ಕೆಜೆಪಿ ಜೊತೆ ಮೈತ್ರಿಗೆ ಅನಂತ್ ಕುಮಾರ್ ಅಸ್ತು?

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತ್ ಕುಮಾರ್, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದು ಬಿಜೆಪಿ ಪಕ್ಷದ ಗುರಿ. ಅದಕ್ಕಾಗಿ ಯಾವುದೇ ಪಕ್ಷದೊಂದಿಗೆ ಕೈ ಜೋಡಿಸಲು ನಾವು ಸಿದ್ಧ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಹಗರಣ, ಜನವಿರೋಧಿ ನೀತಿ ಆಡಳಿತ ನಡೆಸುವ ಪಕ್ಷವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ಆದ್ದರಿಂದ ಬಿಜೆಪಿಗೆ ಹೆಚ್ಚಿನ ಸ್ಥಾನಗಳ ಅವಶ್ಯಕತೆ ಇದೆ.(ಕೆಜೆಪಿ ಜೊತೆ ಮೈತ್ರಿಗೆ ಬಿಜೆಪಿಯಲ್ಲೇ ವಿರೋಧ)
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 24 ಸ್ಥಾನಗಳಿಸಬೇಕು. ಅದಕ್ಕಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಅದಕ್ಕಾಗಿ ಕೆಲಸ ಮಾಡಬೇಕು. ಪಕ್ಷದ ಶಕ್ತಿ ಹೆಚ್ಚಿಸಲು ಇತರ ಪಕ್ಷದೊಂದಿಗೆ, ಹೊಂದಾಣಿಕೆ ಮಾಡಿಕೊಂಡರೂ ತಪ್ಪಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಹೆಸರು ಮತ್ತು ಕೆಜೆಪಿ ಪಕ್ಷದ ಹೆಸರು ಹೇಳದೆ, ಅನಂತ್ ಕುಮಾರ್ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಪರೋಕ್ಷವಾಗಿ ತಿಳಿಸಿದರು. ರಾಜಕೀಯ ಕಡುವೈರಿಯ ಜೊತೆ ಕೈ ಜೋಡಿಸಲು ಅನಂತ್ ಕುಮಾರ್ ಒಪ್ಪುತ್ತಾರೆಯೇ? ಎಂಬ ಪ್ರಶ್ನೆಗೆ ಇದರಿಂದ ಉತ್ತರ ಸಿಕ್ಕಿದೆ.
ಸಭೆ ನಡೆಸಿದ್ದು ಹೌದು : ಗುರುವಾರ ರಾತ್ರಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದು, ಹೌದು ಎಂದು ಸಂಸದ ಡಿ.ಬಿ.ಚಂದ್ರೇಗೌಡ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆತರಬೇಕು. ಅವರು ಬಿಜೆಪಿಗೆ ಮರಳಿದರೆ, ಮುಂಬುರುವ ಲೋಕಸಭೆ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ಮೈತ್ರಿಯಿಂದ ಬಿಜೆಪಿಗೆ ಶಕ್ತಿ ಬರಲಿದೆ ಎಂದು ತಿಳಿಸಿದರು. (ಯಡಿಯೂರಪ್ಪ ಮಂತ್ರ ಜಪಿಸಿದ ಬಿಜೆಪಿ ಶಾಸಕರು)
ಮೈತ್ರಿ ಇಲ್ಲವೇ ಇಲ್ಲ : ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಇವೆಲ್ಲ, ಕೇವಲ ಉಹಾಪೋಹ ಎಂದು ಹೇಳಿದರು.












Click it and Unblock the Notifications