್ನು ಕೊಡುಗೆ ನೀಡಿ ಪ್ರೋತ್ಸಾಹಿಸಿದ್ದಾರೆ.
ಈ ನಡುವೆ ಗಿರೀಶ್ ಮತ್ತು ಇತರೆ ಅಥ್ಲೆಟಿಕ್ ದಿಗ್ಗಜರು ಪ್ಯಾರಾಲಿಂಪಿಕ್ ಸ್ಪೋರ್ಟ್ಸ್ ಅಕಾಡೆಮಿ ಆಫ್ ಇಂಡಿಯಾ ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತಿದ್ದು ಅಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಮಹತ್ವದ ಯೋಜನೆ ಹಾಕಿಕೊಂಡಿದ್ದಾರೆ. ಇದರ ನಿರ್ದೇಶಕರಾಗಿರುವ ಗಿರೀಶ್ ವಿಶ್ವ ಚಾಂಪಿಯನ್ ಕ್ರೀಡಾ ಕೂಟದಿಂದ ಹಿಂತಿರುಗಿದ ನಂತರ ಅದು ಅಧಿಕೃತವಾಗಿ ಚಾಲನೆಗೊಳ್ಳಲಿದೆ.
ತವರಿನಲ್ಲಿ ಜೂ. 29ರಂದು ಸನ್ಮಾನ : ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೇಮಾವತಿ ಪುನರ್ವಸತಿ ಗ್ರಾಮದ ಹೊಸನಗರ ಗ್ರಾಮದವರು. ತಂದೆ ತಾಯಿ ಕೃಷಿ ಕಾರ್ಮಿಕರು. ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪಡೆದ ನಂತರ ಮೊದಲ ಬಾರಿಗೆ ತವರು ಅರಕಲಗೂಡು ತಾಲೂಕಿನಲ್ಲಿ ಜೂನ್ 29ರಂದು ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗಿರೀಶ ಆಗಮಿಸುತ್ತಿದ್ದಾರೆ. ಅಂದು ತವರೂರ ಸನ್ಮಾನ ಗಿರೀಶ್ ಗೆ ಮೊದಲ ಬಾರಿಗೆ ದಕ್ಕಲಿದೆ.












Click it and Unblock the Notifications