ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಕನಸು ನನಸು!
ಬೆಂಗಳೂರು, ಜೂ.26: ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೋಟ್ಯಾಂತರ ಜನರಿಗೆ
ಕುಡಿಯುವ ನೀರು ಪೂರೈಸುವ ಎತ್ತಿನ ಹೊಳೆ ಯೋಜನೆಯನ್ನು ಇನ್ನೆರಡು ತಿಂಗಳಲ್ಲಿ ಶಂಕು ಸ್ಥಾಪನೆ ಮಾಡಿ ಕಾರ್ಯ ಆರಂಭ ಮಾಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, "ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆ ಜಾರಿ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. 2 ತಿಂಗಳಲ್ಲಿ ಈ ಕೆಲಸ ಪೂರ್ಣವಾಗಲಿದ್ದು, ತಕ್ಷಣವೇ ಶಂಕು ಸ್ಥಾಪನೆ ಮಾಡಿ ಕೆಲಸ ಆರಂಭಿಸುತ್ತೇವೆ. ನಿಗದಿತ ಅವಧಿಯಲ್ಲಿ ಪೂರ್ಣ ಮಾಡಿ ನಾಲ್ಕು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡುತ್ತೇವೆ" ಎಂದರು.
ನಮ್ಮ ಸರ್ಕಾರ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದು, ಈಗ 78 ಯೋಜನೆಗಳು ಚಾಲ್ತಿಯಲ್ಲಿವೆ. 38 ಯೋಜನೆಗಳು ಬಾಕಿ ಉಳಿದಿದ್ದು, ಈ ಪೈಕಿ 13 ಯೋಜನೆಗಳು ಈ ವರ್ಷ, 17 ಯೋಜನೆಗಳು ಮುಂದಿನ ವರ್ಷ ಪೂರ್ಣವಾಗಲಿದೆ. ಇದಕ್ಕೆ ನಮ್ಮ ಸರ್ಕಾರ ಮುಂದಿನ 5 ವರ್ಷದಲ್ಲಿ 45 ಸಾವಿರ ಕೋಟಿ ರೂ,ಗಳನ್ನು ವೆಚ್ಚ ಮಾಡಿ ಸುಮಾರು 10 ಲಕ್ಷ ಹೆಕ್ಟೇರ್ ಗೆ ನೀರು ಕೊಡುತ್ತೇವೆ ಎಂದರು.
36 ಲಕ್ಷ ಹೆಕ್ಟೇರ್ ಗೆ ನೀರಾವರಿ ಸೌಲಭ್ಯ ಕೊಡುವ ಯೋಜನೆ ಹಾಕಿಕೊಂಡಿದ್ದು, ಈ ಪೈಕಿ ಈಗಾಗಲೇ 27 ಲಕ್ಷ ಹೆಕ್ಟೇರ್ ಗೆ ಈಗಾಗಲೇ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 9.26 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮುಂದಿನ 5 ವರ್ಷ ಅವಧಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿಕೊಡುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಎತ್ತಿನಹೊಳೆ ಯೋಜನೆ: ಸುಮಾರು 9,000 ಕೋಟಿ ಯೋಜನಾ ವೆಚ್ಚದ ಎತ್ತಿನ ಹೊಳೆ ಯೋಜನೆ ಅವಿಭಜಿತ ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಶಾಕಿರಣವಾಗಿದೆ. ಯೋಜನೆಯ ಕೆಲ ಅಂಶಗಳು ಇಂತಿದೆ:
* ದೇವರಾಯನ ದುರ್ಗದಲ್ಲಿ 10 ಟಿಎಂಸಿ ಅಡಿ ಜಲಾಗಾರ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಲಾಗುತ್ತದೆ.
* ತುಮಕೂರು ಜಿಲ್ಲೆ ಕಡೆಯಿಂದ 55.9 ಕಿ.ಮೀ ನೀರು ಸಾಗುತ್ತಾ ಮೇಲ್ಕಂಡ ಎರಡು ಜಿಲ್ಲೆಗಳ 337 ತಾಲೂಕುಗಳಿಗೆ ನೀರುಣಿಸಲಿದೆ.
