ಜಯನಗರದ ಮಾದರಿ ಫುಟ್ ಪಾತ್ ನೋಡಿದ್ರಾ?
ಬೆಂಗಳೂರು, ಜೂ.22: ಉದ್ಯಾನ ನಗರಿ ಬೆಂಗಳೂರಿನಲ್ಲಿ ಫುಟ್ ಪಾತ್ ಮೇಲೆ ನೆಡೆದಾಡುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ. ಫುಟ್ ಪಾತ್ ಮೇಲೆ ವಾಹನಗಳನ್ನು ನಿಲ್ಲಿಸಿರುತ್ತಾರೆ. ಇಲ್ಲವೇ ಆ ಜಾಗ ಒತ್ತುವರಿ ಆಗಿರುತ್ತದೆ. ಆದರೆ, ಜಯನಗರದಲ್ಲಿ ಒಂದು ಮಾದರಿ ಪುಟ್ ಪಾತ್ ನಿರ್ಮಾಣವಾಗಿದೆ.
ನೀವು ಜಯನಗರದ ಮೂರನೇ ಬ್ಲಾಕಿನ ಆನೆಬಂಡೆ ರಸ್ತೆಗೆ ಬಂದರೆ ಮಾದರಿ ಪುಟ್ ಪಾತ್ ನೋಡಬಹುದು. ಪುಟ್ ಪಾತ್ ಜನರಿಗೆ ನೆಡೆಯಲು ಜಾಗ ಕೊಡುವ ಜೊತೆಗೆ ಮಳೆ ನೀರನ್ನು ತನ್ನ ಒಡಲಲ್ಲಿ ಹಿಡಿದಿಟ್ಟುಕೊಂಡು, ಪರಿಸರವನ್ನು ಸಹ ಕಾಪಾಡುತ್ತದೆ.
ಫುಟ್ ಪಾತ್ ವಿಶೇಷತೆ : ಯಡಿಯೂರು ವಾರ್ಡ್ ನ ಆನೆಬಂಡೆ ರಸ್ತೆಯ ಈ ಪುಟ್ ಪಾತ್ ಸುಮಾರು ಮುಕ್ಕಾಲು ಕಿ.ಮೀ ಉದ್ದವಾಗಿದೆ. ಐದು ಅಡಿ ಅಗಲ ನಿರ್ಮಿಸಬೇಕಾಗಿದ್ದ ಪುಟ್ ಪಾತ್ ಅನ್ನು ಕೇವಲ ಮೂರು ಅಡಿಗೆ ಸೀಮಿತಗೊಳಿಸಿ, ಎರಡು ಅಡಿ ಜಾಗದಲ್ಲಿ ಮಳೆ ನೀರು ಇಂಗಲು ವ್ಯವಸ್ಥೆ ಮಾಡಲಾಗಿದೆ.
ನೀರು ಇಂಗಲು ವ್ಯವಸ್ಥೆ ಮಾಡಿರುವ ಜಾದಲ್ಲಿ ರೋಗಮುಕ್ತ ಸಸಿಗಳನ್ನು ನೆಡಲಾಗಿದೆ. ಮೂವತ್ತು ಅಡಿಗೊಂದರಂತೆ ಇಂಗುಗುಂಡಿಗಳು ನಿರ್ಮಾಣಗೊಂಡಿವೆ. ಇಲ್ಲಿ ನೆಟ್ಟಿರುವ ಗಿಡಗಳಿಗೆ ಇಂಗು ಗುಂಡಿಯ ನೀರು ಸಾಕಾಗುತ್ತದೆ. ಹೇಗಿದೆ ಈ ಪುಟ್ ಪಾತ್ ವಿಶೇಷತೆ.
ವೆಚ್ಚವೂ ಕಡಿಮೆ : ಯಡಿಯೂರು ವಾರ್ಡ್ ನ ಬಿಬಿಎಂಪಿ ಸದಸ್ಯರಾದ ಎನ್.ಆರ್.ರಮೇಶ್ ಹೊಸ ರೀತಿಯ ಆವಿಷ್ಕಾರ ಎಂಬಂತೆ ಇಂತಹ ಪುಟ್ ಪಾತ್ ನಿರ್ಮಿಸಲು ಸಲಹೆ ನೀಡಿದ್ದಾರೆ. ಶುಕ್ರವಾರ ಪುಟ್ ಪಾತ್ ಅನ್ನು ಸಂಸದ ಅನಂತ್ ಕುಮಾರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಉದ್ಘಾಟಿಸಿದ್ದಾರೆ.
ಪರಿಸರ ಸ್ನೇಹಿ ಮಾದರಿ ಪುಟ್ ಪಾತ್ ನಿರ್ಮಿಸಿ 23 ಲಕ್ಷ ಹಣವನ್ನು ಬಿಬಿಎಂಪಿಗೆ ಉಳಿಸಲಾಗಿದೆ. ಇಂತಹ ಪುಟ್ ಪಾತ್ ನಗರದ ವಿವಿಧ ಪ್ರದೇಶಗಳಲ್ಲೂ ನಿರ್ಮಾಣವಾದರೆ, ಬೆಂಗಳೂರಿನ ಅಂರ್ಜಲ ಮಟ್ಟ ಹೆಚ್ಚಾಗುತ್ತದೆ. ಮಳೆ ಬಂದಾಗ ನೀರು ಇಂಗುತ್ತದೆ.
ನೀವು ಮಾದರಿ ಪುಟ್ ಪಾತ್ ಮೇಲೆ ಹೆಜ್ಜೆ ಇಡಬೇಕೆಂದರೆ, ಜಯನಗರದ ಮೂರನೇ ಬ್ಲಾಕ್ ಆನೆಬಂಡೆ ರಸ್ತೆಗೆ ಒಮ್ಮೆ ಬಂದು ಹೋಗಿ. ಪರಿಸರ ಮತ್ತು ನೀರನ್ನು ಕಾಪಾಡಲು ಕೈಲಾದಷ್ಟು ಪ್ರಯತ್ನ ಮಾಡಿ.