ಕಬಿನಿ ಡ್ಯಾಂ ತುಂಬಲು 20 ಅಡಿ ನೀರು ಬೇಕು

ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಒಂದೇ ವಾರದಲ್ಲಿ 20 ಅಡಿಗಳಷ್ಟು ನೀರು ಸಂಗ್ರಹಣೆಯಾಗಿದೆ. ಮಂಗಳವಾರ ಜಲಾಶಯದ ನೀರಿನ ಮಟ್ಟ 65 ಅಡಿಗಳಿಗೆ ಏರಿದೆ. ಜಲಾಶಯದ ಗರಿಷ್ಠ ಮಟ್ಟ 84 ಅಡಿ.
ಕೇರಳ ವಯನಾಡಿನಲ್ಲಿ ಮುಂಗಾರು ಮಳೆ ಉತ್ತಮ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. 18,858 ಕ್ಯುಸೆಕ್ ಒಳಹರಿವಿನ ಪ್ರಮಾಣ ಮಂಗಳವಾರ ದಾಖಲಾಗಿದೆ. ಹೊರಹರಿವು ಕೇವಲ 100 ಕ್ಯುಸೆಕ್ ಆಗಿದೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಹರಿಸಿದ್ದರಿಂದ 20 ದಿನಗಳ ಹಿಂದೆ ಜಲಾಶಯದ ನೀರಿನ ಮಟ್ಟ ಇತಿಹಾಸದಲ್ಲೇ ದಾಖಲೆ ಎಂಬಂತೆ 45 ಅಡಿಗಳಷ್ಟು ಕುಸಿದಿತ್ತು. ಇದರಿಂದ ಈ ಭಾಗದ ರೈತರು ಬೆಳೆ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದರು.
ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಒದಗಿಸುವಲ್ಲಿ ಕಬಿನಿ ಜಲಾಶಯದ ಪಾತ್ರವೂ ಪ್ರಮುಖವಾದದ್ದು. ಆದ್ದರಿಂದ, ಜಲಾಶಯ ಭರ್ತಿಯಾಗುತ್ತಿರುವುದು ಜನರಿಗೆ ಸಂತಸ ಉಂಟು ಮಾಡಿದೆ.
ಹತ್ತು ದಿನದಲ್ಲಿ ಭರ್ತಿ : ಮಳೆ ಹೀಗೆ ಮುಂದುವರೆದರೆ, ಕಬಿನಿ ಜಲಾಶಯ ಮುಂದಿನ ಹತ್ತುದಿನಗಳಲ್ಲಿ ಭರ್ತಿಯಾಗಲಿದೆ ಎಂದು ಜಲಾಶಯದ ಅಧೀಕ್ಷರ ಇಂಜಿನಿಯರ್ ಶಿವಮೂರ್ತಿ ಹೇಳಿದ್ದಾರೆ.
ಕೆಆರ್ಎಸ್ ನೀರಿನ ಮಟ್ಟ ಹೆಚ್ಚಳ : ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿಯುತ್ತಿರುವುದರಿಂದ ನಾಲ್ಕು ದಿನಗಳಲ್ಲಿ ಕೆಆರ್ಎಸ್ ಜಲಾಶಯಕ್ಕೆ 10 ಅಡಿ ನೀರು ಹರಿದು ಬಂದಿದೆ.
ಮಂಗಳವಾರ ಜಲಾಶಯದ ನೀರಿನ ಮಟ್ಟ 72.25 ಅಡಿಗೆ ಏರಿಕೆಯಾಗಿದೆ. ಜಲಾಶಯಕ್ಕೆ 11,968 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಲ್ಲಿ 124.80 ಅಡಿ ನೀರು ಸಂಗ್ರಹಿಸಬಹುದಾಗಿದೆ. ಕಾವೇರಿ ಪಾತ್ರದ ಜಲಾಶಯಗಳು ಭರ್ತಿಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.












Click it and Unblock the Notifications