ಆರೋಗ್ಯ ಸರಿ ಇಲ್ಲವೇ 104ಕ್ಕೆ ಕರೆ ಮಾಡಿ!

ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಗ್ಯವಾಣಿ ಯೋಜನೆಗೆ ಚಾಲನೆ ನೀಡಿದರು. ರಾಜ್ಯದ ಯಾವುದೇ ಮೂಲೆಯಿಂದಲಾದರೂ 104 ಸಂಖ್ಯೆಗೆ ಶುಲ್ಕ ರಹಿತ ಕರೆ ಮಾಡಬಹುದಾಗಿದೆ.
ಆರೋಗ್ಯವಾಣಿಗೆ ಕರೆ ಮಾಡುವ ಸಾರ್ವಜನಿಕರು, ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯರಿಗೆ ಮಾಹಿತಿ ನೀಡಿ, ಸಲಹೆ ಪಡೆದು ಔಷಧೋಪಚಾರ ಪಡೆಯಬಹುದಾಗಿದೆ. 108 ಸೇವೆಗಿಂತ ಇದು ಭಿನ್ನವಾಗಿದ್ದು, ಮನೆಯಲ್ಲೇ ನಿಮಗೆ ಆರೋಗ್ಯದ ಬಗ್ಗೆ ಸಲಹೆಗಳು ದೊರೆಯಲಿವೆ.
ಆರೋಗ್ಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಯು.ಟಿ.ಖಾದರ್, 104 ಆರೋಗ್ಯವಾಣಿ ಕೇಂದ್ರಕ್ಕೆ ಕರೆ ಮಾಡಿದ ಸಾರ್ವಜನಿಕರು ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಹಾಗೂ ಔಷಧೋಪಚಾರ ಸಲಹೆ ಪಡೆಯಬಹುದಾಗಿದೆ.
ಆರೋಗ್ಯವಾಣಿ ಕೇಂದ್ರದಲ್ಲಿ ಜಿಲ್ಲಾವಾರು ರೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಇದರಿಂದಾಗಿ ಯಾವುದೇ ಜಿಲ್ಲೆಯಲ್ಲಿ ಸಾಂಕ್ರಮಿಕ ರೋಗಗಳು ಹರಡಿದರೆ, ತಕ್ಷಣ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದರು.
ದೂರು ಸಲ್ಲಿಸಬಹುದು : ಆರೋಗ್ಯವಾಣಿ ಕೇಂದ್ರಕ್ಕೆ ರಾಜ್ಯದ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾಮಟ್ಟದ ಆಸ್ಪತ್ರೆಗಳ ಸಮಸ್ಯೆ, ಸಕಾಲಕ್ಕೆ ಸೇವೆ ದೊರೆಯದಿರುವುದು, ಚಿಕಿತ್ಸೆಗೆ ಹಣ ಕೇಳುವುದು ಮುಂತಾದ ದೂರುಗಳನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ.
ಆರೋಗ್ಯವಾಣಿಗೆ ಕರೆ ಮಾಡಿದ ಸಾರ್ವಜಿಕರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ, ಮೊದಲು ಸಮೀಪದ ಸರ್ಕಾರಿ ಆಸ್ಪತ್ರೆ ವಿಳಾಸವನ್ನು ತಿಳಿಸಲಾಗುತ್ತದೆ. ಇದರಿಂದ ಸಾರ್ವಜನಿಕರು ಆಸ್ಪತ್ರೆಗಾಗಿ ಹುಡುಕಾಟ ನಡೆಸುವುದು ತಪ್ಪುತ್ತದೆ.
ಎಷ್ಟು ಸಿಬ್ಬಂದಿ : ಆರೋಗ್ಯವಾಣಿಯಲ್ಲಿ ಪ್ರಸ್ತುತ 100 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಇದನ್ನು 300 ಕ್ಕೆ ಹೆಚ್ಚಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಪ್ರತಿ ದಿನ 1,300 ಕರೆಗಳು ಬರುವ ನಿರೀಕ್ಷೆ ಇದೆ.
ಕೇಂದ್ರದಲ್ಲಿ ಪ್ರತಿ ದಿನ 10 ಸಾವಿರ ಕರೆ ಸ್ವೀಕರಿಸುವ ತಾಂತ್ರಿಕ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ಮೂಲಕ ಕರೆ ಮಾಡಿದವರಿಗೆ, ಅಗತ್ಯವೆನಿಸಿದರೆ, ನಿಗದಿಪಡಿಸಿದ ಔಷಧಿಗಳನ್ನು ಎಸ್ಎಂಸ್ ಮೂಲಕ ರವಾನಿಸಲು ಸಹ ವ್ಯವಸ್ಥೆ ಮಾಡಲಾಗಿದೆ.
ಜಂಟಿ ಸಹಯೋಹ : ಕರ್ನಾಟಕ ಸರ್ಕಾರ ಮತ್ತು ಹಾಗೂ ಹೈದರಾಬಾದ್ ಮೂಲದ ಎಚ್ಎಂಆರ್ಐ ಸಂಸ್ಥೆ ಜಂಟಿ ಸಹಯೋಗದೊಂದಿಗೆ 104 ಆರೋಗ್ಯವಾಣಿ ಸೇವೆ ಕಾರ್ಯನಿರ್ವಹಿಸಲಿದೆ. ಕೇಂದ್ರ ವರ್ಷದ 365 ದಿನ 24/7 ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ.












Click it and Unblock the Notifications