ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸಿದ ಗಂಡು
ಜೈಪುರ, ಜೂ.24: ಬಹುಪತ್ನಿತ್ವದ ಬಗ್ಗೆ ಕೇಳಿರುತ್ತಿರಾ ಅದರೆ, ಅಲ್ಲಿ ಒಂದೇ ಮುಹೂರ್ತದಲ್ಲಿ ತಾಳಿ ಕಟ್ಟುವುದು ಅಥವಾ ನಿಖಾ ಮಾಡಿಕೊಳ್ಳುವುದಿಲ್ಲ. ಆದರೆ, ಇಲ್ಲೊಬ್ಬ ವರ ಮಹಾಶಯ ಒಂದೇ ಮಂಟಪದಲ್ಲಿ ಇಬ್ಬರು ವಧುಗಳಿಗೆ ತಾಳಿ ಕಟ್ಟಿ ಮದುವೆಯಾದ ಘಟನೆ ಉದಯಪುರ ಜಿಲ್ಲೆಯಲ್ಲಿ ನಡೆದಿದೆ.
ಭಗವತಿ ಲಾಲ್ ಎಂಬ 23 ವರ್ಷದ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕ ಇಬ್ಬರು ವಧುಗಳನ್ನು ಚತರ್ಪುರ ಗ್ರಾಮದಲ್ಲಿ ಮದುವೆಯಾಗಿದ್ದಾರೆ ಎಂದು ಝಾದೊಲ್ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಉದಯಪುರ ಜಿಲ್ಲೆಯ ಕಾರ್ಖಾನೆಯಲ್ಲಿ ಭಗವತಿ ಲಾ ಉದ್ಯೋಗಿಯಾಗಿದ್ದಾನೆ. ಆತ ಮದುವೆಯಾದ ಇಬ್ಬರು ವಧುಗಳ ಹೆಸರು ಒಂದೇ ಆಗಿದೆ. ರೇಖಾ ಎಂಬ ವಧುಗಳನ್ನು ಭಗವತಿ ಲಾಲ್ ಅವರು ಪೋಷಕರ ಅನುಮತಿ ಪಡೆದು ಮದುವೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷವೆಂದರೆ ಒಬ್ಬ ರೇಖಾ ಹಾಗೂ ಭಗವತಿ ಇಬ್ಬರು ಕೆಲಕಾಲ ಲಿವ್ ಇನ್ ಸಂಬಂಧದಲ್ಲಿದ್ದರಂತೆ. ಅದರೆ, ಇತ್ತೀಚೆಗೆ ನಾದಿ ಗ್ರಾಮದ ಇನ್ನೊಬ್ಬ ರೇಖಾ ಜೊತೆ ಭಗವತಿಗೆ ಪ್ರೇಮಾಂಕುರವಾಗಿದೆ ಎಂದು ಚತರ್ಪುರ ಗ್ರಾಮಸ್ಥರು ಕತೆ ಹೇಳುತ್ತಾರೆ.
ಪೊಲೀಸರಿಗೆ ಮದುವೆ ಬಗ್ಗೆ ಯಾರೂ ದೂರು ನೀಡಿಲ್ಲ. ಆದರೂ ಮದುವೆಯಾದ ಇಬ್ಬರು ರೇಖಾಗಳು ಪ್ರಾಪ್ತ ವಯಸ್ಕರೇ ಎಂದು ವಿಚಾರಣೆ ನಡೆಸುತ್ತಿದ್ದಾರೆ. ಬುಡಕಟ್ಟು ಸಂಪ್ರದಾಯವಾದ 'ನಾತ ಪ್ರಥಾ' (ಒಬ್ಬರಿಗಿಂತ ಹೆಚ್ಚು ಮಹಿಳೆಯ ಜೊತೆ ಸಂಬಂಧ ಹೊಂದಿರುವುದು) ಒಬ್ಬ ಕಾನ್ಸ್ ಟೇಬಲ್ ನನ್ನು ಗ್ರಾಮಕ್ಕೆ ಕಳಿಸಿ ಮದುವೆ ಕತೆ ಬಗ್ಗೆ ತಿಳಿದುಕೊಂಡು ಬರುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಬುಡಕಟ್ಟು ಜನಾಂಗಗಳಲ್ಲಿ ಈ ರೀತಿ ಮದುವೆ ನಡೆಯುವುದು ಸಾಮಾನ್ಯ ಆದರೆ, ಅಪ್ರಾಪ್ತ ವಯಸ್ಕಳೊಂದಿಗೆ ಮದುವೆಯಾಗಿದ್ದಾರೆ ಅದು ಅಪರಾಧವಾಗುತ್ತದೆ. ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಮದುವೆ ಬಗ್ಗೆ ಪ್ರತಿಕ್ರಿಯಿಸಿರುವ ಉದಯಪುರ ಜಿಲ್ಲಾಧಿಕಾರಿ ವಿಕಾಸ್ ಸೀತಾರಮ್ ಭಾಳೆ ಅವರು, 'ಹಿಂದೂ ಮದುವೆ ಕಾಯಿದೆ ಪ್ರಕಾರ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಬ್ಬ ಪತ್ನಿಯನ್ನು ಮಾತ್ರ ಹೊಂದಬಹುದಾಗಿದೆ. ಪತ್ನಿ ಮೃತಳಾದರೆ ಅಥವಾ ವಿಚ್ಛೇದನ ನೀಡಿದರೆ ಮಾತ್ರ ಇನ್ನೊಂದು ಮದುವೆಯಾಗಲು ಸಾಧ್ಯವಿದೆ. ಆದರೆ, ಈ ಪ್ರಕರಣದಲ್ಲಿ ಬುಡಕಟ್ಟು ಜನಾಂಗದ ಯುವಕನ ಮದುವೆಯಾಗಿರುವುದರಿಂದ ಹಿಂದೂ ಮದುವೆ ಕಾಯಿದೆ ಇಲ್ಲಿ ಅನ್ವಯವಾಗುವುದಿಲ್ಲ. ಇಬ್ಬರನ್ನು ಮದುವೆಯಾಗುವುದು ಅವರ ಸಂಪ್ರದಾಯವಾಗಿದೆ. ಆದರೂ, ತಪ್ಪು ಕಂಡು ಬಂದಲ್ಲಿ ಸಮಾಜದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು' ಎಂದಿದ್ದಾರೆ.












Click it and Unblock the Notifications