* ತುಮಕೂರು ಜಿಲ್ಲೆಗೆ 14 ಟಿಎಂಸಿ ಅಡಿ ನೀಡಲು ನಿರ್ಧರಿಸಲಾಗಿದೆ. ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕಿನ ಬರ ಇದರಿಂದ ನೀಗಲಿದೆ.
* ಚಾಮರಾಜಸಾಗರ, ಹೆಸರಘಟ್ಟ ಕೆರೆಗಳಿಗೂ ನೀರು ಒದಗಿಸಲಿದೆ. ಜೊತೆಗೆ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗದ ಕೆಲವು ಪಟ್ಟಣಗಳು, ನಗರಪ್ರದೇಶಕ್ಕೆ ವೇದಾವತಿ ನದಿ ನೀರು ಪೂರೈಕೆ ಮಾಡಲಾಗುತ್ತದೆ.
* ಎತ್ತಿನಹೊಳೆ ಯೋಜನೆಗೆ ರಾಮನಗರ ಜಿಲ್ಲೆಯನ್ನು ಸೇರಿಸುವ ಬಗ್ಗೆ ಬಿಜೆಪಿ ಸರ್ಕಾರವಿದ್ದಾಗ ಮಾತುಕತೆ ನಡೆದಿತ್ತು.
* ಎತ್ತಿನ ಹೊಳೆ ಯೋಜನೆ ಕಾರ್ಯಗತಗೊಳಿಸಲು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು 400 ಕೋಟಿ ರು ಹೆಚ್ಚುವರಿ ಮೊತ್ತವನ್ನು ಜಲನಿಧಿಯಾಗಿ ಇಟ್ಟಿದ್ದರು.
* ಸಕಲೇಶಪುರದಿಂದ ಹರಿದು ಬರಲಿರುವ ಎತ್ತಿನಹೊಳೆ ನೀರಿಗಾಗಿ ಸದಾನಂದ ಗೌಡರ ಸರ್ಕಾರ ಮುಗಿಯುವ ಹೊತ್ತಿಗೆ ಈ ಯೋಜನೆಗೆ 8 ಸಾವಿರದ 123 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿತ್ತು.
* ಈಗ ಕುಮಾರಸ್ವಾಮಿ ಅವರು ನನ್ನ ಕಾಲದಲ್ಲಿ 5 ಸಾವಿರ ಕೋಟಿ ರು ನೀಡಿದ್ದೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು 8 ಸಾವಿರ ಕೋಟಿ ರು ನಾವು ಮುಡಿಪಿಟ್ಟಿದ್ದೇವೆ ಎನ್ನುತ್ತಿದ್ದಾರೆ.
* ನೇತ್ರಾವತಿ ತಿರುವು ಯೋಜನೆಯು ಎತ್ತಿನಹೊಳೆ ಯೋಜನೆಯಾಗಿ ಮಾರ್ಪಟ್ಟು ಹಿಂದಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಅನುಮೋದನೆ ದೊರೆತು ಟೆಂಡರ್ ಹಂತಕ್ಕೆ ಬಂದು ನಿಂತಿತ್ತು. ಈಗ ಎಂಬಿ ಪಾಟೀಲ್ ಯೋಜನೆ ಮುಂದುವರೆಸಲು ಉತ್ಸುಕರಾಗಿದ್ದಾರೆ.
* ರಾಜ್ಯಕ್ಕೆ 41 ನೀರಾವರಿ ಯೊಜನೆಗಳನ್ನು ನೀಡಿ ಯಶಸ್ವಿಯಾಗಿರುವ ತಜ್ಞ ಡಾ: ಪರವಶಿವಯ್ಯ ಅವರ ವರದಿಯಂತೆ ಎತ್ತಿನಹೊಳೆ ಯೋಜನೆಯೊಂದೇ ಕೋಲಾರ ಜಿಲ್ಲೆ ಬರಕ್ಕೆ ಪರಿಹಾರವಾಗಬಲ್ಲುದು.












Click it and Unblock the Notifications