ಬೈಕ್, ಮನೆ ಇದ್ರೂ ಸಿಗುತ್ತೆ ಬಿಪಿಎಲ್ ಕಾರ್ಡ್!

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ರಾಜ್ಯದ ಶೇ 70ರಷ್ಟು ಜನರಿಗೆ ತಲುಪಿಲಸು ಸರ್ಕಾರ ಬದ್ಧವಾಗಿದೆ. ಆದ್ದರಿಂದ ಬಿಪಿಎಲ್ ಕಾರ್ಡ್ ಪಡೆಯುವ ನಿಯಮವನ್ನು ಸಡಿಲಿಸಲಾಗಿದೆ ಎಂದರು.
ಹಿಂದೆ ದ್ವಿ ಚಕ್ರವಾಹನ, ದೂರವಾಣಿ ಸಂಪರ್ಕ ಮತ್ತು ಆರ್ ಸಿಸಿ ಮನೆಗಳನ್ನು ಹೊಂದಿರುವ ಜನರಿಗೆ ಬಿಪಿಎಲ್ ಕಾರ್ಡ್ ನೀಡುತ್ತಿರಲಿಲ್ಲ. ಸರ್ಕಾರ ಈ ನಿಯಮವನ್ನು ಸಡಿಲಗೊಳಿಸಿದ್ದು, ಇವರುಗಳು ಇನ್ನುಮುಂದೆ ಬಿಪಿಎಲ್ ಕಾರ್ಡ್ ಪಡೆಯಬಹುದು ಎಂದು ತಿಳಿಸಿದರು.
ಯಾರಿಗೆ ಕಾರ್ಡ್ ಇಲ್ಲ : ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು ಮತ್ತು ಕಾರು ಹೊಂದಿರುವ ಜನರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ. ಎಪಿಎಲ್ ಕಾರ್ಡ್ ಹೊಂದಿರುವ ಜನರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಆನ್ ಲೈನ್ ವ್ಯವಸ್ಥೆ : ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅನಗತ್ಯ ದಾಖಲೆಗಳನ್ನು ಕೇಳಿ ಜನರಿಗೆ ತೊಂದರೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ಮಾಹಿತಿ ನೀಡಿದರು.
ಮೂರು ಕೋಟಿ ಗುರಿ : ರಾಜ್ಯದಲ್ಲಿ ಒಟ್ಟು 1 ಕೋಟಿ ಜನರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಸರ್ಕಾರ ರಾಜ್ಯದ ಮೂರು ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ನೀಡುವ ಗುರಿ ಹೊಂದಿದೆ. ಆದ್ದರಿಂದ ಬಿಪಿಎಲ್ ಕಾರ್ಡ್ ಪಡೆಯುವ ನಿಯಮವನ್ನು ಸಡಿಲಿಸಲಾಗಿದೆ ಎಂದು ಹೇಳಿದರು.
ಜುಲೈ 10ರಿಂದ ಅಕ್ಕಿ : ಸರ್ಕಾರದ ಮಹತ್ವಾಕಾಂಕ್ಷೆಯ 1ರೂ.ಗೆ 1 ಕೆ.ಜಿ.ಅಕ್ಕಿ ನೀಡುವ ಯೋಜನೆ ಜುಲೈ 10ರಂದು ಪ್ರಾರಂಭವಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಂ ಸಿದ್ಧರಾಮಯ್ಯ ಜುಲೈ 10ರಂದು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, 1 ರೂ.ಗೆ ಅಕ್ಕಿ ಯೋಜನೆ ಜಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.












Click it and Unblock the Notifications