ಮತ್ತೆ ಯಡಿಯೂರಪ್ಪ ಜಪ ಮಾಡಿದ ಬಿಜೆಪಿ ನಾಯಕರು
ಬೆಂಗಳೂರು, ಜೂ.21: ವಿಧಾನಸಭೆ ಚುನಾವಣೆಯ ಸೋಲಿನ ನಂತರ ಬಿಜೆಪಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆತರುವ ಯತ್ನಕ್ಕೆ ಕೈ ಹಾಕಿದೆ. ಪಕ್ಷದ ಹಿರಿಯ ನಾಯಕರೇ ಈ ಪ್ರಯತ್ನಕ್ಕೆ ಪ್ರಾರಂಭಿಸಿದ್ದು, ತೀವ್ರ ಕೂತೂಹಲ ಕೆರೆಳಿಸಿದೆ.
ಸಂಸದ ಚಂದ್ರೇಗೌಡ ಅವರ ನಿವಾಸದಲ್ಲಿ ಗುರುವಾರ ರಾತ್ರಿ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಯಡಿಯೂರಪ್ಪ ಕರೆತರುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ಸಭೆಯಲ್ಲಿ ಭಾಗವಹಿಸಿದ್ದು, ಅಚ್ಚರಿ ಮೂಡಿಸಿದೆ.
ಚಂದ್ರೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮುಂತಾದವರು ಭಾಗವಹಿಸಿದ್ದರು. ಸಭೆಯ ವಿವರಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ನೀಡಲು ನಿರ್ಧರಿಸಲಾಗಿದೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಜಿಲ್ಲಾಧ್ಯಕ್ಷರ ಸಭೆಯಲ್ಲೂ ಯಡಿಯೂರಪ್ಪ ಬಗ್ಗೆ ಚರ್ಚೆ ನಡೆದಿದೆ. ಲೋಕಸಭೆ ಚುನಾವಣೆ ದೃಷ್ಠಿಯಿಂದ, ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದರೆ ಲಾಭವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಜೋಷಿ ಹೆಗಲಿಗೆ ಜವಾಬ್ದಾರಿ
ಚಂದ್ರೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಕರೆತರುವ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ, ಈ ಕುರಿತು ಚರ್ಚಿಸಲು ಜೋಶಿ ಸಾರಥ್ಯ ವಹಿಸಬೇಕು ಎಂದು ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸದಾನಂದ ಗೌಡರ ಮೌನ
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಅವರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಮೌನವಾಗಿದ್ದರು. ಸದಾನಂದಗೌಡರಂತಹ ಹಿರಿಯ ನಾಯಕರು ಯಡಿಯೂರಪ್ಪ ಮರಳಿ ಬರಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಚಂದ್ರೇಗೌಡರ ನಿವಾಸದಲ್ಲಿ ಸಭೆ
ಮಾಜಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಸಂಸದ ಡಿ.ಬಿ.ಚಂದ್ರೇಗೌಡರ ನಿವಾಸದಲ್ಲಿ ನಾಯಕರ ಸಭೆ ಆಯೋಜಿಸಿದ್ದರು. ಲೋಕಸಭೆ ಚುನಾವಣೆ ದೃಷ್ಠಿಯಿಂದ ಯಡಿಯೂರಪ್ಪ ಪಕ್ಷಕ್ಕೆ ಮರಳಬೇಕು ಎಂದು ಚಂದ್ರೇಗೌಡರು ಅಭಿಪ್ರಾಯಪಡುತ್ತಿದ್ದಾರೆ.

ಜೋಶಿ, ಅನಂತ್ ಸೋಲು ಖಚಿತ
ಲೋಕಸಭೆ ಚುಣಾವಣೆ ವೇಳಗೆ ಯಡಿಯೂರಪ್ಪ ಅವರನ್ನು ಕರೆತರದಿದ್ದರೆ, ಪ್ರಹ್ಲಾದ್ ಜೋಶಿ ಮತ್ತು ಅನಂತ್ ಕುಮಾರ್ ಸೋಲುವ ಸಾಧ್ಯತೆ ಇದೆ. ಪಕ್ಷಕ್ಕೆ ಬಲ ಬರಬೇಕಾದರೆ, ಯಡಿಯೂರಪ್ಪ ಮರಳಲೇ ಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಬಿಎಸ್ವೈ ಪರ ಬೊಮ್ಮಾಯಿ ಬ್ಯಾಟಿಂಗ್
ಮಾಜಿ ಜಲಸಂಪನ್ಮೂಲ ಸಚಿವ ಮತ್ತು ಯಡಿಯೂರಪ್ಪ ಪರಮಾಪ್ತರಾಗಿದ್ದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮರಳಿ ಕರೆತರುವ ಬಗ್ಗೆ ಪಕ್ಷದ ನಾಯಕರು ಶೀಘ್ರವೇ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಪಕ್ಷದ ನಾಯಕರಿಗೆ ನೇರಾಗಿ ಬೊಮ್ಮಾಯಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ರಾಷ್ಟ್ರೀಯ ನಾಯಕರ ಹೆಗಲಿಗೆ
ಯಡಿಯೂರಪ್ಪ ಮರಳಿ ಕರೆತರುವ ವಿಚಾರವನ್ನು ರಾಷ್ಟ್ರೀಯ ನಾಯಕರ ಹೆಗಲಿಗೆ ವಹಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ರಾಜ್ಯ ನಾಯಕರು ಈ ಕುರಿತು ಹೇಳಿಕೆ ನೀಡಿದರೆ, ಶಿಸ್ತು ಕ್ರಮ ಜರುಗಿಸುವುದಾಗಿ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications