ಹಿಟ್ ಅಂಡ್ ರನ್, ಹೋಟೆಲ್ ಮಾಲೀಕ ಬಲಿ
ದೇವರ ಚಿಕ್ಕನಹಳ್ಳಿ ಸಮೀಪ ಹೋಟೆಲ್ ನಡೆಸುತ್ತಿದ್ದ ಹೇಮರೆಡ್ಡಿ (44) ಮೃತ ವ್ಯಕ್ತಿ. ಭಾನುವಾರ ಬೆಳಗ್ಗೆ 4.30ರ ಸುಮಾರಿಗೆ ಹೋಟೆಲ್ ಗೆ ತರಕಾರಿ ತರಲು ಹೇಮರೆಡ್ಡಿ ತೆರಳುತ್ತಿದ್ದರು. ಹೊಸೂರು ರಸ್ತೆಯ ಬೊಮ್ಮನಹಳ್ಳಿ ಜಂಕ್ಷನ್ ಬಳಿ ಕಾರು ಅವರಿಗೆ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನೊಂದಿಗೆ ಚಾಲಕ ಪರಾರಿಯಾಗಿದ್ದು, ಮಡಿವಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರಿನ ಪತ್ತೆಯಲ್ಲಿ ತೊಡಗಿದ್ದಾರೆ.
ಬಿಎಂಟಿಸಿಗೆ ಯುವಕ ಬಲಿ : ಹುಳಿಮಾವು ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಳಿಮಾವು ಗೊಟ್ಟಿಗೆರೆ ಸಮೀಪ ಭಾನುವಾರ ಸಂಜೆ ಬೈಕ್ ನಲ್ಲಿ ಅನಿಲ್ ಕುಮಾರ್ ತೆರಳುತ್ತಿದ್ದರು. ಹಿಂದಿನಿಂದ ಬಂದ ಬಸ್ ಅನಿಲ್ ಕುಮಾರ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಪೆ ಗೂಡ್ಸ್ ಆಟೋ ಕಂಪನಿಯಲ್ಲಿ ಅನಿಲ್ ಕುಮಾರ್ ಕೆಲಸ ಮಾಡುತ್ತಿದ್ದರು. ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪರಿಚಿತ ವಾಹನಕ್ಕೆ ಕಾರ್ಮಿಕ ಬಲಿ : ಹುಳಿಮಾವು ನಿವಾಸಿ ನಿತೀಶ್ (30) ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಹುಳಿಮಾವು ಬಳಿ ನಡೆದು ಹೋಗುತ್ತಿದ್ದ ಇವರಿಗೆ ವಾಹನ ಡಿಕ್ಕಿ ಹೊಡೆದಿದೆ.
ತಲೆಗೆ ತೀವ್ರ ಪೆಟ್ಟುಬಿದ್ದು, ನಿತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದ ಸಮೇತ ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಟೆಂಪೋ ಟ್ರಾವೆಲರ್ ಅಥವ ಮಿನಿ ಲಾರಿ ಡಿಕ್ಕಿ ಹೊಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.